‘ಉದಯವಾಣಿ’ ಸುವರ್ಣ ಸಂಪದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಸಚಿವ ಹೆಬ್ಬಾರ್
Team Udayavani, Aug 15, 2021, 9:20 PM IST
ಯಲ್ಲಾಪುರ: ತನ್ನದೇಯಾದ ವೈಶಿಷ್ಠ್ಯತೆಯೊಂದಿಗೆ ವಸ್ತುನಿಷ್ಠ ಬರವಣಿಗೆಯ ಮೂಲಕ ನಾಡಿನ ಜನಮನದ ಜೀವನಾಡಿಯಾದ ಉದಯವಾಣಿ ದಿನಪತ್ರಿಕೆ ಐವತ್ತರ ಸಂಭ್ರಮದಲ್ಲಿರುವುದು ತುಂಬಾ ಸಂತೋಷದ ವಿಷಯ ಎಂದು ಕಾರ್ಮಿಕ ಹಾಗೂ ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ದಿನವಾದ ಭಾನುವಾರ ಉದಯವಾಣಿ ಸುವರ್ಣ ಮಹೋತ್ಸವದ ಸುವರ್ಣ ಸಂಪದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮತ್ತು ಈ ಜಿಲ್ಲೆಯ ಜನ ಹೊರಗೆ ಎಲ್ಲೇ ಇದ್ದರೂ ಬೆಳಗಿನ ಟೀ ಪೂರ್ವದಲ್ಲಿ ಉದಯವಾಣಿ ನೋಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅಷ್ಟೊಂದು ರೀತಿಯಲ್ಲಿ ಉದಯವಾಣಿಯ ಓದುಗ ಪತ್ರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಉತ್ಪ್ರೇಕ್ಷಿತ ಸುದ್ದಿಗಳತ್ತ ಗಮನಕೊಡದೇ ವಸ್ತುನಿಷ್ಠ ವರದಿಯ ಮೂಲಕ ಜೊತೆಗೆ ಯಾರ ತೇಜೋವಧೆಯನ್ನೂ ಮಾಡದೇ ಪತ್ರಿಕೆ ತನ್ನ ಚರಿತ್ರೆಯನ್ನು ಉಳಿಸಿ ನಡೆಸಿಕೊಂಡು ಬಂದಿದೆ. ನಾನೊಬ್ಬ ಖಾಯಂ ಓದುಗನಾಗಿ ತೇಜೋವಧಯ ಸಂಗತಿಗಳನ್ನು ಕಂಡಿಲ್ಲ.ಇಂತಹ ಶುದ್ದತೆ ಮತ್ತು ಬದ್ದತೆಯೊಂದಿಗೆ ಸಾಗಿ ಬಂದ ಪತ್ರಿಕೆ ಐವತ್ತರ ಹೊಸ್ತಿಲಲ್ಲಿರುವುದು ತುಂಬಾ ಸಂತೋಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ವನಜಾಕ್ಷಿ ಹೆಬ್ಬಾರ್, ಉತ್ತರಕನ್ನಡ ಜಾಹಿರಾತು ಎಕ್ಷಿಕ್ಯೂಟಿವ್ ಗುರುಪ್ರಸಾದ ಭಟ್ಟ,ಉದಯವಾಣಿ ಯಲ್ಲಾಪುರ ಪ್ರತಿನಿಧಿ ನರಸಿಂಹ ಸಾತೊಡ್ಡಿ, ಶಿರಸಿ ಪ್ರತಿನಿಧಿ ರಾಘವೇಂದ್ರ ಬೆಟಕೊಪ್ಪ ಹಾಜರಿದ್ದರು.