ಸೀಬರ್ಡ್ ರಸ್ತೆ ನಿರ್ಮಾಣಕ್ಕೆ ಆಕ್ಷೇಪ
ಸೀಬರ್ಡ್ ನೌಕಾನೆಲೆ ರಕ್ಷಣಾ ಇಲಾಖೆಯಡಿ ಬರುತ್ತದೆ.
Team Udayavani, Nov 6, 2021, 5:15 PM IST
ಕಾರವಾರ: ಬೈತಖೋಲದ ಭೂ ದೇವಿ ಗುಡ್ಡದಲ್ಲಿ ನೌಕಾನೆಲೆ ವೀಕ್ಷಣಾ ಗೋಪುರವಿದ್ದು, ಅದನ್ನು ತಲುಪಲು ಸೀಬರ್ಡ್ ನೌಕಾನೆಲೆಯವರು ರಸ್ತೆ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತದ ಅನುಮತಿ ಪಡೆದಿಲ್ಲ ಎಂದು ಬೈತಖೋಲ ಅಲಿಗದ್ದಾ ನಿವಾಸಿತರ ಸಂಘ ಆರೋಪಿಸಿದೆ.
ರಸ್ತೆ ಮತ್ತು ಕಂಪೌಂಡು ಗೋಡೆ ನಿರ್ಮಿಸುವಾಗ ಸಂಬಂಧಪಟ್ಟವರ ಅನುಮತಿ ಪಡೆಯಬೇಕಿತ್ತು. ಹಾಗೂ ಸೀಬರ್ಡ್ ನೌಕಾಲೆನೆಯವರು ಭೂದೇವಿ ಗುಡ್ಡದ ಬೀಚ್ ಬಳಸಬಾರದು ಎಂದು ಬೈತಖೋಲ ನಿವಾಸಿಗಳು ಆಕ್ಷೇಪಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಸೀಬರ್ಡ್ ಅಧಿಕಾರಿಗಳ ಜೊತೆ ಮಾತನಾಡಿ ವಸ್ತುಸ್ಥಿತಿ ತಿಳಿದುಕೊಳ್ಳುವುದಾಗಿ ಹೇಳಿದರು. ಸೀಬರ್ಡ್ ನೌಕಾನೆಲೆ ರಕ್ಷಣಾ ಇಲಾಖೆಯಡಿ ಬರುತ್ತದೆ. ದೇಶದ ಸುರಕ್ಷತೆಗೆ ಬೇಕಾದ ಅವಶ್ಯ ಕೆಲಸಗಳನ್ನು ನೌಕಾನೆಲೆ
ಮಾಡುತ್ತದೆ. ಬಂದರಿಗೆ ವಿದೇಶಿ ಹಡಗುಗಳು ಬರುವ ಕಾರಣ ಅವುಗಳ ಮೇಲೆ ಹದ್ದಿನ ಕಣ್ಣಿಡಬೇಕಾಗುತ್ತದೆ.
ಈ ಸಂಬಂಧ ಸೀಬರ್ಡ್ ಅಧಿಕಾರಿಗಳ ಜೊತೆ ಮಾತನಾಡಿ, ಸಾರ್ವಜನಿಕರಿಗೆ ಮಾಹಿತಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಸಾರ್ವಜನಿಕ ಅಹವಾಲು ಸಭೆ ಮಾಡಿಲ್ಲ ಎಂದು ಮನವಿದಾರರು ಆಕ್ಷೇಪ ವ್ಯಕ್ತಪಡಿಸಿದರು. ಕೈಗಾರಿಕೆಗೆ ಅಥವಾ ಬೃಹತ್ ಯೋಜನೆಗಳನ್ನು
ಸ್ಥಾಪಿಸುವಾಗ ಮಾತ್ರ ಸಾರ್ವಜನಿಕ ಅಹವಾಲು ಸಭೆ ನಡೆಯುತ್ತದೆ. ರಸ್ತೆ, ಕಂಪೌಂಡವಾಲ್ ಮಾಡುವಾಗ ಸಾರ್ವಜನಿಕ ಅಹವಾಲು ಸಭೆಗಳನ್ನು ಮಾಡುವ ಸಂದರ್ಭಗಳು ನಿರ್ಮಾಣವಾಗುವುದಿಲ್ಲ. ಬೈತಖೋಲ್ ಪ್ರದೇಶ ಸಹ ಅತ್ಯಂತ ಸೂಕ್ಷ್ಮವಾದುದು.
ಈ ಬಗ್ಗೆ ಮಾಹಿತಿ ಪಡೆಯಲಾಗುವುದು. ದೇಶದ ರಕ್ಷಣಾ ಇಲಾಖೆ ಮತ್ತು ನೌಕಾನೆಲೆ ಯೋಜನೆಗಳನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುವೆ ಎಂದು ಜಿಲ್ಲಾಧಿಕಾರಿ ಮುಗಿಲನ್ ಹೇಳಿದರು. ಮನವಿ ನೀಡುವ ನಿಯೋಗದಲ್ಲಿ ವಿಲ್ಸನ್, ಪ್ರೀತಮ್ ಮಾಸೂರಕರ್ ಹಾಗೂ ಬೈತಖೋಲ್ ಭಾಗದ ಸದಸ್ಯ ರಾಜೇಶ್ ಮಾಜಾಳಿಕರ್, ನಗರಸಭೆ ಸದಸ್ಯೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.