ಬಂದೂಕು ಪರವಾನಗಿ ನವೀಕರಣಕ್ಕೂ ತೊಂದ್ರೆ!
•ಇನ್ನೂ ತಪ್ಪಿಲ್ಲ ರೈತರ ಪರದಾಟ!•ಒಡೆಯಾ ಯಾವಾಗ ಬರ್ತಾನೆ ಅಂತ ಕಾಯ್ತಾ ಇವೆ
Team Udayavani, Jun 30, 2019, 12:22 PM IST
ಶಿರಸಿ: ಪೊಲೀಸ್ ಠಾಣೆಯಲ್ಲಿ ಇರುವ ಬಂದೂಕುಗಳು.
ಶಿರಸಿ: ಜಿಲ್ಲಾಧಿಕಾರಿಗಳ ಕಚೇರಿಗೆ ಬಂದೂಕು ನವೀಕರಣಕ್ಕೆ ಕಳಿಸಲಾದ ಲೈಸೆನ್ಸ್ ಇನ್ನೂ ನವೀಕರಣಗೊಂಡ ಪತ್ರ ಮರಳಿ ರೈತರಿಗೆ ತಲುಪದೇ ಇರುವ ಕಾರಣ ಸಾವಿರಾರು ರೈತರು ಇನ್ನೂ ಪೊಲೀಸ್ ಠಾಣೆಗಳಲ್ಲಿ ಇಟ್ಟ ಬೆಳೆ ರಕ್ಷಕ ಬದೂಕುಗಳನ್ನು ಮನೆಗೆ ಒಯ್ಯಲಾಗುತ್ತಿಲ್ಲ. ಮಂಗ, ಕಾಡು ಹಂದಿಗಳ ಕಾಟದಲ್ಲಿ ಅತ್ತ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. ಮನೆಗೊಂದು ಊರು, ಊರಿಗೊಂದು ಮನೆ. ಕಾಡಿನಲ್ಲಿ ಕೃಷಿ ಬದುಕು. ಇಂಥ ಮಲೆನಾಡಿನಲ್ಲಿ ಕಾಡು ಮೃಗಗಳ ಕಾಟ ಕೂಡ ಹೆಚ್ಚೇ. ಈ ಕಾರಣದಿಂದ ಸಿಂಗಲ್ ಹಾಗೂ ಡಬಲ್ ನಳಿಕೆ ಬಂದೂಕುಗಳನ್ನು ರೈತರಿಗೆ ನೀಡಲಾಗಿತ್ತು. ಅವರು ಅದನ್ನು ವನ್ಯ ಮೃಗಗಳನ್ನು ಹೆದರಿಸಲು, ಒಮ್ಮೆ ಕಾಟ ಜಾಸ್ತಿ ಮಾಡಿದರೆ ಗುಂಡು ಹೊಡೆದು ಓಡಿಸಲು ಬಳಸುತ್ತಿದ್ದರು. ಇದಕ್ಕೆ ಜಿಲ್ಲಾಡಳಿತ ಅನುಮತಿ ಕೂಡ ನೀಡಿತ್ತು. ಆಯಾ ಕಾಲದಲ್ಲಿ ಅದನ್ನು ಪುನಃ ನವೀಕರಣಗೊಳಿಸಬೇಕಾದುದು ಅಗತ್ಯವಾಗಿದೆ.
ರಕ್ಷಣೆಗೆ ಅನಿವಾರ್ಯ: ಬೆಳೆ ರಕ್ಷಣೆಗೆ ಬಂದೂಕು ಮಲೆನಾಡಿಗೆ ಅನಿವಾರ್ಯ. ಅಡಕೆ, ಬಾಳೆಗೊನೆ ಉಳಿಸಿಕೊಳ್ಳಲು ಮಂಗನ ಕಾಟ ತಪ್ಪಿಸಲು ಬಂದೂಕು ಬೇಕು. ಕಾಡು ಹಂದಿಗಳೂ ತೋಟಕ್ಕೆ ಕಾಡುತ್ತವೆ. ಕೇಶಳಿಲು ತೆಂಗಿನ ಕಾಯಿ ತಿಂದರೆ, ಕೊಕೋ ಕಾಯನ್ನು ಅಳಿಲು ತಿನ್ನುತ್ತವೆ.
ಇನ್ನೊಂದೆಡೆ ಕಬ್ಬಿನ ಬೇಸಾಯಕ್ಕೂ ನರಿಗಳ ಕಾಟ ಇದೆ. ಇವುಗಳಿಂದ ರಕ್ಷಣೆ ಪಡೆಯಲು ಹಾಗೂ ಕಾಡಿನ ನಡುವಿನ ಒಂಟಿ ಮನೆ ರಕ್ಷಣೆಗೂ ಇದು ಅಗತ್ಯವೇ. ಕುಟುಂಬದ ಯಜಮಾನ ಬಂದೂಕು ಬಳಕೆ ತರಬೇತಿ ಪಡೆದು ಅರ್ಜಿ ಹಾಕಿ ಲೈಸೆನ್ಸ್ ಪಡೆದು ಬಂದೂಕು ಖರೀದಿಸುತ್ತಿದ್ದನು.
ಬಂದೂಕಿಗೂ ಕಾಟ!:ಬೆಳೆ ಹಾಗೂ ಕಳ್ಳರ ರಕ್ಷಣೆಗೆ ಇಟ್ಟುಕೊಂಡ ಬಂದೂಕಿಗೂ ಕಾಟವಿದೆ. ಇದು ಬಹುತೇಕ ಕಾಡತೋಸಿನ ಬಂದೂಕಾಗಿದ್ದರಿಂದ ಹುಬ್ಬಳ್ಳಿಗೆ ಹೋಗಿ ಮದ್ದು ತರಸಿಕೊಳ್ಳಬೇಕು. ಒಮ್ಮೆ ಹುಬ್ಬಳ್ಳಿಗೆ ಲೈಸೆನ್ಸ್ ಸಹಿತ ಹೋದರೆ ಅಲ್ಲಿ 5ರಿಂದ 8 ಕಾಡತೋಸು ಕೊಟ್ಟರೂ ಹೆಚ್ಚೇ.
ಇನ್ನೊಂದೆಡೆ ವಿಧಾನ ಸಭೆ, ಲೋಕ ಸಭೆ ಚುನಾವಣೆ ಬಂದರೆ ನೀತಿ ಸಂಹಿತೆ ಆರಂಭದಿಂದ ಪೂರ್ಣ ಮುಗಿಯುವ ತನಕ ಪೊಲೀಸ್ ಠಾಣೆಗಳಲ್ಲಿ ಇಡಬೇಕಾಗುತ್ತದೆ. ರೈತರು ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದು ಬಂದು ಶಿರಸಿ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಪೇಟೆಗೆ ಹೋಗಿ ಠಾಣೆಯಲ್ಲಿಟ್ಟು ಬರಬೇಕು. ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಮತ್ತೆ ಠಾಣೆಗೆ ಹೋಗಿ ಪರವಾನಗಿ ತೋರಿಸಿ ವಾಪಸ್ ತರಬೇಕು. ಬಂದೂಕು ಇದ್ದರೂ ಬೆಳೆ ರಕ್ಷಣೆ ಕಾಲ ಆದರೂ ಠಾಣೆಯಲ್ಲಿ ಇಡಬೇಕಾದ ಕಾಟ ತಪ್ಪಿಲ್ಲ ಎನ್ನುತ್ತಾರೆ ಬಳಕೆದಾರರು.
ಅರ್ಜಿ ಕೊಟ್ಟಾಗಿತ್ತು!: ಬಂದೂಕು ನವೀಕರಣ ಮೊದಲು ತಹಶೀಲ್ದಾರ್ ಹಂತದಲ್ಲೇ ಮಾಡಲಾಗುತ್ತಿತ್ತು. ಅದು ಜಿಲ್ಲಾಧಿಕಾರಿಗಳ ಹಂತಕ್ಕೆ ಹೋಗಿದ್ದರಿಂದ ಈಗ ಸಮಸ್ಯೆ ಆಗಿದೆ. ಅನೇಕ ರೈತರು ಆರೇಳು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಇನ್ನೂ ನವೀಕರಣಗೊಂಡಿಲ್ಲ ಎಂಬ ಆರೋಪವಿದೆ. ನನ್ನದು ಡಿಸೆಂಬರ್ಗೆ ಅರ್ಜಿ ಕೊಟ್ಟು ನವೀಕರಣಕ್ಕೆ ಕೋರಿದ್ದರೂ ಇನ್ನೂ ಆಗಿಲ್ಲ ಎನ್ನುತ್ತಾರೆ ರೈತ ರಾಮಚಂದ್ರ.
ಡಿಸಿ ಕಚೇರಿಯಲ್ಲಿ ಇನ್ನೂ ಸಾವಿರಾರು ಆರ್ಜಿಗಳು ನವೀಕರಣಗೊಳ್ಳಬೇಕು ಎಂಬುದು ಅಧಿಕಾರಿಯೊಬ್ಬರ ಅಭಿಮತ. ಅದೂ ಆಗುತ್ತಿದೆ, ವಿಳಂಬ ಆಗಿದ್ದು ಹೌದು ಎಂದೂ ಹೇಳುತ್ತಾರೆ.
ಶಿರಸಿ ಉಪ ವಿಭಾಗದ ಪೊಲೀಸ್ ಠಾಣೆಯಲ್ಲೇ ಸಾವಿರದಷ್ಟು ರೈತರ ಬಂದೂಕುಗಳು ವಾಪಸ್ ಬಳಕೆದಾರರನ್ನು ತಲುಪಿಲ್ಲ. ಕಾರಣ ಇನ್ನೂ ಅವರಿಗೆ ಪರವಾನಗಿ ಬಂದಿಲ್ಲ ಎಂದೇ ಅರ್ಥ. ಬಂದೂಕು ಒಯ್ದಿಲ್ಲ ಎಂಬುದೂ ಪೊಲೀಸರ ತಲೆನೋವು.
•ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!
Mumbai: 45 ದಿನದಲ್ಲಿ 300 ಐಸ್ಕ್ರೀಂ ಆರ್ಡರ್ ಮಾಡಿದ!
Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