ಮಕ್ಕಳ ಊಟದಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ
Team Udayavani, Apr 13, 2019, 3:00 AM IST
ಗಂಗಾವತಿ: “ದೇಶದಲ್ಲಿ ಕ್ವಟ್ರೋಚಿ ಅಂಕಲ್, ಮಿಷಲ್ ಮಾಮಾ ಮೂಲಕ ಕಾಂಗ್ರೆಸ್ ದೊಡ್ಡ ಹಗರಣ ಮಾಡಿದೆ. ದೆಹಲಿಯಲ್ಲಿ ತುಘಲಕ್ ಎನ್ನುವ ರಸ್ತೆಯಿದೆ. ಅಲ್ಲಿ ನಾಯಕರೊಬ್ಬರ ದೊಡ್ಡ ಮನೆಯಿದೆ. ಅಲ್ಲಿಯೇ ಈ ಹಗರಣಗಳು ನಡೆದಿವೆ.
ಮಧ್ಯಪ್ರದೇಶದ ಸರ್ಕಾರ ಮಕ್ಕಳ ಊಟದ ಹೆಸರಲ್ಲೂ ಲೂಟಿ ಮಾಡಿದೆ. ಬಡ ಮಕ್ಕಳು, ಬಾಣಂತಿಯರ ಹಣ ಚುನಾವಣೆಗಾಗಿ ದೆಹಲಿಗೆ ರವಾನಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಗಂಗಾವತಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, “ಈ ಚುನಾವಣೆ ರಾಷ್ಟ್ರವಾದ ವರ್ಸಸ್ ಕುಟುಂಬ ರಾಜಕಾರಣದ ಮೇಲೆ ನಡೆದಿದೆ. ಆಯ್ಕೆ ನಿಮ್ಮ ಮೇಲಿದೆ. ಇಡೀ ದೇಶದ ಮೂಲೆ ಮೂಲೆಯಲ್ಲೂ ಜನತೆ ಮತ್ತೂಮ್ಮೆ ಮೋದಿ ಸರ್ಕಾರ ಅಧಿ ಕಾರಕ್ಕೆ ಬರಲಿ ಎಂದು ಜಯಘೋಷ ಹಾಕುತ್ತಿದ್ದಾರೆ.
ಮೋದಿ ಸರ್ಕಾರದ ಅಲೆ ಸುನಾಮಿ ರೀತಿ ಬರುತ್ತಿದೆ. ಇಲ್ಲಿನ ಜನಸ್ತೋಮವೇ ಇದಕ್ಕೆ ಸಾಕ್ಷಿ. ದೇಶದ ಜನತೆ ನಮಗೆ ಆಶೀರ್ವಾದ ಮಾಡಬೇಕು. ಜನರ ಉತ್ಸಾಹ ನೋಡಿ ದೆಹಲಿಯಲ್ಲಿ ಕುಳಿತ ವಿರೋಧಿ ಗಳಿಗೆ ನಡುಕ ಶುರುವಾಗಿದೆ. ಅವರಿಗೆ ನಿದ್ದೆ ಬರದಂತೆ ಮಾಡಬೇಕು’ ಎಂದರು.
ಆರಂಭದಲ್ಲಿ ರಾಮ ನವಮಿ ಮುನ್ನವೇ ಅಂಜನಾದ್ರಿ ಆಂಜನೇಯ ಜನಿಸಿದ ನೆಲಕ್ಕೆ ಆಗಮಿಸಿದ್ದು ನನ್ನ ಪುಣ್ಯವೇ ಸರಿ. ಆಂಜನೇಯನ ನೆಲದಲ್ಲಿನ ನೀವೇ ಪುಣ್ಯವಂತರು. ಈ ಭೂಮಿಯ ಕಣ ಕಣದಲ್ಲೂ ಪುಣ್ಯವಿದೆ. ಈ ಪುಣ್ಯದ ಕಣವೂ ನನಗೂ ಸಿಗಲಿ. ಸಾಗರೋಪಾದಿಯಿದ್ದ ಜನಸ್ತೋಮ ನೋಡಿರುವುದು ನನ್ನ ಸೌಭಾಗ್ಯ.
