ಭಟ್ಕಳ ತಾಲೂಕಿನಲ್ಲಿ ಮೇಘ ಸ್ಫೋಟ : ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಸಿಲುಕಿರುವ ಶಂಕೆ
ಜೆಸಿಬಿ. ಮೂಲಕ ಮಣ್ಣು ತೆಗೆಯುವ ಕಾರ್ಯಚರಣೆ
Team Udayavani, Aug 2, 2022, 10:08 AM IST
ಭಟ್ಕಳ: ತಾಲೂಕಿನಲ್ಲಿ ರಾತ್ರಿಯಿಂದ ಮೇಘ ಸ್ಪೋಟ ಸಂಭವಿಸಿದ ಪರಿಣಾಮ ಸಾವಿರಾರು ಮನೆಗಳು ಜಲಾವೃತವಾಗಿದ್ದು, ಮುಟ್ಟಳ್ಳಿಯಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ನಾಲ್ವರು ಅಪಾಯಕ್ಕೆ ಸಿಲುಕಿರುವ ಘಟನೆ ವರದಿಯಾಗಿದೆ.
ಮುಟ್ಟಳ್ಳಿಯಲ್ಲಿ ಗುಡ್ಡವೊಂದು ಕುಸಿದು ಮನೆಯ ಮೇಲೆಯೇ ಬಿದ್ದ ಪರಿಣಾಮ ಮನೆಯೊಳಗಿದ್ದ ಲಕ್ಷೀ ನಾರಾಯಣ ನಾಯ್ಕ (48), ಅನಂತ ನಾರಾಯಣ ನಾಯ್ಕ (32), ಲಕ್ಷ್ಮೀ ನಾಯ್ಕ (33), ಪ್ರವೀಣ ಬಾಲಕೃಷ್ಣ ನಾಯ್ಕ (20) ಮನೆಯೊಳಗೆ ಸಿಲುಕಿರುವ ಕುರಿತು ವರದಿಯಾಗಿದೆ. ಗುಡ್ಡ ಕುಸಿದ ತಕ್ಷಣ ಸ್ಥಳೀಯರು ತೆರವುಗೊಳಿಸುವ ಕಾರ್ಯಾಚರಣೆ ಆರಂಭ ಮಾಡಿದ್ದು ನಂತರ ಜೆ.ಸಿ.ಬಿ. ಮೂಲಕ ಮಣ್ಣು ತೆಗೆಯುವ ಕಾರ್ಯ ಮಾಡಲಾಗುತ್ತಿದೆ.
ರಾತ್ರಿಯಿಂದಲೇ ಮನೆಗಳಿಗೆ ನೀರು ನುಗ್ಗಲು ಆರಂಭವಾಗಿದ್ದು ಎಲ್ಲೆಡೆ ಆತಂಕದ ವಾತಾವರಣ ಆರಂಭವಾಗಿತ್ತು. ಗ್ರಾಮೀಣ ಭಾಗದಲ್ಲಿ ಹಲವೆಡೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ತೋಟ ಪಟ್ಟಿಗಳು ಕೊಚ್ಚಿಕೊಂಡು ಹೋಗಿದ್ದರೆ, ಅನೇಕ ಮನೆಗಳವರು ಮನೆಯಿಂದ ಹೊರಕ್ಕೆ ಬರಲಾಗದೇ ಒದ್ದಾಡಿದ ಪ್ರಸಂಗ ಸಹ ನಡೆಯಿತು. ನಂತರ ಅಕ್ಕ ಪಕ್ಕದವರು ಸಾಹಸ ಮಾಡಿ ಮನೆಯವರನ್ನು ಹೊರಕ್ಕೆ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ತಾಲೂಕಿನ ಬೆಳ್ನಿ, ಮಾವಿನಕುರ್ವೆ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಂದ ಪ್ರಯುಕ್ತ ಜನ ಭಯಭೀತರಾಗಿದ್ದು, ಯುವಕರ ತಂಡ ಅಪಾಯದಲ್ಲಿದ್ದವರ ರಕ್ಷಣೆಗೆ ಧಾವಿಸಿದೆ. ಶಿರಾಲಿ, ಮಾವಿನಕಟ್ಟೆ, ಮುರ್ಡೇಶ್ವರ ಭಾಗದಲ್ಲಿ ಸಹ ನೀರು ನಿಂತು ಅನೇಕ ಮನೆಗಳು ಜಲಾವೃತವಾಗಿವೆ. ಮನೆಯ ಮುಂದೆ ನಿಲ್ಲಿಸಿಟ್ಟ ಕಾರುಗಳು ನೀರಿನಲ್ಲಿ ತೇಲಾಡುತ್ತಿರುವುದು ಮಳೆಯ ತೀವ್ರತೆಗೆ ಸಾಕ್ಷಿಯಾಗಿದೆ. ಶಿರಾಲಿಯ ಸಾರದಹೊಳೆ ಕೋಟೆ ಶ್ರೀ ಹನುಮಂತ ದೇವಸ್ಥಾನದ ಸುತ್ತಮತ್ತಲ ಪ್ರದೇಶದಲ್ಲಿ ಆರರಿಂದ ಎಂಟು ಅಡಿಗಳಷ್ಟು ನೀರು ನಿಂತಿದ್ದು ಬೆಳಿಗ್ಗೆ 5 ಗಂಟೆಗೆ ಯೋಗ ತರಗತಿಗೆ ಬಂದಿದ್ದ ಹಲವರು ಅಲ್ಲಿಯೇ ಸಿಲುಕಿ ಹಾಕಿಕೊಂಡಿರುವ ಕುರಿತು ವರದಿಯಾಗಿದೆ. ಪಕ್ಕದಲ್ಲಿಯೇ ಇದ್ದ ಎರಡು ಅಕ್ಕಿ ಗಿರಣಿಗಳು ನೀರಿನಿಂದಾವೃತವಾಗಿದ್ದು ಸಾವಿರಾರು ಕ್ವಿಂಟಾಲ್ ಅಕ್ಕಿ, ಭತ್ತಗಳು ನೀರಿನಲ್ಲಿ ಮುಳುಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ನೀರಕಂಠದಲ್ಲಿ ಸಹ ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಂದರಲ್ಲಿ ಸಿಲುಕಿದ್ದ ವೃದ್ಧ ದಂಪತಿಗಳನ್ನು ಗ್ರಾಮಸ್ಥರೇ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಹಲವೆಡೆ ಬಂದ್ ಇದ್ದು ಮೂಡಭಟ್ಕಳ, ರಂಗೀಕಟ್ಟೆ, ಶಿರಾಲಿ, ಮಾವಿನಕಟ್ಟೆಗಳಲ್ಲಿ ಹೆದ್ದಾರಿಯ ಮೇಲೆ ಸುಮಾರು 4 ರಿಂದ 5 ಅಡಿಗಳಷ್ಟು ನೀರು ನಿಂತಿದ್ದು ವಾಹನಗಳು ಓಡಾಡುವುದಕ್ಕೇ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಮುಖ್ಯ ರಸ್ತೆಗಳಲ್ಲಿರುವ ಇಕ್ಕೆಲಗಳ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಹೆಚ್ಚಾಗಿ ಬಟ್ಟ ಅಂಗಡಿಗಳು, ಕಿರಾಣಿ ಅಂಗಡಿಗಳು, ಚಪ್ಪಲಿ ಅಂಗಡಿಗಳೇ ಇರುವುದರಿಂದ ಅಪಾರ ಹಾನಿ ಸಂಭವಿಸಿದೆ.
ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಸೇರಿದಂತೆ ನೋಡಲ್ ಅಧಿಕಾರಿಗಳು ರಾತ್ರಿಯಿಂದ ಎಲ್ಲಾ ಅಪಾಯಕಾರಿ ಸ್ಥಳಗಳಿಗೆ ಭೇಟಿ ಮಾಡಿ ಜನರನ್ನು ಸುರಕ್ಷತ ಸ್ಥಳಗಳಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶಾಸಕ ಸುನಿಲ್ ನಾಯ್ಕ ಅವರು ಸಹ ತಮ್ಮ ಕಾರ್ಯಕರ್ತರೊಂದಿಗೆ, ಪಶ್ಚಿಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಸಹ ತಮ್ಮ ಕಾರ್ಯಕರ್ತರೊಂದಿಗೆ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಎನ್.ಡಿ.ಆರ್.ಎಫ್. ತಂಡವೊಂದು ಭಟ್ಕಳಕ್ಕೆ ಬರುತ್ತಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಅನುಕೂಲವಾಗಲಿದೆ. ಅಗ್ನಿಶಾಮಕ ದಳದವರು ರಾತ್ರಿಯಿಂದಲೇ ಶ್ರಮಿಸುತ್ತಿದ್ದು ಅನೇಕ ಕಡೆಗಳಲ್ಲಿ ಜನರ ರಕ್ಷಣೆಗೆ ಧಾವಿಸಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯದಲ್ಲಿದ್ದು, ಪುರಸಭಾ ಅಧಿಕಾರಿಗಳು, ಪೌರಕಾರ್ಮಿಕರು ಜನರ ರಕ್ಷಣೆಗೆ ಮುಂದಾಗಿದ್ದು ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ.
ನಗರದ ಚೌಥನಿ, ಮೂಢಭಟ್ಕಳ ಭಾಗದಲ್ಲಿ ಮನೆಗಳಲ್ಲಿ ಸುಮಾರು 4 ರಿಂದ 8 ಅಡಿಗಳಷ್ಟು ನೀರು ತುಂಬಿದ್ದು ಮನೆಗಳ ಎದುರಿಗೆ ನಿಲ್ಲಿಸಿಟ್ಟ ದ್ವಿಚಕ್ರವಾಹನಗಳು ಕಾರುಗಳು ನೀರಿನಲ್ಲಿ ತೇಲುತ್ತಿದ್ದು ಅತ್ತ ರಕ್ಷಣೆಯನ್ನು ಮಾಡಲಾಗದೆ ಮಾಲಕರು ಪರದಾಡುವ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಒಟ್ಟಾರೆ ಭಟ್ಕಳ ತಾಲೂಕಿನಲ್ಲಿ ಸುಮಾರು 50 ವರ್ಷಗಳಿಂದೀಚೆಗೆ ಇಂತಹ ಮಳೆಯನ್ನು ಕಂಡಿಲ್ಲ ಎನ್ನುವುದು ಹಿರಿಯರ ಅಂಬೋಣವಾಗಿದೆ. ಗ್ರಾಮೀಣ ಪ್ರದೇಶ ಸಂಪೂರ್ಣ ಸಮುದ್ರದೋಪಾದಿಯಲ್ಲಿ ಕಾಣುತ್ತಿದ್ದು ಎಲ್ಲೆಂದರಲ್ಲಿ ನೀರು ತುಂಬಿಕೊಂಡಿದೆ. ತಾಲೂಕಿನ ವೆಂಕಟಾಪುರ ನದಿ, ಸಾರದಹೊಳೆ, ಚೌಥನಿಹೊಳೆ, ಶರಾಬಿ ಹೊಳೆಗಳು ಸೇರಿದಂತೆ ಎಲ್ಲಾ ಹೊಳೆಗಳೂ ಉಕ್ಕಿ ಹರಿಯುತ್ತಿದ್ದು ಗದ್ದೆ, ತೋಟಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.