Desi Swara: ಪ್ರಗತಿಯ ಆಶಾಭಾವ ಸಂಕ್ರಾತಿ : ಬೇವು-ಬೆಲ್ಲದ ಮಿಶ್ರಣದ ಸುಗ್ಗಿ
ಅಮ್ಮನ ಪೆಟ್ಟಿಗೆ ಇಂದ ಮರದ ಸಕ್ಕರೆ ಅಚ್ಚುಗಳು ಹೊರಬರುತ್ತಿದ್ದವು
Team Udayavani, Jan 13, 2024, 12:59 PM IST
ಎಲ್ಲ ಹಬ್ಬಗಳಿಗೂ ಆ ಹಬ್ಬಗಳ ದೇವರ ಹೆಸರು ಇರುತ್ತದೆ. ಉದಾಹರಣೆಗೆ ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಹೀಗೆ ಆದರೆ ಸಂಕ್ರಾಂತಿ ಹಬ್ಬ ಅಂದರೆ ಏನು ? ಸಂಕ್ರಾಂತಿ ಅಂದರೆ “ಸಂ’ ಮತ್ತು “ಕ್ರಾಂತಿ’ ಎರಡು ಪದಗಳ ಜೋಡಣೆ “ಸಂ’ ಅಂದರೆ ಮುನ್ನಡೆಯುವುದು ಅಥವಾ ಪ್ರಗತಿ, “ಕ್ರಾಂತಿ’ ಅಂದರೆ ಚಲನೆ, ಚಲಿಸುವಿಕೆ. ಹಾಗಾದರೆ ಏನು ಚಲಿಸುತ್ತದೆ ?
ಸೂರ್ಯನು ಒಂದು ರಾಶಿಯಿಂದ ಮತ್ತೂಂದು ರಾಶಿಗೆ ಪಥ ಬದಲಾಯಿಸುತ್ತಾನೆ. ಇನ್ನೊಂದು ಪ್ರಾಮುಖ್ಯ ಸುಗ್ಗಿಯ ಆಗಮನ. ದವಸ-ಧಾನ್ಯಗಳು ಫಲ ಕೊಡುವ ಸಮಯ. ಇಲ್ಲೂ ಪ್ರಗತಿ, ಗ್ರಾಮೀಣರಿಗೆ ಸುಗ್ಗಿಯ ಕಾಲ. ಮನೆ ಮನೆಗಳಲ್ಲೂ ಸಂಭ್ರಮ. ಈ ಹಬ್ಬದ ಮಹತ್ವ ಸೂರ್ಯನನ್ನು ಆರಾಧಿಸುವುದು ಹಾಗೂ ರೈತರ ಬೆಳೆಗೆ ಆಗಮನ ಕೋರುವುದು.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅಗ್ರಸ್ಥಾನ. ಏಕೆಂದರೆ ಇದು ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ಜೀವನವನ್ನೊಳಗೊಂಡಿದೆ. ಸೂರ್ಯನು ಧನು ರಾಶಿಯಲ್ಲಿ ಗೋಚರಿಸುವ ಧನುರ್ಮಾಸದ ಬ್ರಹ್ಮ ಮುಹೂರ್ತದಲ್ಲಿ ವಿಷ್ಣುವಿನ ಪೂಜೆ ಶ್ರೇಷ್ಠ. ಹೇಮಂತ ಋತುವಿನ, ಪುಷ್ಯ ಮಾಸದ ತ್ರಯೋದಶಿ ದಿನದಂದು ರವಿ ಮಕರ ರಾಶಿಗೆ ಹೊರಟ ದಿನ, ಅಂದೇ ಮಕರ ಸಂಕ್ರಾಂತಿ.
