Dharmasthala; ಮನೋವಿಕಾರ ತ್ಯಜಿಸಿ ಸಂಕಲ್ಪ ಶಕ್ತಿಯಿಂದ ಭಜಿಸಿ: ಡಾ| ಹೆಗ್ಗಡೆ
ಅಹೋರಾತ್ರಿ ಸಾಮೂಹಿಕ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ
Team Udayavani, Mar 9, 2024, 12:45 AM IST
ಬೆಳ್ತಂಗಡಿ: ಶಿವರಾತ್ರಿ ಎಂಬುದು ಶುಭವನ್ನು ತರುವ ರಾತ್ರಿ. ನೀನೊಲಿದರೆ ಕೊರಡು ಕೊನ ರುವುದು, ವಿಷವೂ ಅಮೃತವಾ ಗುವುದು ಎಂಬಂತೆ ಪರಿಶುದ್ಧ ಮನದಿಂದ ನಮ್ಮೆಲ್ಲ ಮನೋ ವಿಕಾರಗಳನ್ನು ತ್ಯಜಿಸಿ ಸಂಕಲ್ಪ ಶಕ್ತಿಯಿಂದ ಶಿವನನ್ನು ಭಜಿಸಿದರೆ ಪುಣ್ಯಫಲ ಪ್ರಾಪ್ತಿಯಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಮಾ. 8ರಂದು ಸಂಜೆ 6ಕ್ಕೆ ಅಹೋರಾತ್ರಿ ಸಾಮೂಹಿಕ ಶಿವ ಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿ ಭಕ್ತರನ್ನುದ್ದೇಶಿಸಿ ಅವರು ಮಾತ ನಾಡಿದರು.
ಭಗವಂತನ ಆರಾಧನೆಯೊಂದಿಗೆ ನೀವು ನಿಮ್ಮೊಳಗಿನ ದರ್ಶನ ಮಾಡು ವುದು ಮುಖ್ಯ. ಒಳ್ಳೆಯ ಮಾತು, ವಿಚಾರಗಳು, ಚಿಂತನೆಗಳು ನಮ್ಮೊಳಗೆ ಹುಟ್ಟಿದಾಗ ಅದುವೇ ಮನಸ್ಸಿನ ಶುದ್ಧೀ ಕರಣ ವಾಗಿದೆ. ಹಾಗಾಗಿ ಹವ್ಯಾಸ, ನಮ್ಮ ಕೆಟ್ಟ ಸ್ವಭಾವನ್ನು ಬಿಟ್ಟು ಶಿವರಾತ್ರಿಯ ಶುಭರಾತ್ರಿಯಲ್ಲಿ ಶಿವನಾಮ ಸ್ಮರಣೆ ಮಾಡಿದರೆ ಸಕಲ ದೋಷಗಳು ಪರಿಹಾರವಾಗುತ್ತವೆ ಎಂದರು.
ಡಾ| ಹೇಮಾವತಿ ವೀ.ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಪಾದ ಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ, ಮರಿಯಪ್ಪ ಸ್ವಾಮಿ ಉಪಸ್ಥಿತರಿದ್ದರು. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಿಂದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪ್ರಕಾಶನದಲ್ಲಿ ಡಾ| ಪವನ್ ಸಂಪಾದಿಸಿದ ಆರೋಗ್ಯ ರಕ್ಷಣೆ ಮತ್ತು ರೋಗ ನಿವಾರಣೆ ಕುರಿತಾದ ವೈದ್ಯಾಮೃತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಹೆಣ್ಮಕ್ಕಳಿಗೆ ಗೌರವ ನೀಡಿ
ಮಹಿಳೆಯರಿಗೆ ಗೌರವ ಸ್ಥಾನಮಾನವನ್ನು ಇಂದು ಕಾನೂನು ಒದಗಿಸಿದೆ. ಆದರೆ ಶತಮಾನಗಳಿಂದ ಹೆಣ್ಣುಮ್ಮಕ್ಕಳಿಗೆ ಕೌಟುಂಬಿಕ ಪದ್ಧತಿಯಲ್ಲಿ ಗೌರವ ನೀಡುತ್ತ ಬಂದಿದ್ದೇವೆ. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವರು ನೊಂದು ಕಣ್ಣೀರು ಹಾಕಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಮಾತು ಬಹಳ ಮುಖ್ಯ. ಮಾತೇ ಮಾಣಿಕ್ಯ. ಮಾತು ಬಿಡ ಮಂಜುನಾಥ ಎಂಬ ಮಾತಿದೆ. ಮನ, ವಚನ, ಕಾಯದಿಂದ ಪರಿಶುದ್ಧರಾಗಿ ಶಿವರಾತ್ರಿ ಒಂದೇ ರಾತ್ರಿಗೆ ಸೀಮಿತವಾಗದೆ ಪ್ರತಿ ರಾತ್ರಿಯೂ ಶಿವರಾತ್ರಿಯಾಗಿ, ಶುಭ ತರಲಿ ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾರೈಸಿದರು.
ಕ್ಷೇತ್ರ ಸಿಂಗಾರ,
ಶಿವನಾಮ ಝೆಂಕಾರ
ಧರ್ಮಸ್ಥಳ ಕ್ಷೇತ್ರ, ಬೀಡು, ದೇಗುಲ, ಮಹಾದ್ವಾರ ಸಹಿತ ಎಲ್ಲೆಡೆ ವಿದ್ಯುದ್ದೀಪಗಳಿಂದ ಅಲಂಕೃತವಾಗಿತ್ತು. ಈ ನಡುವೆ ನಾಡಿನ ವಿವಿಧೆಡೆಗಳಿಂದ ಬಂದ ಭಕ್ತರು, ಪಾದಯಾತ್ರಿಗಳು ಅಹೋರಾತ್ರಿ ಶಿವನಾಮ ಜಪಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಬೆಂಗಳೂರು, ಹೊಸಪೇಟೆಯ 6 ತಂಡಗಳಿಂದ 610 ಸ್ವಯಂಸೇವಕರು 45 ಲಕ್ಷ ರೂ. ವೆಚ್ಚದಲ್ಲಿ ಸುಮಾರು 1.50 ಲಕ್ಷ ಮಂದಿಗೆ ವಿವಿಧ ಬಗೆಯಉಪಾಹಾರವನ್ನು ಒದಗಿಸಿ ಯಾತ್ರಾರ್ಥಿಗಳ ಸೇವೆ ಮಾಡಿದರು.