ಮೂರು ಗ್ರಾಮ ಬೆಸೆವ ರಸ್ತೆಗೆ ಬೇಕು ಶೀಘ್ರ ಕಾಯಕಲ್ಪ
Team Udayavani, Feb 17, 2019, 12:30 AM IST
ವಿಶೇಷ ವರದಿ – ಮಣಿಪಾಲ: ಮರ್ಣೆ- ಕಟ್ಟಿಂಗೇರಿ ಮತ್ತು ಹಿರೇಬೆಟ್ಟು ಗ್ರಾಮಗಳನ್ನು ಬೆಸೆಯುವ, ನೂರಾರು ಜನರಿಗೆ ಪ್ರಯೋಜನವಾಗುವ ಕೇನೆಕುಂಜ-ಪೆರ್ಣಂಕಿಲ-ಗುಂಡುಪಾದೆ-ಜಡ್ಡುಕೆರೆ ಸಂಪರ್ಕ ರಸ್ತೆಗೆ ಶೀಘ್ರ ಕಾಯಕಲ್ಪ ದೊರಕಬೇಕಿದೆ.
ಕೇನೆಕುಂಜ ಜಡ್ಡುಕೆರೆವರೆಗೆ ಸುಮಾರು 4 ಕಿ.ಮೀ. ಕಚ್ಚಾ ರಸ್ತೆಯಲ್ಲಿ ನಡುವೆ ಸ್ವಲ್ಪ ಭಾಗ ಕಾಂಕ್ರಿಟ್ ಆಗಿದ್ದರೆ, ಜಡ್ಡುಕೆರೆ ಬಳಿ ಸ್ವಲ್ಪ ಭಾಗಕ್ಕೆ ಕಾಂಕ್ರೀಟ್ ಅಳವಡಿಸಲು ಜಲ್ಲಿ ಹಾಕಲಾಗಿದೆ. ಉಳಿದಂತೆ ಇಡೀ ರಸ್ತೆ ಕಚ್ಚಾ ರಸ್ತೆಯೇ ಆಗಿದ್ದು ಪಾದಚಾರಿಗಳು, ವಾಹನಗಳು ಇದರಲ್ಲೇ ಸಂಚರಿಸಬೇಕಿದೆ. ಗುಂಡುಪಾದೆಯಿಂದ ಪೆರ್ಣಂಕಿಲ ಹಳೆ ಶಾಲೆ ವರೆಗಿನ ರಸ್ತೆ (3 ಕಿ.ಮೀ.) ಸಂಪೂರ್ಣ ಕಳಪೆಯಾಗಿದೆ. ಮುಖ್ಯ ರಸ್ತೆಗಳನ್ನು ಕೂಡುವ ಈ ಒಟ್ಟು ಸುಮಾರು 7 ಕಿ.ಮೀ. ರಸ್ತೆ ಸ್ಥಳೀಯರ ಜೀವಾಳವಾಗಿದ್ದರೂ ಅವರ ಹಲವು ಸಮಯದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.
ಯಾರಿಗೆ ಅನುಕೂಲ?
ವಾಂಟಾರು, ಜಡ್ಡು, ಹೆಬ್ಟಾಗಿಲು, ಗುಂಡುಪಾದೆ, ಜೋಡುಕಟ್ಟೆ, ದಂಡೆಮಠ, ಕೇನೆಕುಂಜ, ಹಿರೇಬೆಟ್ಟು, ಮರ್ಣೆ, ಮತ್ತಿತರ ಊರುಗಳಿಗೆ ಈ ಕೂಡುರಸ್ತೆಯಿಂದ ಅನುಕೂಲವಿದೆ. ಈ ಪ್ರದೇಶದಲ್ಲಿರುವ 200ರಿಂದ 300 ಮನೆಗಳ ಜನರು ಇದರ ಶೀಘ್ರ ಕಾಯಕಲ್ಪದ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ರಸ್ತೆಯಾದಲ್ಲಿ ಬೇರೆ ಕಡೆಯವರೂ ಈ ರಸ್ತೆಯನ್ನು ಉಪಯೋಗಿಸಲು ಆರಂಭಿಸಬಹುದು.
