ಉಡುಪಿ: ಪಲಿಮಾರು ಶ್ರೀ ಪುರಪ್ರವೇಶ
Team Udayavani, Jan 4, 2018, 6:45 AM IST
ಉಡುಪಿ: ಭಾವಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪುರ ಪ್ರವೇಶವು ಜ. 3ರಂದು ಕಿನ್ನಿಮೂಲ್ಕಿಯ ಜೋಡುಕಟ್ಟೆಯಲ್ಲಿ ನೆರವೇರಿತು. ಅಲಂಕೃತಗೊಂಡ ತೆರೆದ ವಾಹನದಲ್ಲಿ ಅದಮಾರಿನಿಂದ ಅಪರಾಹ್ನ 4 ಗಂಟೆಯ ಸುಮಾರಿಗೆ ಶ್ರೀಗಳು ಜೋಡುಕಟ್ಟೆಗೆ ಆಗಮಿಸಿದರು.
ಜೋಡುಕಟ್ಟೆಯಲ್ಲಿ ಶ್ರೀಗಳು ದೇವರಿಗೆ ಪೂಜೆ ನೆರವೇರಿಸಿ ಕೆಲ ಹೊತ್ತು ಕುಳಿತು ಮೆರವಣಿಗೆ ವೀಕ್ಷಿಸಿದರು. ಅನಂತರ ದೇವರ ಪಲ್ಲಕ್ಕಿಯು ಮೆರವಣಿಗೆಯಲ್ಲಿ ಸಾಗಿದ್ದು, ಅದರ ಹಿಂಬದಿಯಲ್ಲಿ ವಿಶೇಷ ಅಲಂಕೃತ ರಥದಲ್ಲಿ ಪಲಿಮಾರು ಶ್ರೀಗಳು ಶ್ರೀಕೃಷ್ಣ ಮಠದತ್ತ ತೆರಳಿದರು.
ಶೋಭಾಯಾತ್ರೆಯಲ್ಲಿ ಗಣ್ಯರು ಮಹಾರಾಷ್ಟ್ರ ಶೈಲಿಯ ಪೇಟಾ ತೊಟ್ಟಿದ್ದರು. ಅದಮಾರಿನಿಂದ ಉಡುಪಿಗಾಗಮಿಸುವ ವೇಳೆ ವಿವಿಧ ಸ್ಥಳಗಳಲ್ಲಿ ಶ್ರೀಪಾದರನ್ನು ಸ್ವಾಗತಿಸಿ ಮಾಲಾರ್ಪಣೆ ಮಾಡಲಾಯಿತು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಯ ಡಾ| ಎಂ. ಮೋಹನ ಆಳ್ವ ಅವರ ನೇತೃತ್ವದ ಆಕರ್ಷಕ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಪೌರಾಯುಕ್ತ ಮಂಜುನಾಥಯ್ಯ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಡಾ| ಸೀತಾರಾಮ ಆಳ್ವ ಮುಂಬಯಿ, ಸುಧಾಕರ ಆಚಾರ್ಯ ಉಡುಪಿ ಮತ್ತಿತರ ಗಣ್ಯರು ಜೋಡುಕಟ್ಟೆಯಲ್ಲಿ ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಶ್ರೀಕೃಷ್ಣ ಮಠಕ್ಕಾಗಮಿಸಿದ ಪಲಿಮಾರು ಶ್ರೀಗಳು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನಗೈದು, ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರನ ಸನ್ನಿಧಿಗೂ ತೆರಳಿ ಶ್ರೀ ದೇವರಿಗೆ ನಮಿಸಿದರು.