ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ
Team Udayavani, Jan 1, 2020, 4:11 PM IST
ಅಂಕೋಲಾ: ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧಿಸಿ ಗ್ರಾಮಸ್ಥರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಅಲ್ಲದೆ, ಅಣೆಕಟ್ಟು ನಿರ್ಮಾಣ ಆಗುವ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಎದುರಿನಲ್ಲಿಯೇ ಕಿಂಡಿ ನಿರ್ಮಾಣದ ವಿವರ ಹಾಗೂ ಅದರಿಂದ ಮುಳುಗಡೆಯಾಗುವ ವ್ಯಾಪ್ತಿ ಪ್ರದೇಶದ ವಿವರನ್ನು ಜ.5 ರೊಳಗೆ ನೀಡಬೇಕು. ಅದರಂತೆ ಸಾರ್ವಜನಿಕರ ಅವಹಾಲನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅಗಸೂರು, ಅಚವೆ, ಸುಂಕಸಾಳ ಹಾಗೂ ಡೋಂಗ್ರಿ ಗ್ರಾಮಸ್ಥರು ಮತ್ತು ಜನಪತ್ರಿನಿಧಿಗಳು ಆಗ್ರಹಿಸಿದರು.
ಅಗಸೂರು ಗ್ರಾಪಂ ಉಪಾಧ್ಯಕ್ಷ ಯಶವಂತ ತಿಮ್ಮಾ ಗೌಡ ಮಾತನಾಡಿ, ಹೊನ್ನಳ್ಳಿ ಕುಡಿಯುವ ನೀರಿನ ಸಂಗ್ರಹಕ್ಕೋಸ್ಕರ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ ಎನ್ನುವ ವಿಷಯ ತಿಳಿದುಕೊಂಡಿದ್ದೇವೆ. ಕಳೆದ ಅವಧಿಯಲ್ಲಿ ಬಿದ್ದ ಬಾರಿ ಮಳೆಗೆ ಗಂಗಾವಳಿ ನದಿಯ ಪ್ರವಾಹದಿಂದ ಹೊನ್ನಳ್ಳಿ, ಹೆಗ್ಗಾರ, ಮಕ್ಕಿಗದ್ದೆ, ಹಿಲ್ಲೂರು, ಗುಂಡಬಾಳ ಸೇರಿದಂತೆ ಅನೇಕ ಗ್ರಾಮಗಳಿಗೆ ನೀರು ತುಂಬಿ ಸಂಕಷ್ಟಕ್ಕೆ ಈಡಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸಾರ್ವಜನಿಕರಿಗೆ ಕಿಂಡಿ ಅಣೆಕಟ್ಟಿನ ವಿವರ ನೀಡದೇ, ಏಕಾಏಕಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾದಲ್ಲಿ ಜ.7 ರಂದು ಬೆಳಗ್ಗೆ 11ಕ್ಕೆ ಹೊನ್ನಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಪರವಾಗಿ ಶಿರಸ್ತೇದಾರ ಎನ್ .ಬಿ. ಗುನಗಾ ಮನವಿ ಸ್ವೀಕರಿಸಿದರು. ಬುದ್ದು ವಾಸು ಗೌಡ, ನಾಗಪ್ಪ ಓಮು ಹರಿಕಂತ್ರ, ಹೊನ್ನಪ್ಪ ಹನುಮಾ ಗೌಡ, ಶ್ರೀನಿವಾಸ ಶೆಟ್ಟಿ, ತಿಮ್ಮಪ್ಪ ನಾರಾಯಣ ಗೌಡ, ಬಾಬು ತಿಮ್ಮಾ ಗೌಡ, ಹನುಮಂತ ಹೊನ್ನಪ್ಪ ಗೌಡ, ಹಾಲಪ್ಪ ಎಲ್.ಗೌಡ, ದೊಳ್ಳಾ ಬೈರು ಗೌಡ, ಕೇಶವ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.