Udupi: ಬಾಲಕಿಯ ಚಿನ್ನದ ಸರ ಸುಲಿಗೆ
Team Udayavani, Jan 20, 2024, 12:38 AM IST
ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗೆ ತಾಯಿಯೊಂದಿಗೆ ಆಗಮಿಸಿದ್ದ ಬಾಲಕಿಯೊಬ್ಬಳ ಚಿನ್ನದ ಸರವನ್ನು ಅಪರಿಚಿತರಿಬ್ಬರು ಸುಲಿಗೆ ಮಾಡಿರುವ ಘಟನೆ ಜ. 18ರಂದು ಸಂಜೆ ವೇಳೆ ನಡೆದಿದೆ.
ಕೊರಂಗ್ರಪಾಡಿ ವಾಸುಕಿ ನಗರದ ಶರೀನಾ ಬೇಗಂ ಅವರು ತನ್ನ ಪುತ್ರಿ ಅನ್ಹಾ (4) ಜತೆಗೆ ರಥಬೀದಿಗೆ ಬಂದಿದ್ದು, ಕನಕ ಗೋಪುರದ ಹತ್ತಿರವಿರುವ ಅಂಗಡಿಯಲ್ಲಿ ಸಾಮಗ್ರಿಗಳನ್ನು ನೋಡುತ್ತಿದ್ದಾಗ 30-35 ವರ್ಷದ ಪ್ರಾಯದ ಅಪರಿಚಿತರಿಬ್ಬರು, ಅನ್ಹಾ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಳವಾದ ಚಿನ್ನದ ಸರದ ಮೌಲ್ಯ 50,000 ರೂ. ಎಂದು ಅಂದಾಜಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.