ಆನ್ಲೈನ್ ಉದ್ಯೋಗ, ತರಬೇತಿ: ವಂಚನೆ; ದೂರು
Team Udayavani, Feb 9, 2019, 12:30 AM IST
ಉಡುಪಿ: ಆನ್ಲೈನ್ ಮೂಲಕ ಉದ್ಯೋಗ ಮತ್ತು ತರಬೇತಿ ನೀಡುವುದಾಗಿ ಹೇಳಿ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಓರ್ವರು ಶುಕ್ರವಾರ ಜರಗಿದ ಪೊಲೀಸ್ ಫೋನ್-ಇನ್ನಲ್ಲಿ ಮನವಿ ಮಾಡಿದ್ದಾರೆ.
“ಆನ್ಲೈನ್ನಲ್ಲಿ ಡಾಟಾ ಎಂಟ್ರಿ ಬಗ್ಗೆ ಉದ್ಯೋಗ ನೀಡುತ್ತೇವೆ. ಅದಕ್ಕೆ ಬೇಕಾದ ತರಬೇತಿಯನ್ನು ಕೂಡ ಕೊಡುತ್ತೇವೆ. ತರಬೇತಿಗಾಗಿ ನಿರ್ದಿಷ್ಟ ಹಣ ಪಾವತಿ ಮಾಡಬೇಕು ಎಂದು ಹೇಳಿದ್ದರು. ಅದರಂತೆ 3,900 ರೂ. ಪಾವತಿಸಿದ್ದೇನೆ. ಅನಂತರ ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ತರಬೇತಿಯನ್ನಾಗಲಿ ಉದ್ಯೋಗವನ್ನಾಗಲಿ ನೀಡಿಲ್ಲ’ ಎಂದು ಕರೆ ಮಾಡಿದವರು ದೂರಿದರು. ಈ ಬಗ್ಗೆ ಸೆನ್ ಪೊಲೀಸರಿಗೆ ದೂರು ನೀಡುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.
ಪಿಜಿಯಿಂದ ಸಮಸ್ಯೆ
ಮಹಿಳೆಯೋರ್ವರು ಕರೆ ಮಾಡಿ “ನಗರದ ಕಾಲೇಜೊಂದರ ಬಳಿ ಒಂದೇ ಕಟ್ಟಡದಲ್ಲಿ ಹುಡುಗ ಮತ್ತು ಹುಡುಗಿಯರ ಪಿಜಿಗಳಿವೆ. ಕೆಲವು ಹುಡುಗರು ಬೈಕ್ನಲ್ಲಿ ಬಂದು ಹುಡುಗಿಯರನ್ನು ಬಿಟ್ಟು ಹೋಗುತ್ತಾರೆ. ಇದು ಪರಿಸರದಲ್ಲಿ ಮುಜುಗರ ಸೃಷ್ಟಿಸುತ್ತಿದೆ. ಅನೈತಿಕವಾಗಿ ನಡೆದುಕೊಳ್ಳುವ ಆತಂಕವೂ ಇದೆ’ ಎಂದು ಹೇಳಿದರು.
ಆರೋಗ್ಯ ಕೇಂದ್ರ ಬಂದ್
ಪಡುಕರೆ ಪ್ರಾಥಮಿಕ ಆರೋಗ್ಯ ಕೇಂದ್ರ 1 ವರ್ಷದಿಂದ ಬಂದ್ ಆಗಿದೆ. ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಲ್ಪೆ-ಪಡುಕರೆ ರಸ್ತೆಯಲ್ಲಿ ದಾರಿದೀಪ ಇಲ್ಲದೆ ಸಮಸ್ಯೆಯಾಗಿದೆ. ರಸ್ತೆ ಬದಿ ಹುಲ್ಲು ಬೆಳೆದು ತೊಂದರೆಯಾಗಿದೆ ಎಂದು ಸ್ಥಳೀಯರೋರ್ವರು ಕರೆ ಮಾಡಿ ಅಹವಾಲು ಸಲ್ಲಿಸಿದರು.
ವಿರುದ್ಧ ದಿಕ್ಕಿನಲ್ಲಿ ಬಂದ ವಾಹನಗಳ ವಶ
ರಾಷ್ಟ್ರೀಯ ಹೆದ್ದಾರಿ 66ರ ಸುಪ್ರೀಂ ಫೀಡ್ಸ್ ಬಳಿ, ಕೃಷ್ಣಾ ಮಿಲ್ಕ್ ಡೇರಿ, ಹ್ಯಾಂಗ್ಯೋ ಐಸ್ಕ್ರೀಂ ಮೊದಲಾದೆಡೆಗಳಿಂದ ಘನವಾಹನಗಳು ಕೂಡ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ ಎಂದು ಓರ್ವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು “ಈ ರೀತಿ ಸಂಚರಿಸುವ ಕೆಲವು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿಸಲಾಗುವುದು’ ಎಂದು ಹೇಳಿದರು.