ಇನ್ನೊಂದು ವಿಶೇಷತೆ ಸೂರ್ಯನ ಉತ್ತರದಿಕ್ಕಿಗೆ ಪ್ರಯಾಣ ಅಂದರೆ ಚಳಿ ಮುಗಿದು ಬೇಸಗೆಯ ಆರಂಭ. ಸಂಕ್ರಾಂತಿ ಹಬ್ಬದ ಮತ್ತೂಂದು ವಿಶೇಷತೆ ಪಂಚಭೂತಗಳು. ಗಾಳಿ, ನೀರು , ಬೆಂಕಿ, ಆಕಾಶ, ಭೂಮಿ ಕೂಡ ಪಾಲುಗೊಳ್ಳುತ್ತವೆ ಅಂದರೆ ಅತಿಶಯೋಕ್ತಿ ಅಲ್ಲ.
ತಂಗಾಳಿ ಬೀಸುತ್ತಿದ್ದಂತೆ ಮಕ್ಕಳು ಗಾಳಿಪಟ ಹಾರಿಸುತ್ತಾರೆ. ಗೋವುಗಳು ಕಿಚ್ಚು ಹಾರುವುದು ಅಂದರೆ ಬೆಂಕಿಯಮೇಲೆ ನಡೆಯುವುದು ರೂಢಿಯಲ್ಲಿದೆ. ಇನ್ನು ಸಂಕ್ರಮಣದಲ್ಲಿ ಕಾವೇರಿ ನೀರಿನ ಸ್ನಾನ ಪುಣ್ಯ. ಆಕಾಶದಲ್ಲಿ ಸೂರ್ಯನ ಚಲನೆ ಮಕರ ರಾಶಿಗೆ ರೈತರು ಭೂಮಿಯನ್ನು ಉತ್ತು, ಬಿತ್ತಿ, ಕಳೆ ಕೀಳುವ ಸುಗ್ಗಿ ಕಾಲ. ಹೀಗೆ ಗಾಳಿ, ನೀರು, ಬೆಂಕಿ , ಭೂವಿ , ಆಕಾಶ ಎಲ್ಲದರ ಪಾಲು ಸಂಕ್ರಾಂತಿ ಹಬ್ಬದಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಸೂರ್ಯನಿಗೆ ಪೂಜೆ ಸಲ್ಲುತ್ತದೆ. ಹಬ್ಬದ ಆಚರಣೆಯಂತೂ ಎಲ್ಲರಿಗೂ ಸಂಭ್ರಮ.
ಆದರೆ ಅಂದಿನ ಆಚರಣೆ ರೀತಿಗೂ ಇಂದಿನ ರೀತಿಗೂ ಕಾಲ ಬದಲಾಗಿರುವುದರಿಂದ ವ್ಯತ್ಯಾಸವಿದೆ. ಅಂದು ಬಿಳಿಯ ಬಟ್ಟೆಯಮೇಲೆ ನೆನೆಸಿದ ಎಳ್ಳನ್ನು ಉಜ್ಜಿ ಸಿಪ್ಪೆ ತೆಗೆದು ಹರವಿ ಒಣಗಿಸಿ ಬಾಣಲೆಯಲ್ಲಿ ಘಮಘಮ ಹುರಿಯುತ್ತಿದ್ದ ಅಮ್ಮನ ನೆನಪು ಇಂದಿಗೂ ಅಚ್ಚಳಿ. ಮಕ್ಕಳಿಗೆ ಹೊಸ ಬಟ್ಟೆ ಹೊಲಿಸುತ್ತಿದ್ದ ತಂದೆಯವರ ಆತ್ಮೀಯತೆ ಮರೆಯಲಸಾಧ್ಯ. ಹೀಗೆ ಹಬ್ಬದ ಸಡಗರ ವಾರಗಳ ಮುಂಚೆಯೇ ಆರಂಭವಾಗುತ್ತಿತ್ತು.
ಎಳ್ಳಿಗೂ ಸಂಕ್ರಾಂತಿಗೂ ಏನು ಸಂಬಂಧ ?
ನಾವು ಒಬ್ಬೊಬ್ಬರಿಗೂ ಯಾವುದೋ ರೀತಿಯಲ್ಲಿ ಋಣಿ ಆಗಿರುತ್ತೇವೆ. ಅಂದರೆ ಪರೋಕ್ಷವಾಗಿ ಸಾಲ ಪಡೆದ ಹಾಗೆ ಅಂದುಕೊಳ್ಳೋಣ. ಋಣ ಅಂದರೆ ಹಂಗು, ಸಾಲ ಅಂತಲೂ ಹೇಳಬಹುದು. ಈ ಸಾಲವನ್ನು ತೀರಿಸುವ ಬಗೆಯೇ ಎಳ್ಳು ಹಂಚುವ ಸಂಕೇತ. ಎಳ್ಳಿನ ರುಚಿ ಹೆಚ್ಚಿಸಲು ಕಡಲೇಕಾಯಿ, ಕೊಬ್ಬರಿ, ಹುರಿಗಡಲೆ, ಬೆಲ್ಲ ಇವುಗಳನ್ನು ಸೇರಿಸಿ ಬಂಧು ಮಿತ್ರರಿಗೆ ಹಂಚುತ್ತೇವೆ.
ಎಳ್ಳಿನ ಜತೆ ಸಕ್ಕರೆ ಗೊಂಬೆಗಳು ಸೇರುತ್ತವೆ. ಅಮ್ಮನ ಪೆಟ್ಟಿಗೆ ಇಂದ ಮರದ ಸಕ್ಕರೆ ಅಚ್ಚುಗಳು ಹೊರಬರುತ್ತಿದ್ದವು. ಇದಕ್ಕೆ ಸಕ್ಕರೆ ಪಾಕ ಮಾಡಿ ಅಮ್ಮನ ಕುಶಲತೆಯಿಂದ ವಿವಿಧ ರೂಪದ ಅಚ್ಚುಗಳು ಹೊರಬರುತ್ತಿದ್ದವು. ಅಮ್ಮ ಕಬ್ಬಿನ ತುಂಡು, ಬೆಲ್ಲ, ಅರಿಶಿನ, ಕುಂಕುಮ ಎಳ್ಳುಗಳಿಂದ ಸಿದ್ಧಪಡಿಸಿದ್ದ ತಟ್ಟೆಗಳನ್ನು ತೆಗೆದುಕೊಂಡು ನವ ವಸ್ತ್ರಗಳನ್ನು ಧರಿಸಿ ನಡಿಗೆಯಲ್ಲೇ ಮನೆಮನೆಗೂ ಹಂಚುತ್ತಿದ್ದ ಸಂಭ್ರಮ ಇಂದೂ ನೆನಪು.
ಆದರೆ ಇಂದಿನ ಕಾಲದಲ್ಲಿ ರಿಕ್ಷಾ, ಕಾರು, ಓಲಾಗಳಲ್ಲಿ ಎಳ್ಳಿನೊಡನೆ ಓಡಾಟ. ಭವಿಷ್ಯದಲ್ಲಿ ಡ್ರೋನ್ಗಳಿಂದ ಎಳ್ಳು ಹಂಚುತ್ತಾರೇನೋ ಅಂತ ಅನಿಸುತ್ತಿದೆ! ಇಂದಿನ ಸಂಕ್ರಾಂತಿ ಶಾಪಿಂಗ್ ಒಂದು ಸಂಜೆಯಲ್ಲಿ ಮುಗಿಸಬಹುದು. ಸಿದ್ಧವಾದ ಎಳ್ಳು, ಕಣ್ಣಿಗೆ ಬೇಕಾದಂತಹ ಸಕ್ಕರೆ ಅಚ್ಚುಗಳು, ಕಬ್ಬಿನ ತುಂಡುಗಳು ಎಲ್ಲ ಸುಲಭವಾಗಿಕೊಳ್ಳುವ ಸೌಲಭ್ಯ. ಆದರೆ ಇಂದೂ ಅನೇಕರು ತಾವೇ ಎಳ್ಳು, ಅಚ್ಚುಗಳನ್ನು ತಯಾರಿಸಿ ತಮ್ಮ ಕಲಾಪ್ರದರ್ಶನ ಮಾಡುತ್ತಾರೆ.