ನನ್ನ ಮೇಲಿನ ಪ್ರೀತಿಗೆ ಆಭಾರಿಯಾಗಿದ್ದೇನೆ. ನೀವೆಲ್ಲರೂ ಮತದಾನದ ದಿನದಂದು ಬೃಹತ್ ಪ್ರಮಾಣದಲ್ಲಿ ಮತದಾನ ಮಾಡಬೇಕು. ನಿಮ್ಮ ಪ್ರತಿಯೊಂದು ಮತವೂ ಮೋದಿ ಖಾತೆಗೆ ಜಮೆಯಾಗಲಿದೆ. ಇದು ವಿರೋಧಿ ಗಳಿಗೆ ಎಚ್ಚರಿಕೆ ನೀಡುವಂತಿರಬೇಕು. ಯುವ ಮತದಾರರು ಕಮಲಕ್ಕೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸೋನಿಯಾ ಗಾಂಧಿಯಂಥ ಅಮ್ಮ; ದೇವೇಗೌಡರಂಥ ಅಪ್ಪ ಇರಬೇಕು!: ಇದ್ದರೆ ಇರಬೇಕು ಸೋನಿಯಾ ಗಾಂಧಿ ಯಂತಹ ಅಮ್ಮ; ದೇವೇಗೌಡರಂತಹ ಅಪ್ಪ. ರಾಜಕೀಯ ಕಾಗುಣಿತ ತಿಳಿಯದ ರಾಹುಲ್ ಗಾಂ ಧಿಯನ್ನು ಪ್ರಧಾನಿ ಮಾಡಲು ಸೋನಿಯಾ ಮತ್ತು ಮಕ್ಕಳು-ಮೊಮ್ಮಕ್ಕಳು-ಬೀಗರು-ನೆಂಟರಿಗೆ ಅಧಿಕಾರ ಕೊಡಿಸುವ ಮೂಲಕ ದೇವೇಗೌಡರು ಮಾದರಿ ಅಪ್ಪ-ಅಮ್ಮ ಆಗಿದ್ದಾರೆ.
ದೇಶ, ಜನ, ಸೈನ್ಯ ಎಂದು ಹಗಲಿರುಳು ದೇಶಕ್ಕಾಗಿ ದುಡಿಯುವ ಪ್ರಧಾನ ಸೇವಕ ಪ್ರಧಾನಿ ನರೇಂದ್ರ ಮೋದಿ ಇನ್ನೊಂದು ಕಡೆ. 70 ವರ್ಷದಲ್ಲಿ ಮಾಡದ ಕಾರ್ಯ ಮೋದಿಯವರು ಐದು ವರ್ಷಗಳಲ್ಲಿ ಮಾಡಿದ್ದಾರೆ. ಮತ್ತೂಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.
ಅಮೆರಿಕದ ಸರ್ವೇಯಲ್ಲಿ ಮೋದಿ ಮತ್ತೂಮ್ಮೆ ಪ್ರಧಾನಿ: ಅಮೆರಿಕ ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು ನಡೆಸಿದ ಸರ್ವೇಯಲ್ಲಿ ಬಿಜೆಪಿ 320-380 ಸ್ಥಾನ ಪಡೆಯಲಿದ್ದು, ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ. ಮೋದಿ ಗೆದ್ದರೆ ದೇಶ ಗೆದ್ದಂತೆ. ಪಾಕ್ ಪ್ರಧಾನಿ ಇಮ್ರಾನ್ಖಾನ್ ಪ್ರಧಾನಿ ಮೋದಿ ಗೆದ್ದರೆ ಮಾತ್ರ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದಿದ್ದಾರೆ. ದೇಶದ ಸ್ವಾತಂತ್ರ ಹೋರಾಟ ಪ್ರಥಮ ಸಂಗ್ರಾಮವಾಗಿದ್ದು 2019ರ ಲೋಕಸಭೆ ಚುನಾವಣೆ ಎರಡನೇ ಮಹಾಸಂಗ್ರಾಮವಾಗಿದೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು.
ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ: ಹೂಳಿನ ಸಮಸ್ಯೆಯಿಂದ ತುಂಗಭದ್ರಾ ಡ್ಯಾಂನಲ್ಲಿ ನೀರು ಸಂಗ್ರಹವಾಗದೇ ನದಿ ಮೂಲಕ ಹರಿದು ಹೋಗುವುದನ್ನು ತಡೆಯಲು ತಾಲೂಕಿನ ನವಲಿ ಹತ್ತಿರ ಸಮನಾಂತರ ಡ್ಯಾಂ ನಿರ್ಮಿಸಬೇಕು. ಸಿಂಧನೂರಿನಲ್ಲಿರುವ ಏಳು ಸಾವಿರ ಎಕರೆ ಫಾರಂ ಹೌಸ್ ಜಾಗದಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಏಮ್ಸ್ (ವೈದ್ಯಕೀಯ ಸಂಶೋಧನಾ ಕೇಂದ್ರ) ಸ್ಥಾಪಿಸಲು ಪ್ರಧಾನ ಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದರು.
ರಾಯಾಯಣ, ಮಹಾಭಾರತದಲ್ಲಿ ಉಲ್ಲೇಖೀತವಾಗಿರುವ ಕಿಷ್ಕಿಂದಾ ಪ್ರದೇಶಕ್ಕೆ ಶ್ರೀರಾಮ ನವಮಿ ಹಬ್ಬದ ಸಮೀಪದಲ್ಲೇ ಬಂದಿದ್ದು ನನಗೆ ಖುಷಿಯಾಗಿದೆ. ಕಿಷ್ಕಿಂದಾ ಅಂಜನಾದ್ರಿ ಪ್ರದೇಶದ ಪುಣ್ಯಭೂಮಿ. ಇಲ್ಲಿಯ ಜನರು ದೈವಭಕ್ತರಾಗಿದ್ದಾರೆ. ದೇಶ ನಡೆಸಲು ನೀವೆಲ್ಲರೂ ಆಶೀರ್ವಾದ ಮಾಡಬೇಕಿದೆ.
-ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?