ಎಸ್ಪಿ ಲಕ್ಷ್ಮಣ ಬ.ನಿಂಬರಗಿ ಮತ್ತು ಎಎಸ್ಪಿ ಕುಮಾರಚಂದ್ರ ಅವರು ಫೋನ್-ಇನ್ ಕಾರ್ಯಕ್ರಮ ನಡೆಸಿಕೊಟ್ಟರು.
ಇತರ ದೂರು-ಕರೆಗಳು
– ಉಪ್ಪುಂದ ಶಾಲೆಬಾಗಿಲು ಎಂಬಲ್ಲಿ ಮೂಗಿಯೋರ್ವರಿಂದ ಸಮಸ್ಯೆಯಾಗಿದೆ.
– ಉಡುಪಿ ನಾರ್ತ್ ಶಾಲೆ ಸಮೀಪದ ಕಾಳಿಂಗ ಮರ್ದನ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಿ ಅಳವಡಿಸಿದ ಬ್ಯಾರಿಕೇಡ್ ತೆರವುಗೊಳಿಸಿರುವುದರಿಂದ ತೊಂದರೆಯಾಗಿದೆ.
– ಮಂದಾರ್ತಿ ಅಲ್ತಾರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.
– ಉಡುಪಿ ನಗರದ ಮಸೀದಿ ಬಳಿ ಪುಟ್ಪಾತ್ನಲ್ಲಿಯೇ ವ್ಯಾಪಾರ ನಡೆಯುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
– ಕೆರಾಡಿ ಪರಿಸರದ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.
– ಉಡುಪಿಯಿಂದ ಶಿರ್ವ-ಬೆಳ್ಮಣ್ ಕಡೆಗೆ ಹೋಗುವ ಬಸ್ಗಳು ಉದ್ಯಾವರ ಪೇಟೆಗೆ ಬಾರದೆ ಹೆದ್ದಾರಿಯಲ್ಲಿಯೇ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಗೆ ತೊಂದರೆಯಾಗಿದೆ.
– ಬ್ರಹ್ಮಾವರ ಆಕಾಶವಾಣಿ ಬಳಿ ರಸ್ತೆಯಲ್ಲಿ ಕಾರೊಂದು ಹಲವು ಸಮಯದಿಂದ ರಿಪೇರಿ ಸ್ಥಿತಿಯಲ್ಲಿಯೇ ಇದೆ.
– ಬ್ರಹ್ಮಾವರದ ಧರ್ಮಾವರ ಬಳಿ ಸರ್ವೀಸ್ ರಸ್ತೆಯಲ್ಲಿ ಎಕ್ಸ್ಪ್ರೆಸ್ ಬಸ್ಗಳ ಓಡಾಟದಿಂದ ತೊಂದರೆಯಾಗಿದೆ.
– ನಗರದ ಕೆಲವೆಡೆ ಬಸ್ ನಿಲುಗಡೆ ಇಲ್ಲದ ಸ್ಥಳಗಳಲ್ಲಿಯೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ.
– ಕಲ್ಸಂಕ ಹಾಗೂ ಕರಾವಳಿ ಜಂಕ್ಷನ್ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕು.
– ಕಾರ್ಕಳ ತಾಲೂಕಿನ ಗ್ರಾ.ಪಂ.ವೊಂದರ ಪಿಡಿಒ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
– ಅಲೆವೂರು ಕ್ರೈಸ್ಟ್ ಶಾಲೆಯ ಬಳಿ ಹಲವು ಸಮಯದಿಂದ ಬಸ್ವೊಂದು ನಿಂತಿದೆ. ಇದರಿಂದ ಸಂಚಾರಕ್ಕೆ ತೊಡಕಾಗಿದೆ.
– ಆದಿ ಉಡುಪಿ ಸಂತೆ ಮಾರುಕಟ್ಟೆ ಬಳಿ ಮಾರುಕಟ್ಟೆಯಿಂದ ಹೊರಗೆ ರಸ್ತೆ ಬದಿ ವ್ಯಾಪಾರ ನಡೆಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
– ಮಣಿಪಾಲದ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಬೀಡಿ, ಸಿಗರೇಟುಗಳನ್ನು ಮಾರಾಟ ಮಾಡಲಾಗುತ್ತಿದೆ.
– ಅಂಗವಿಕಲರಿಗೆ ಬಸ್ಗಳಲ್ಲಿ ಮೀಸಲಿಟ್ಟಿರುವ ಆಸನವನ್ನು ಅವರಿಗೆ ನೀಡುವಂತೆ ಕ್ರಮ ಕೈಗೊಳ್ಳಬೇಕು.