ಈ ಹಬ್ಬಕ್ಕೆ ಪೊಂಗಲ್ ಅಂತ ಏಕೆ ಹೆಸರು ?
ಇದು ಸುಗ್ಗಿಯಕಾಲ. ರೈತರು ಭತ್ತದ ಕಳೆ ಕೀಳುವ ಕಾಲ. ಭತ್ತದ ತೆನೆಗಳನ್ನು ಕಿತ್ತು ಅಕ್ಕಿಯಾಗಿ ಮಾರ್ಪಡಿಸಿ ಜನಸಮೂಹಕ್ಕೆ ಒದಗಿಸುತ್ತಾರೆ. ಅಂದಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಅಕ್ಕಿಯ ಮೂಟೆಗಳನ್ನು ಹೊತ್ತು ತಂದ ರೈತರಿಗೆ ಅದೇ ಅಕ್ಕಿಯಲ್ಲಿ ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸಿ ಅವರಿಗೆ ಉಣ ಬಡಿಸುತ್ತಿದ್ದರು. ಅದು ಇಂದಿಗೂ ನೆನಪು. ಹುಗ್ಗಿ ಅಥವಾ ಪೊಂಗಲ್ ಹೆಸರುಬೇಳೆ, ಬೆಲ್ಲ, ಗೋಡಂಬಿ ತುಪ್ಪಗಳಿಂದ ತಯಾರಿಸುವ ಸಿಹಿ ಪದಾರ್ಥ. ಇದು ಏಕೀಕರಣದ ಸಂಕೇತ ! ಸಂಕ್ರಾಂತಿ ದಿನ ಎಲ್ಲರ ಮನೆಯಲ್ಲೂ ಹುಗ್ಗಿ, ಸುಗ್ಗಿ ಆಚರಿಸಲು!
ಅಂದಹಾಗೆ ಸೊಪ್ಪಿನ ಕಡ್ಲೆ ಕಾಯಿ ಕೂಡ ಈ ಹಬ್ಬದ ಒಂದು ಅಂಗ. ಹಸಿಕಡಲೆ ಕಾಳಿನ ಪುಟ್ಟ ಗಿಡಗಳು. ಆ ಕಾಯಿಗಳನ್ನು ಬಿಡಿಸಿ ಬೀಜ ತಿನ್ನುವುದೇ ಒಂದು ದೊಡ್ಡ ಖುಷಿ ! ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಸಂಜೆ ಆರತಿ ಸಂಭ್ರಮ. ಸುವಾಸಿನಿಯರು ಮಕ್ಕಳಿಗೆ ಸಂಪ್ರದಾಯದ ಹಾಡುಗಳನ್ನು ಹಾಡಿ ಮಕ್ಕಳಿಗೆ ಆರತಿ ಮಾಡುವುದೇ ಕಣ್ಣಿಗೆ ದೊಡ್ಡ ಹಬ್ಬ . ಹೀಗೆ ನಮ್ಮ ಹಬ್ಬಗಳು ಹಿಂದಿನಿಂದ ಆಚರಣೆಗೆ ಬಂದು ಇಂದಿಗೂ ಇನ್ನೂ ಹೆಚ್ಚು ಹೆಚ್ಚು ಉತ್ಸಾಹದಿಂದ ವಿಜೃಂಭಣೆಯಿಂದ ನಡೆಸಲ್ಪಡುತ್ತಿದೆ. ಸಂಕ್ರಾತಿ ಹೊಸತನವನ್ನು ಹೊತ್ತು ತರಲಿ.
*ಜಯಮೂರ್ತಿ, ಇಟಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