kota;ತಾಯಿಗೆ ಊಟ ತರಲು ಹೋದ ಪುತ್ರ ಸಾವು
Team Udayavani, Jul 21, 2023, 11:10 PM IST
ಕೋಟ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಗೆ ಊಟ ತರಲು ರಿಕ್ಷಾದಲ್ಲಿ ಮನೆಗೆ ತೆರಳಿದ ಪುತ್ರ ಊಟದೊಂದಿಗೆ ವಾಪಸಾಗುವ ಸಂದರ್ಭ ರಿಕ್ಷಾದಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಕೋಟ ಸಮೀಪ ಮಣೂರಿನಲ್ಲಿ ಜು. 20ರಂದು ರಾತ್ರಿ ಸಂಭವಿಸಿದೆ.
ಪಾರಂಪಳ್ಳಿ ಪಡುಕರೆ ನಿವಾಸಿ ಪ್ರಕಾಶ ಪೂಜಾರಿ (41) ಮೃತರು. ಅವರ ತಾಯಿ ಕೊಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದರು.
ರಾತ್ರಿ ಊಟ ತರಲು ಕೋಟೇಶ್ವರದಿಂದ ಪಡುಕರೆಗೆ ರಿಕ್ಷಾದಲ್ಲಿ ಬಂದು ಊಟದೊಂದಿಗೆ ಹಿಂದಿರುಗುವ ವೇಳೆ ಹೊಂಡ ತಪ್ಪಿಸುವ ಭರದಲ್ಲಿ ರಿಕ್ಷಾ ಒಮ್ಮೆಲೆ ತಿರುಗಿಸಿದ ಪರಿಣಾಮ ಪ್ರಕಾಶ್ ಆಯತಪ್ಪಿ ಕೆಳಕ್ಕೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡರು. ತತ್ಕ್ಷಣ ಜೀವನಮಿತ್ರ ಆ್ಯಂಬುಲೆನ್ಸ್ನ ನಾಗರಾಜ್ ಪುತ್ರನ್ ಅವರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಪ್ರಕಾಶ್ ಮೃತಪಟ್ಟಿದ್ದಾರೆ.
ಅವರು ಅವಿವಾಹಿತರಾಗಿದ್ದು, ಬೋಟ್ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಪ್ರಕರಣದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.