ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಳವು
Team Udayavani, Jun 20, 2022, 12:25 AM IST
ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬದಿಂದ 15,000 ರೂ. ಹಾಗೂ 500 ರೂ. ಬೆಲೆಬಾಳುವ ಬೆಳ್ಳಿಯ 2 ತಟ್ಟೆಗಳನ್ನು ಶನಿವಾರ ರಾತ್ರಿ ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳ್ಳರು ಧ್ವಜಸ್ತಂಭದ ಮೇಲೇರಿ ದೇಗುಲದ ಒಳಗೆ ಪ್ರವೇಶಿಸಿದ್ದು, ಹೊರ ಹೋಗುವಾಗ ಪಶ್ಚಿಮದ ಮುಖ್ಯದ್ವಾರ ತೆರೆದುಕೊಂಡು ಹೋಗಿದ್ದಾರೆ.
ಶ್ರೀ ಗಣಪತಿ ದೇವರ ಗುಡಿಯ ಒಳಗೆ ಪ್ರವೇಶಿಸಿದ ಕಳ್ಳರು ಗಣಪತಿಯ ಶಿಲಾಮೂರ್ತಿಯ ಮುಖವಾಡಕ್ಕೆ ಇಡಲಾದ ಪಂಚಲೋಹದ ತಗಡು ಹಾಗೂ ಪಾಣಿಪೀಠದ ಕವಚಗಳನ್ನು ತೆಗೆದು ಅಲ್ಲೇ ಬಿಟ್ಟು ಹೋಗಿದ್ದಾರೆ.
ದ್ವಾರದಲ್ಲಿದ್ದ ಎರಡು ಲಾಕರ್ ಕಾಣಿಕೆ ಡಬ್ಬಿಯನ್ನು ಒಡೆಯಲು ಯತ್ನಿಸಿದ್ದು ಕಂಡು ಬಂದಿದೆ. ದೇಗುಲದ ಕಚೇರಿಯ ಬೀರುವನ್ನು ಮುರಿದು ಜಾಲಾಡಿದ್ದಾರೆ. ಅಲ್ಲಿಂದ ಎರಡು ಬೆಳ್ಳಿಯ ತಟ್ಟೆಗಳನ್ನು ಕಳವು ಮಾಡಿದ್ದಾರೆ.
ದೇಗುಲದ ಸಹ ಅರ್ಚಕ ರಾಜಾರಾಮ್ ಭಟ್ ಅವರು ಬೆಳಗ್ಗೆ ದೇಗುಲಕ್ಕೆ ಬಂದಾಗ ಬಾಗಿಲು ತೆರೆದಿದ್ದು, ಕಳ್ಳತನವಾದ ಕುರಿತು ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.