Udupi; ಪಿಕಪ್ ಢಿಕ್ಕಿ: ಸ್ಕೂಟರ್ ಸವಾರ ಸಾವು
Team Udayavani, Jan 21, 2024, 11:15 PM IST
ಉಡುಪಿ: ಕಿನ್ನಿಮೂಲ್ಕಿ ಸಮೀಪ ಅಂಬಲಪಾಡಿ ಗ್ರಾಮದ ನಿಸರ್ಗ ಫ್ರೆಶ್ ಆಯಿಲ್ ಎದುರು ಪಿಕಪ್ ವಾಹನ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಜ. 20ರ ರಾತ್ರಿ ಸಂಭವಿಸಿದೆ.
ಹಾವಂಜೆಯ ರಾಕೇಶ್ (27) ಮೃತಪಟ್ಟವರು. ಕೆಲಸದ ನಿಮಿತ್ತ ಕಟಪಾಡಿಗೆ ಹೋದವರು ರಾತ್ರಿ ಮರಳಿ ಬರುತ್ತಿರುವಾಗ ರಾ.ಹೆ. 66ನೇ ರಸ್ತೆಯಲ್ಲಿ ಅಪಘಾತ ಸಂಭವಿಸಿತು. ರಾಕೇಶ್ ಅವರ ತಲೆಯು ಬೊಲೆರೋ ವಾಹನದ ಮುಂಭಾಗದ ಗಾಜಿಗೆ ತಾಗಿ ರಸ್ತೆಯ ಮೇಲೆ ಬಿದ್ದವನ ಮೇಲೆಯೇ ವಾಹನ ಸಾಗಿದ ಪರಿಣಾಮ ಎದೆಗೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು.
ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ಸಹಿತ ಸ್ಥಳೀಯರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಢಿಕ್ಕಿ: ಗಾಯ
ಉಡುಪಿ: ಕಿನ್ನಿಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಬಲಾಯಿಪಾದೆಯಿಂದ ಅಂಬಲ ಪಾಡಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಸವಾರ ಶೇಕ್ ಆಸಿಫ್ ಗಾಯಗೊಂಡಿದ್ದಾರೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.