ಅಪಘಾತವಾಗಿ ದೂರದೂರು ಸೇರಿದ್ದ ನಾಯಿಯನ್ನು ಮರಳಿ ಕರೆತಂದ ಅಧಿಕಾರಿ
Team Udayavani, Feb 6, 2023, 8:05 AM IST
ಸುಬ್ರಹ್ಮಣ್ಯ: ಕಾರಿಗೆ ನಾಯಿ ಢಿಕ್ಕಿಯಾಗಿ ಕಾರಿನ ಬಾನೆಟ್ನಲ್ಲಿ ಸಿಲುಕಿ ಪುತ್ತೂರಿನ ಕಬಕ ಸೇರಿದ್ದ ನಾಯಿಯನ್ನು ಅದರ ಮರಿಗಳಿದ್ದ ಬಳ್ಪಕ್ಕೆ ಕರೆತಂದು ಸರಕಾರಿ ಅಧಿಕಾರಿಯೋರ್ವರು ಮಾನವೀಯತೆ ಮೆರೆದಿದ್ದಾರೆ.
ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದಿಂದ ಪುತ್ತೂರಿನ ಕಬಕ ತೆರಳುತ್ತಿದ್ದ ಕಾರಿಗೆ ಬಳ್ಪ ಸಮೀಪ ನಾಯಿ ಢಿಕ್ಕಿಯಾಗಿ ಕಾರಿನ ಬಾನೆಟ್ನಲ್ಲಿ ಸಿಲುಕಿಕೊಂಡಿತ್ತು. ಘಟನೆ ಪುತ್ತೂರಿನ ಕಬಕ ಸೇರಿದ ಬಳಿಕ ತಿಳಿದು ಗ್ಯಾರೇಜ್ನಲ್ಲಿ ನಾಯಿಯನ್ನು ಹೊರತೆಗೆಯಲಾಯಿತು. ಈ ವೇಳೆ ನಾಯಿ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿತ್ತು. ಇದೀಗ ಇದರ ಮುಂದುವರಿದ ಭಾಗವಾಗಿ, ನಾಯಿಯು ತನ್ನ ಮರಿಗಳಿಂದ ಬೇರ್ಪಟ್ಟ ಮಾಹಿತಿ ಅರಿತ ಸರಕಾರಿ ಅಧಿಕಾರಿ ನಾಯಿಯನ್ನು ಹುಡುಕಿ ಮತ್ತೆ ಬಳ್ಪಕ್ಕೆ ಕರೆತಂದು ಮರಿಗಳ ಜತೆಗೆ ಸೇರಿಸಿದ್ದಾರೆ.
ಬಳ್ಪದ ಅರಣ್ಯಾಧಿಕಾರಿಯಾಗಿರುವ ಸಂತೋಷ್ ರೈ ಅವರ ಮನೆಯ ಈ ಶ್ವಾನವು ಬೀದಿ ನಾಯಿಯಾಗಿತ್ತು. ಅವರ ಮಗಳು ಅದನ್ನು ಮನೆಯಲ್ಲೇ ಸಾಕಿದ್ದರು. ಮರಿಯನ್ನೂ ಹಾಕಿತ್ತು.
ಶ್ವಾನ ಕಳೆದುಹೋದ ಬಗ್ಗೆ ಹುಡುಕಾಟ ನಡೆಸಿದ ಸಂತೋಷ್ ರೈ ಅವರು ಕೊನೆಗೂ ಪತ್ತೆ ಹಚ್ಚಿ ಮರಳಿ ಮನೆಗೆ ಕರೆದುಕೊಂಡು ಬಂದಿದ್ದಾರೆ.