ಚಾಮರಾಜ ನಗರದ ಎಲ್ಲಾ ಗಣಿಗಳಲ್ಲಿ ಮತ್ತೊಮ್ಮೆ ಪರಿಶೀಲನೆ: ಗಣಿ ಸಚಿವ ಆಚಾರ್
Team Udayavani, Mar 6, 2022, 1:46 PM IST
ಕೊಪ್ಪಳ: ಗುಂಡ್ಲುಪೇಟೆ ಬಳಿ ಗುಡ್ಡ ಕುಸಿತ ಪ್ರಕರಣದ ಕುರಿತಂತೆ ಚಾಮರಾಜ ನಗರದ ಎಲ್ಲ ಗಣಿಗಳ ಕಾರ್ಯ ನಿರ್ವಹಣೆಯ ಕುರಿತು ರಾಜ್ಯದ 9 ತಂಡ ಪರಿಶೀಲನೆ ಮಾಡಲು ಸೂಚಿಸಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಗುಂಡ್ಲುಪೇಟೆ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಸಿಲುಕಿದ್ದಾರೆ ಎನ್ನುವ ಮಾಹಿತಿ ಇದೆ. ಒಂದು ಮೃತದೇಹ ಹೊರ ತೆಗೆದಿದ್ದಾರೆ. ಇನ್ನುಳಿದವರ ಶೋಧ ಕಾರ್ಯ ನಮ್ಮ ಎನ್ ಡಿಆರ್ ಎಫ್ ತಂಡದಿಂದ ನಡೆದಿದೆ. ಅಲ್ಲಿನ ಅಧಿಕಾರಿಗಳನ್ನ ತಕ್ಷಣ ಸ್ಥಳ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇನೆ. ಅಲ್ಲದೆ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಸಭೆ ನಡೆಸಲಿದ್ದಾರೆ. ಅಲ್ಲಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಣಿಗಾರಿಕೆ ಮಾಡಲು ಸರ್ಕಾರವು ಒಂದು ನೀತಿ ಮಾಡಿದೆ. ಆ ನಿಯಮದ ಪ್ರಕಾರ ಗಣಿಗಾರಿಕೆ ಮಾಡಿಕೊಂಡು ಹೋದರೆ ಇಂತ ಘಟನೆ ನಡೆಯಲ್ಲ. ಆದರೆ ಅಲ್ಲಿನ ಗಣಿ ಮಾಲಿಕರು ನಿಯಮ ಮೀರಿರುತ್ತಾರೆ. ಹಾಗಾಗಿ ಇಂತವೆಲ್ಲ ನಡೆದಿರುತ್ತವೆ. ಇಲ್ಲಿ ಇಲಾಖೆ ಅಧಿಕಾರಿಗಳೂ ಜವಬ್ದಾರಿ ಹೊರಬೇಕಾಗುತ್ತದೆ. ಮುಂದೆ ಈ ರೀತಿ ಆಗದಂತೆ ನಮ್ಮ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ನಾವು ಹಲವು ಕ್ರಮ ಕೈಗೊಂಡಿದ್ದೇವೆ. ಬಾಲ್ಯ ವಿವಾಹ ಅಂದರೆ ಅದು ಮಕ್ಕಳ ಶೋಷಣೆ ಮಾಡುತ್ತೆ. ಬಾಲ್ಯ ವಿವಾಹ ತಡೆ ಸಮುದಾಯಿಕ ಮಟ್ಟದಲ್ಲಿ ಜಾಗೃತಿಯಾಗಬೇಕಿದೆ. ಇಲ್ಲಿ ಪ್ರತಿಯೊಬ್ಬರ ಜವಬ್ದಾರಿಯು ಇದೆ ಎಂದರು.