3 ತಿಂಗಳು ಅಕ್ಕಿ ಪಡೆದಿದ್ದರೆ ಮಾತ್ರ ನಗದು: ಅನ್ನಭಾಗ್ಯಕ್ಕೂ ಷರತ್ತು- ಮಾರ್ಗಸೂಚಿ ಪ್ರಕಟ
Team Udayavani, Jul 7, 2023, 7:59 AM IST
ಬೆಂಗಳೂರು: “ಅನ್ನಭಾಗ್ಯ’ದಡಿ ಅಕ್ಕಿ ಬದಲು ನೀಡಲಿರುವ ನಗದು ಸೌಲಭ್ಯಕ್ಕೂ ಷರತ್ತುಗಳನ್ನು ವಿಧಿಸಿರುವ ಸರಕಾರ, ಕಳೆದ ಮೂರು ತಿಂಗಳು ಪಡಿತರ ಆಹಾರಧಾನ್ಯ ಪಡೆದುಕೊಂಡ ಕುಟುಂಬಗಳು ಮಾತ್ರ ನಗದು ವರ್ಗಾವಣೆ ಸೌಲಭ್ಯ ಪಡೆಯಲು ಅರ್ಹ ರಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ(ಬಿಪಿಎಲ್) ಹೊಂದಿರುವ ಫಲಾನು ಭವಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಪಾವತಿಸುವ ಬಗ್ಗೆ ಗುರುವಾರ ಸರಕಾರ ಆದೇಶ ಹೊರಡಿಸಿದೆ. ಅದರಂತೆ “ಅನ್ನಭಾಗ್ಯ’ದಡಿ ಪ್ರತಿ ತಿಂಗಳು ಫಲಾನುಭವಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ನಿರ್ಧರಿಸಲಾಗಿದ್ದು, ಅಕ್ಕಿ ಖರೀದಿಗಾಗಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ಪ್ರಕ್ರಿಯೆ ಮುಗಿದು ಬಿಡ್ದಾರರು ಆಹಾರಧಾನ್ಯ ಪೂರೈಸುವವರೆಗೆ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂ.ಗಳಂತೆ ಹಣ ವರ್ಗಾಯಿಸಲಾಗುವುದು ಎಂದು ಹೇಳಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿ 15 ಅಂಶಗಳ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಜೂನ್ನಲ್ಲಿ ಆಹಾರಧಾನ್ಯ ಪಡೆದ ಪಡಿತರ ಕುಟುಂಬಗಳನ್ನು ಜುಲೈಯಲ್ಲಿ ನಗದು ವರ್ಗಾವಣೆಗೆ ಪರಿಗಣಿಸಲಾಗಿದ್ದು, ಜುಲೈ 20ರ ಒಳಗೆ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ ಕುಟುಂಬಗಳಿಗೆ ಆಗಸ್ಟ್ನಲ್ಲಿ ನಗದು ಸೌಲಭ್ಯ ದೊರೆಯಲಿದೆ.
ಬ್ಯಾಂಕ್ ಖಾತೆ ಮಾಹಿತಿ ಹೊಂದಿರದ ಕಾರ್ಡ್ದಾರರು ಜಿಲ್ಲಾ ಹಂತದ ಇಲಾಖೆ ಸಿಬಂದಿ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಒದಗಿಸಬೇಕು. ಬ್ಯಾಂಕ್ ಖಾತೆ ಹೊಂದಿರದ ಕುಟುಂಬಗಳು ಖಾತೆ ತೆರೆಯುವಂತೆ ಅಥವಾ ಖಾತೆ ನಿಷ್ಕ್ರಿಯಗೊಂಡಿದ್ದಲ್ಲಿ ಪುನರುಜ್ಜೀವಗೊಳಿಸಬೇಕು.
ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರು ಇರುವ ಕುಟುಂಬಗಳನ್ನು ಸೌಲಭ್ಯದಿಂದ ಹೊರಗಿಡಲಾಗುವುದು. ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಕಾರ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಯನ್ನು ಆ ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಿ, ಸೌಲಭ್ಯಕ್ಕೆ ಒಳಪಡಿಸಲಾಗುವುದು. ಎರಡನೇ ಕುಟುಂಬದ ಮುಖ್ಯಸ್ಥರನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಚಾಲ್ತಿಯಲ್ಲಿರುವ 1,28,16,253 ಪಡಿತರ ಚೀಟಿಗಳ ಪೈಕಿ 1,28,13,048 ಪಡಿತರ ಚೀಟಿಯಲ್ಲಿನ ಸದಸ್ಯರ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡಲಾಗಿದ್ದು, ಕೇವಲ 3,016 ಸದಸ್ಯರು ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡು ವುದು ಬಾಕಿ ಇದೆ. ಹೊಂದಾಣಿಕೆ ಆಗದಿರುವ ಸದಸ್ಯರ
ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೆ ಮಾಡಿಕೊಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.
ನಗದು ವರ್ಗಾವಣೆಗೊಂಡ ಫಲಾನುಭವಿಗಳ ಮೊಬೈಲ್ಗೆ ಎಸ್ಎಂಎಸ್ ಅಥವಾ ವಾಟ್ಸಪ್ ಮೂಲಕ ಮಾಹಿತಿ ಒದಗಿಸಲಾಗುವುದು. ಯೋಜನೆ ಸಂಬಂಧ ಈಗಾಗಲೇ ಕೇಂದ್ರ ಕಚೇರಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಸಹಾಯವಾಣಿಗಳನ್ನು ಬಳಸಿಕೊಳ್ಳಲು ಇಲಾಖೆಯ ಕಾರ್ಯದರ್ಶಿ ಡಾ| ಎಂ.ಟಿ. ರೆಜು ತಿಳಿಸಿದ್ದಾರೆ.
3 ಸದಸ್ಯರಿರುವ ಅಂತ್ಯೋದಯಕ್ಕಿಲ್ಲ ನಗದು!
ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಅಂತ್ಯೋದಯ ಕಾರ್ಡ್ದಾರರಿಗೂ ನಗದು ವರ್ಗಾವಣೆ ಸೌಲಭ್ಯ ಸಿಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವರ್ಗಕ್ಕೆ ಈಗಾಗಲೇ ಪ್ರತಿ ತಿಂಗಳು ನೀಡಲಾಗುತ್ತಿರುವ 35 ಕೆಜಿ ಆಹಾರಧಾನ್ಯ ಎಂದಿನಂತೆ ಸಿಗಲಿದೆ. ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಅಂತ್ಯೋದಯ ಪಡಿತರ ಕುಟುಂಬ ಗಳಿಗೆ ನಗದು ಸೌಲಭ್ಯ ಸಿಗಲಿದೆ. ಅದಕ್ಕೆ ಪ್ರತ್ಯೇಕ ಅನು ಪಾತ ಅನುಸರಿಸಲಾಗಿದೆ. ಉದಾಹರಣೆಗೆ ಅಂತ್ಯೋ ದಯ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ 170 ರೂ. (34x5x1), ಐವರು ಸದಸ್ಯರಿದ್ದರೆ 510 ರೂ. (34x5x3), ಆರು ಜನರಿದ್ದರೆ 850 ರೂ. (34x5x5) ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.