Karwar ಸೇರಿದಂತೆ ಕರಾವಳಿಯಲ್ಲಿ ಸಾಗರ ಕವಚ ಕಾರ್ಯಾಚರಣೆ
ಬೈತಖೋಲ್ ದಲ್ಲಿ ಎಂಟು ಬಾಂಬ್ ಪತ್ತೆ..! ಅಣಕು ಕಾರ್ಯಾಚರಣೆ
Team Udayavani, Nov 16, 2023, 6:11 PM IST
ಕಾರವಾರ : ಕಾರವಾರ ಸೇರಿದಂತೆ ಕರಾವಳಿಯಲ್ಲಿ ಸಾಗರ ಕವಚ ಕಾರ್ಯಾಚರಣೆ ಆರಂಭವಾಗಿದ್ದು , ಬಂದರು ನಗರಿ ಕಾರವಾರದ ಬೈತಖೋಲ್ ಪ್ರದೇಶದಲ್ಲಿ ಎಂಟು ಬಾಂಬ್ ಪತ್ತೆಯಾದವು. ಆರೋಪಿಗಳ ರೂಪದಲ್ಲಿದ್ದ ಡಿಆರ್ ಪೊಲೀಸರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದರು. ಅಂದಹಾಗೆ ಇದು ಅಣಕು ಕಾರ್ಯಾಚರಣೆ ಭಾಗವಾಗಿ ನಡೆಯಿತು .
ರಾಜ್ಯದ ಕರಾವಳಿಯಲ್ಲಿ ಪ್ರತಿವರ್ಷ ಭದ್ರತಾ ಪಡೆಗಳ ಸಹಯೋಗದಲ್ಲಿ ನಡೆಯುವ ಸಾಗರ ಕವಚ ಅಣಕು ಕಾರ್ಯಾಚರಣೆಯು ಗುರುವಾರ ಜಿಲ್ಲೆಯಾದ್ಯಂತ ಆರಂಭವಾಯಿತು.ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವ ಹಾಗೂ ಪರಿಶೀಲಿಸುವ ಸಲುವಾಗಿ ವಿವಿಧ ಭದ್ರತಾ ಪಡೆಗಳು ಸಂಯುಕ್ತವಾಗಿ ಈ ಕಾರ್ಯಾಚರಣೆ ಹಮ್ಮಿಕೊಂಡಿವೆ. ಕರಾವಳಿಯ ಉದ್ದಗಲಕ್ಕೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ತಾತ್ಕಾಲಿಕ ನಾಕಾಬಂದಿಗಳನ್ನು ನಿರ್ಮಿಸಿ ವಾಹನಗಳನ್ನು ತಪಾಸಣೆ ಮಾಡಿದರು. ಕಡಲಿನಲ್ಲಿ ಕೋಸ್ಟ್ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಗಸ್ತು ತಿರುಗಿದರು.
ನೌಕಾಸೇನೆ, ತಟ ರಕ್ಷಕ ದಳ, ಕರಾವಳಿ ಕಾವಲು ಪಡೆ ಹಾಗೂ ಜಿಲ್ಲಾ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ‘ರೆಡ್ ಫೋರ್ಸ್ ಹಾಗೂ ಬ್ಲೂ ಫೋರ್ಸ್’ ಎಂದು ಎರಡು ಗುಂಪುಗಳನ್ನು ಮಾಡಲಾಗಿತ್ತು. ‘ರೆಡ್ ಫೋರ್ಸ್’ನ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಟ್ಟಿದ್ದು, ‘ಬ್ಲೂ ಪೋರ್ಸ್’ನ ಪೊಲೀಸ್ ಸಿಬಂದಿ ಅದನ್ನು ಪತ್ತೆಹೆಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದರು.