ರಾಜ್ಯದ ಬಿಜೆಪಿ ಅಭ್ಯರ್ಥಿಪಟ್ಟಿ ಇಂದು ಅಂತಿಮ: ಕೆಲವು ಸಂಸದರಿಗೆ ಟಿಕೆಟ್ ನಕಾರ?
ಪ್ರಧಾನಿ ನೇತೃತ್ವದಲ್ಲಿ ಇಂದು ಬಿಜೆಪಿ ಚುನಾವಣ ಸಮಿತಿ ಸಭೆ
Team Udayavani, Mar 11, 2024, 7:30 AM IST
ಬೆಂಗಳೂರು: ಬಹು ನಿರೀಕ್ಷಿತ ಬಿಜೆಪಿಯ ಕೇಂದ್ರಿಯ ಚುನಾ ವಣ ಸಮಿತಿಯ ಸಭೆ ಸೋಮವಾರ ಸಂಜೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಅದರಲ್ಲಿ ರಾಜ್ಯದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದು ಘೋಷಣೆ ಆಗ
ಬಹುದೇ ಎಂಬ ಕುತೂಹಲ ಈಗ ಸೃಷ್ಟಿಯಾಗಿದೆ.
ರವಿವಾರ ನಿಗದಿಯಾಗಿದ್ದ ಚುನಾವಣ ಸಮಿತಿ ಸಭೆ ಸೋಮವಾರಕ್ಕೆ ಮುಂದೂ ಡಿಕೆಯಾಗಿತ್ತು. ರಾಜ್ಯದ ಕ್ಷೇತ್ರಗಳ ಬಗ್ಗೆ ರಾಜ್ಯದ ಹಿರಿಯ ಮುಖಂಡರ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿ ಮಾಹಿತಿ ಸಂಗ್ರಹ ನಡೆಸಿದ್ದಾರೆ. ಆದರೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.
ವಿಜಯೇಂದ್ರ ಈಗಾಗಲೇ ಹೊಸ ದಿಲ್ಲಿ ತಲುಪಿದ್ದು, ಯಡಿಯೂರಪ್ಪ, ಆರ್. ಅಶೋಕ್ ಸೋಮವಾರ ಮಧ್ಯಾಹ್ನ ಹೊಸದಿಲ್ಲಿ ತಲುಪಲಿದ್ದಾರೆ.
ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ 25ರಲ್ಲಿ ಬಿಜೆಪಿ ಸಂಸದರಿದ್ದು, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸುಮಲತಾ ಇದ್ದಾರೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಈ ಪೈಕಿ ಸರಾಸರಿ ಶೇ. 30 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ಎದುರಿಸುವ ಆಕಾಂಕ್ಷೆ ಹೊಂದಿರುವ ಎಷ್ಟು ಮಂದಿ ಹಾಲಿ ಸಂಸದರ ಟಿಕೆಟ್ ನಿರಾಕರಣೆ ಆಗಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ತುಮಕೂರಿನ ಜಿ. ಎಸ್. ಬಸವರಾಜ್, ಹಾವೇರಿಯ ಶಿವಕುಮಾರ್ ಉದಾಸಿ, ಚಿತ್ರದುರ್ಗದ ನಾರಾಯಣ ಸ್ವಾಮಿ, ಚಿಕ್ಕಬಳ್ಳಾಪುರದ ಬಿ.ಎನ್. ಬಚ್ಚೇ ಗೌಡ, ಚಾಮರಾಜನಗರದ ಶ್ರೀನಿವಾಸ ಪ್ರಸಾದ್ ಈಗಾಗಲೇ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ- ಚಿಕ್ಕಮಗಳೂರಿನ ಶೋಭಾ, ಬೀದರ್ನ ಖೂಬಾ, ಮೈಸೂರಿನ ಪ್ರತಾಪ್ ಸಿಂಹ, ಬೆಳಗಾವಿಯ ಮಂಗಲಾ, ಬೆಂಗಳೂರು ಉತ್ತರದ ಡಿ.ವಿ. ಸದಾನಂದ ಗೌಡ, ವಿಜಯಪುರದಿಂದ ರಮೇಶ್ ಜಿಗಜಿಣಗಿ, ಕೊಪ್ಪಳದಿಂದ ಕರಡಿ ಸಂಗಣ್ಣ, ಉತ್ತರ ಕನ್ನಡದಿಂದ ಅನಂತ್ ಹೆಗಡೆ ಸ್ಪರ್ಧೆ ಬಗ್ಗೆ ಚರ್ಚೆಗಳಿದ್ದು ಇದೆಲ್ಲದಕ್ಕೂ ಸೋಮವಾರ ತೆರೆ ಬೀಳುವ ನಿರೀಕ್ಷೆಯಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಮಂಗಳೂರು, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ ಕ್ಷೇತ್ರಗಳ ಟಿಕೆಟ್ ಹಂಚಿಕೆ ಈ ಬಾರಿ ಬಿಜೆಪಿ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ಇದರ ಜತೆಗೆ ಹಾವೇರಿ, ಬೀದರ್, ತುಮಕೂರು, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಪ್ಪಳ ಕ್ಷೇತ್ರಗಳ ಕಗ್ಗಂಟನ್ನು ಬಿಡಿಸುವ ಕೆಲಸ ನಡೆಯಬೇಕಿದೆ.
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಸೋಮವಾರ ಹತ್ತರಿಂದ ಹದಿನೈದು ಕ್ಷೇತ್ರದ ಟಿಕೆಟ್ಗಳು ಅಂತಿಮಗೊಳ್ಳುವ ಸಂಭವವಿದೆ. ರಾಜ್ಯದ ಬಿಜೆಪಿ ನಾಯಕರು ನೀಡಿರುವ ಪಟ್ಟಿಯ ಬಗ್ಗೆ ಈಗಾಗಲೇ ಬಿಜೆಪಿ ವರಿಷ್ಠರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಕೇಂದ್ರದ ನಾಯಕರು ತಮ್ಮ ಬಳಿಯಿರುವ ಪಟ್ಟಿಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗ ಸೋಮವಾರ ನಡೆಯುವ ಸಭೆಯಲ್ಲಿ ಎರಡು ಪಟ್ಟಿಗಳನ್ನು ಪರಿಶಿಲೀಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಹೆಚ್ಚಿನ ಆಯ್ಕೆಗಳಿಲ್ಲದ ಕ್ಷೇತ್ರಗಳು ಮತ್ತು ಎರಡು ಪಟ್ಟಿಯಲ್ಲಿಯೂ ಹೆಚ್ಚು ಧನಾತ್ಮಕ ಅಭಿಪ್ರಾಯ ಹೊಂದಿರುವ ಅಭ್ಯರ್ಥಿಗಳು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಭವವಿದೆ.