ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಿ : ಬಿ.ಎನ್.ವಾಸರೆ
Team Udayavani, Jun 22, 2022, 3:57 PM IST
ಶಿರಸಿ: ಗುರು ಹಿರಿಯರನ್ನು ಗೌರವಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಬುಧವಾರ ಇಲ್ಲಿನ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಕ.ಸಾ.ಪ. ಜಿಲ್ಲೆ ಹಾಗೂ ಶಿರಸಿ ತಾಲ್ಲೂಕು ಘಟಕ ಆಯೋಜಿಸಿದ್ದ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ ಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದು ಸುಲಭದ ಮಾತಲ್ಲ. ಅಂತಹ ಸಂದರ್ಭದಲ್ಲೂ ಕಷ್ಟ ಪಟ್ಟು ಓದಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಮೊದಲ ಬಾರಿಗೆ ಸಾಮೂಹಿಕ ಅಭಿನಂದನಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ನಡೆಸುತ್ತಿದ್ದೇವೆ ಎಂದರು.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಇಂದು ಸಾಹಿತ್ಯ ಪರಿಷತ್ ಬೆಳೆದಿದೆ. ಸಾಹಿತ್ಯ ಪರಿಷತ್ ನ ಧ್ಯೇಯೋದ್ದೇಶ ಗಳನ್ನು ಮನೆಮನೆಗೆ ಮನಮನಕ್ಕೆ ತಲುಪಿಸುವ ಕೆಲಸ ಸಾಹಿತ್ಯ ಪರಿಷತ್ ನಿಂದ ನಡೆಯುತ್ತಿದೆ ಎಂದರು.
ಗುರುಗಳನ್ನು ಗೌರವಿಸುವ ಅಥವಾ ಪ್ರೀತಿಸುವ ಮನಸ್ಥಿತಿ ವಿದ್ಯಾರ್ಥಿಗಳಿಂದ ದೂರವಾಗಿದೆ ಎನ್ನಿಸುತ್ತಿದೆ. ಗುರುಗಳನ್ನು ಗೌರವಿಸುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇದು ಆದರ್ಶ ವಿದ್ಯಾರ್ಥಿಗಳ ಲಕ್ಷಣವಾಗಿದೆ.
ತಂದೆ ತಾಯಿಗಳು ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ತಂದೆ ತಾಯಿಗಳನ್ನು ಪ್ರೀತಿ ಯಿಂದ ಗೌರವದಿಂದ ಕಾಣಬೇಕು. ಮನಸ್ಸು ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಇದರಲ್ಲಿ ಎಡವಿದರೆ ವಿದ್ಯಾರ್ಥಿಗಳು ದಾರಿತಪ್ಪುವ ಸಾಧ್ಯತೆ ಗಳು ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ಮಾನವೀಯತೆಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ನಡೆದರೆ ನಮ್ಮ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ. ಹೊರಗಿನ ಜ್ಞಾನಕ್ಕಾಗಿಯಾದರೂ ಪಠ್ಯೇತರ ಪುಸ್ತಕ ಗಳನ್ನು ಓದಬೇಕು ಎಂದರು.
ಇದನ್ನೂ ಓದಿ : ಉಡುಪಿ: ಮೆಹಂದಿ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಮಾತನಾಡಿ, ಕನ್ನಡದ ಉಳಿವಿನ ಕೆಲಸವನ್ನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮೂಲಕ ಮಾಡುತ್ತಿರುವ ಕೆಲಸ ಮಾದರಿಯಾಗಿದೆ. ಮಾತೃಭಾಷೆ ವ್ಯಕ್ತಿತ್ವ ರೂಪಿಸುವ ಜತೆಗೆ ಸಂಸ್ಕೃತಿ ಉಳಿಸುವ ಮಾಧ್ಯಮ. ಇದರಿಂದ ವಿದ್ಯಾರ್ಥಿಗಳು ವಿಮುಖವಾಗಬಾರದು ಎಂದರು.
ಕ.ಸಾ.ಪ. ಸಂಘ-ಸಂಸ್ಥೆಗಳ ಪ್ರತಿನಿಧಿ ವೆಂಕಟೇಶ ನಾಯ್ಕ ಮಾತನಾಡಿ, ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ವಿಸ್ತರಿಸಿಕೊಳ್ಳುತ್ತಿದೆ. ಇದರ ಭಾಗವಾಗಿ ಕನ್ನಡ ಭಾಷೆಯಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗಿದೆ ಎಂದರು.
ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೀಶ ಜೋಗಳೇಕರ, ಡಾ.ಸ್ವಾತಿ ವಿನಾಯಕ, ಕ.ಸಾ.ಪ. ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಪಟಗಾರ ಇದ್ದರು.
ಕ.ಸಾ.ಪ. ತಾಲ್ಲೂಕು ಘಟಕದ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಕೃಷ್ಣ ಪದಕಿ ನಿರೂಪಿಸಿದರು. ಇದೇ ವೇಳೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾ. ಸ್ವಾತಿ ವಿನಾಯಕ ಹಾಗೂ ಕಲಾವಿದೆ ತುಳಸಿ ಹೆಗಡೆ ಅವರನ್ನು ಅಭಿನಂದಿಸಲಾಯಿತು.