ಸುತ್ತುವುದು ತಪ್ಪುತ್ತದೆ
ಕೂಡು ರಸ್ತೆ ಶೀಘ್ರ ಅಭಿವೃದ್ಧಿಯಾದಲ್ಲಿ ಜನರು ಸುತ್ತು ಬಳಸಿ ಹೋಗುವುದು ತಪ್ಪುತ್ತದೆ. ಪೆರ್ಣಂಕಿಲ ದೇವಸ್ಥಾನವು ಗ್ರಾಮದ ಹೃದಯ ಭಾಗದಲ್ಲಿದ್ದು, ಈಗ ಅಲ್ಲಿಗೆ ಹೋಗಲು ಹಿರೇಬೆಟ್ಟು, ಕೇನೆಕುಂಜ, ಮರ್ಣೆ, ಮೂಡುಬೆಳ್ಳೆಯವರೆಗೆ ಸುತ್ತು ಬರಬೇಕಿದೆ. ಈ ಯೋಜನೆ ಆದಲ್ಲಿ ನಾಲ್ಕು ಭಾಗಗಳಿಂದಲೂ ಕೇವಲ 1.5 ಕಿ.ಮೀ. ಅಂತರದಲ್ಲಿ ದೇವಸ್ಥಾನವನ್ನು ತಲುಪಬಹುದು. ಜತೆಗೆ ಇತರ ಭಾಗ ಗಳಿಗೂ ಸುತ್ತಿ ಬಳಸಿ ಹೋಗುವುದರ ಬದಲು ಈ ರಸ್ತೆಯಲ್ಲಿ ನೇರವಾಗಿ ಗಮ್ಯ ಸ್ಥಳವನ್ನು ತಲುಪಬಹುದು.
ಕೂಡುವ ಮುಖ್ಯ ರಸ್ತೆಗಳು
ಪಟ್ಲ-ಪೆರಣಂಕಿಲ, ಓಂತಿಬೆಟ್ಟು- ಅಂಗಾರಕಟ್ಟೆ, ಅಂಗಾರಕಟ್ಟೆ-ಬೆಳ್ಳೆ.
ಎರಡು ಸೇತುವೆ
ಈ ಕೂಡು ರಸ್ತೆಯಲ್ಲಿ ವಾಂಟಾರಿನಲ್ಲಿ ಮತ್ತು ದಂಡೆಮಠದಲ್ಲಿ ಕ್ರಮವಾಗಿ ನದಿ ಮತ್ತು ತೋಡಿಗೆ ಸೇತುವೆಗಳು ಇವೆ.
ದ್ವೀಪದಂತಿದ್ದ ಊರು
ವಾಂಟಾರು ಪರಿಸರ ಸುಮಾರು 10 ಮನೆಗಳಿಂದ ಕೂಡಿದ್ದು, ಅವರಿಗೆ ಯಾವ ದಿಕ್ಕಿನಿಂದಲೂ ಸಂಪರ್ಕ ಇಲ್ಲದೆ ದ್ವೀಪದಂತಿತ್ತು. 2012ರಲ್ಲಿ ಸೇತುವೆ ಹಾಗೂ ರಸ್ತೆ ಮೂಲಕ ಆ ಭಾಗ ಮುಖ್ಯವಾಹಿನಿಗೆ ಬರುವಂತಾಗಿತ್ತು.
ಸಿಆರ್ಎಫ್ ಗೆ ಪ್ರಸ್ತಾವನೆ
ಇತ್ತೀಚೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಈ ರಸ್ತೆ ಅಭಿವೃದ್ಧಿಗೆ ಸಿಆರ್ಎಫ್ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಅನುಮೋದನೆ ಯಾದಲ್ಲಿ 5 ಮೀಟರ್ ಅಗಲ ಮತ್ತು ಚರಂಡಿಯನ್ನು ಒಳಗೊಳ್ಳುವ ರಸ್ತೆ ನಿರ್ಮಾಣವಾಗಲಿದೆ.
ಏನೇನು ಅನುಕೂಲ?
– ಮುಖ್ಯ ರಸ್ತೆಗಳಿಗೆ ನೇರ ಸಂಪರ್ಕ
– ಮನೆಗಳಿಗೆ ಸಂಪರ್ಕ ರಸ್ತೆ
– 5-6 ಕಿ.ಮೀ. ಉಳಿತಾಯ
– ಗ್ರಾ.ಪಂ. ಕಚೇರಿ, ಶಾಲೆ,ಆರೋಗ್ಯ ಕೇಂದ್ರಗಳಿಗೆ ನೇರ ಸಂಪರ್ಕ
– ಪೆರ್ಣಂಕಿಲ ಆರೋಗ್ಯ ಕೇಂದ್ರ,ಶಾಲೆ, ಮೊರಾರ್ಜಿ ವಸತಿ ಶಾಲೆ,ಪಟ್ಲ ಶಾಲೆ,ಕುದಿ ಶಾಲೆ, ಗ್ರಾಪಂ. ಕಚೇರಿಗಳು.
ಅನುದಾನಕ್ಕೆ ಪ್ರಸ್ತಾವನೆ
ಕೇಂದ್ರ ಮೀಸಲು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕೇಂದ್ರ ಸಚಿವರಿಂದ ಧನಾತ್ಮಕ ಸ್ಪಂದನೆ ದೊರೆತಿದೆ.
– ಲಾಲಾಜಿ ಆರ್. ಮೆಂಡನ್,ಕಾಪು ಶಾಸಕ