ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ
Team Udayavani, May 10, 2023, 8:10 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸೋಮವಾರ ತಡರಾತ್ರಿ ಮಂಗಳವಾರ ಮುಂಜಾನೆ ವೇಳೆ ಸಾಧಾರಣ ದಿಂದ ಉತ್ತಮ ಸುರಿದಿದೆ.
ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ, ಧರ್ಮಸ್ಥಳ, ಪುತ್ತೂರು, ಮೂಡುಬಿದಿರೆ, ಮಂಗಳೂರು ನಗರ ಸೇರಿದಂತೆ ಹಲವೆಡೆ ಮಳೆ ಯಾಗಿದೆ. ಮಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಸುರಿದ ಮಳೆಗೆ ರಸ್ತೆಗಳಲ್ಲೇ ನೀರು ಹರಿದಿದೆ. ಮುಂಜಾನೆ ವೇಳೆ ತಂಪಿನ ವಾತಾವರಣವಿದ್ದರೂ ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗಿದೆ. ಹಗಲು ವೇಳೆಯಲ್ಲೂ ಆಕಾಶದಲ್ಲಿ ಮೋಡದ ಚಲನೆ ಕಂಡು ಬಂದಿದೆ. ಸಂಜೆ ವೇಳೆಗೆ ಜಿಲ್ಲೆಯ ಅಲ್ಲಲ್ಲಿ ಮತ್ತೆ ಮಳೆ ಸುರಿದಿದೆ.
ಆಗ್ನೇಯ ಬಂಗಾಲಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಬಲ ಪಡೆಯುತ್ತಿದ್ದು, ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಸದ್ಯದ ಪ್ರಕಾರ ಮ್ಯಾನ್ಮಾರ್ಗೆ ಅಪ್ಪಳಿಸುವ ಲಕ್ಷಣಗಳಿವೆ. ಇದರ ಪರಿಣಾಮ ಬುಧವಾರ ಕರಾವಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸುಳ್ಯ, ಸುಬ್ರಹ್ಮಣ್ಯ ಮಳೆ
ಸುಬ್ರಹ್ಮಣ್ಯ/ಸುಳ್ಯ: ಕಡಬ ಹಾಗೂ ಸುಳ್ಯ ತಾಲೂಕಿನ ಹಲವೆಡೆ ಮಂಗಳವಾರ ಸಂಜೆ ವೇಳೆ ಹನಿ ಮಳೆಯಾಯಿತು. ಎಣ್ಮೂರು, ಎಡಮಂಗಲ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಸುಳ್ಯ, ಕಲ್ಮಕಾರು, ಐನಕಿದು, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ, ಕಡಬದ ಕೆಲವೆಡೆ ಭಾಗದಲ್ಲಿ ಹನಿ ಮಳೆಯಾಗಿದೆ.
ಸೋಮವಾರ ರಾತ್ರಿ ಕಡಬ, ಸುಳ್ಯ ತಾಲೂಕಿನ ಹಲವೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸುಬ್ರಹ್ಮಣ್ಯ, ಸುಳ್ಯ, ಕಡಬ ಪರಿಸರದಲ್ಲಿ ಧಾರಾಕಾರ ಮಳೆ ತಡರಾತ್ರಿ ವರೆಗೂ ಮುಂದುವರಿದಿತ್ತು.
ಬೆಳ್ತಂಗಡಿಯಲ್ಲಿ ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಸೋಮವಾರ ರಾತ್ರಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದ್ದು, ಮಂಗಳವಾರ ಸಂಜೆ ತಾಲೂಕಿನ ಅಲ್ಲಲ್ಲಿ ಸಾಮಾನ್ಯ ಮಳೆ ಸುರಿದಿದೆ.
ಸೋಮ ವಾರ ರಾತ್ರಿ ಮಳೆ ಆರಂಭ ವಾಗು ತ್ತಿದ್ದಂತೆ ಕೆಲವೆಡೆ ವಿದ್ಯುತ್ ಅಡಚಣೆ ಉಂಟಾಯಿತು.
ಬಂಟ್ವಾಳದಲ್ಲಿ ಸಾಧಾರಣ ಮಳೆ
ಬಂಟ್ವಾಳ: ತಾಲೂಕಿನ ಹೆಚ್ಚಿನ ಕಡೆ ಸೋಮವಾರ ತಡರಾತ್ರಿ ಸಾಧಾರಣ ಮಳೆಯಾಗಿದೆ. ರಾತ್ರಿ ಯಾಗುತ್ತಲೇ ಸಣ್ಣಗೆ ಮಿಂಚು ಹಾಗೂ ಗುಡುಗು ಕಾಣಿಸಿಕೊಂಡಿದ್ದು, 10.30ರ ಬಳಿಕ ಮಳೆ ಸುರಿಯಲಾರಂಭಿಸಿದೆ.
ಸಿದ್ದಾಪುರ: ತುಂತುರು ಮಳೆ
ಸಿದ್ದಾಪುರ: ಹೊಸಂಗಡಿ, ಯಡ ಮೊಗೆ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು – 74 ಪರಿಸರದಲ್ಲಿ ಸುಮಾರು ಅರ್ಧ ಗಂಟೆ ತುಂತುರು ಮಳೆ ಸುರಿದಿದೆ.