Moodabidri ಮಾದಕ ವಸ್ತು ಮಾರಾಟ ಪ್ರಯತ್ನ: ಕಾರು ಸಹಿತ ಇಬ್ಬರ ಸೆರೆ
Team Udayavani, Aug 7, 2023, 9:15 PM IST
ಮೂಡುಬಿದಿರೆ: ಮಾದಕ ವ್ಯಸನ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ಮೂಡುಬಿದಿರೆ ಠಾಣಾ ಪೊಲೀಸರು ಇಲ್ಲಿನ ಪ್ರಾಂತ್ಯ ಗ್ರಾಮದ ಕರ್ನಾಟಕ ಸಾ ಮಿಲ್ ಬಳಿಗೆ ಆ. 5ರಂದು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಯಾರೋ ಇಬ್ಬರು ವ್ಯಕ್ತಿಗಳು ಗಾಂಜಾ ಹಾಗೂ ಮೆಟಾಂಪೆಟಮೈನ್ ಎಂಬ ಮಾದಕ ವಸ್ತುವನ್ನು ಕಾರೊಂದರಲ್ಲಿ ಇರಿಸಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವುದರ ಮಾಹಿತಿ ಪಡೆದು, ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಅನುಮತಿ ಪಡೆದು ಪಂಚರು ಹಾಗೂ ಪತ್ರಾಂಕಿತ ಅಧಿಕಾರಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ನಿವಾಸಿ ಮೊಹಮ್ಮದ್ ಸಫನ್ (20) ಹಾಗೂ ಪುತ್ತಿಗೆ ಗ್ರಾಮದ ಹಂಡೇಲ್ ನಿವಾಸಿ ಮೊಹಮ್ಮದ್ ಶಾರೂಕ್ ಎಂ. (21) ಬಂಧಿತ ಆರೋಪಿಗಳು. ಅವರಿಂದ ಸುಮಾರು 168 ಗ್ರಾಂ ಗಾಂಜಾ ಹಾಗೂ ಸುಮಾರು 1.21 ಗ್ರಾಂ ಮೆಟಾಂಪೆಟಮೈನ್ ಮಾದಕ ವಸ್ತು ಮತ್ತು ಸ್ವಾಧೀನಪಡಿಸಿಕೊಂಡ ಕಾರು ಸಹಿತ ಒಟ್ಟು ರೂ. 94,000 ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ, ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ನಿರ್ದೇಶನದಂತೆ ಮೂಡುಬಿದಿರೆ ಠಾಣಾ ಎಸ್ಐ ನಿರಂಜನ್ ಕುಮಾರ್ ಕೆ.ಇ. ಮತ್ತವರ ತಂಡದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.