Manipur: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಬಾಂಬ್ ದಾಳಿ, ಹಿಂಸಾಚಾರದಲ್ಲಿ ಕಮಾಂಡೋ ಬಲಿ
Team Udayavani, Jan 17, 2024, 3:16 PM IST
ಇಂಫಾಲ್: ಮಣಿಪುರದಿಂದ 110 ಕಿಲೋ ಮೀಟರ್ ದೂರದಲ್ಲಿರುವ ರಾಜಧಾನಿ ಇಂಫಾಲ್ ನ ಗಡಿ ನಗರವಾದ ಮೊರೆಹ್ ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಘಟನೆಯಲ್ಲಿ ಪೊಲೀಸ್ ಕಮಾಂಡೋ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Yash ಅಭಿಮಾನಿಗಳ ಸಾವು ಪ್ರಕರಣ; ನಟ ಯಶ್ ಸ್ನೇಹಿತರಿಂದ ಮೃತರ ಕುಟುಂಬಕ್ಕೆ ಚೆಕ್ ವಿತರಣೆ
ಭಾರತ ಮತ್ತು ಮ್ಯಾನ್ಮಾರ್ ಗಡಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಮೊರೆಹ್ ನಲ್ಲಿ ಬುಧವಾರ (ಜನವರಿ 17) ಬೆಳಗ್ಗೆ ಹಿಂಸಾಚಾರ ಆರಂಭಗೊಂಡಿದ್ದು, ದಾಳಿಕೋರರು ಭದ್ರತಾ ಪಡೆಯ ಮೇಲೆ ಬಾಂಬ್ ಗಳನ್ನು ಎಸೆದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಬಾಂಬ್ ದಾಳಿಯಿಂದಾಗಿ ತಾತ್ಕಾಲಿಕ ಕಮಾಂಡೋ ಪೋಸ್ಟ್ ಹಾನಿಗೊಂಡಿದ್ದು, ಇದರ ಸುತ್ತಮುತ್ತ ನಿಲ್ಲಿಸಿದ್ದ ವಾಹನಗಳೂ ಹಾನಿಗೊಳಗಾಗಿರುವುದಾಗಿ ತಿಳಿಸಿದೆ.
ಮೊರೆಹ್ ನಲ್ಲಿ ಸಾವನ್ನಪ್ಪಿರುವ ಕಮಾಂಡೋವನ್ನು ಐಆರ್ ಬಿ ಸಿಬಂದಿ ವಾಂಗ್ ಖೇಮ್ ಸೊಮೊರ್ಜಿತ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಇಂಫಾಲ್ ನ ಪಶ್ಚಿಮ ಜಿಲ್ಲೆಯ ಮಾಲೋಮ್ ನವರು ಎಂದು ವರದಿ ವಿವರಿಸಿದೆ.
ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿರುವ ಘಟನೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಬುಡಕಟ್ಟು ಜನಾಂಗದ ವ್ಯಕ್ತಿಗಳನ್ನು ಬಂಧಿಸಿದ ನಂತರ ಕುಕಿ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಹಿಂಸಾಚಾರಕ್ಕೆ ತಿರುಗಿರುವುದಾಗಿ ವರದಿ ತಿಳಿಸಿದೆ.
ಶಸ್ತ್ರಸಜ್ಜಿತ ದಾಳಿಕೋರರು ಭದ್ರತಾ ಪಡೆಯ ಟ್ರಕ್ ಅನ್ನು ವಾಪಸ್ ಕಳುಹಿಸಲು ಪ್ರಯತ್ನಿಸುತ್ತಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಮೊರೆಹ್ ನಲ್ಲಿ ರಾಜ್ಯ ಪೊಲೀಸರನ್ನು ತೆರವುಗೊಳಿಸಿ, ಕೇಂದ್ರ ಪಡೆಯನ್ನು ಮಾತ್ರ ಮುಂದುವರಿಸಬೇಕು ಎಂದು ಕುಕಿ ಬುಡಕಟ್ಟು ಜನರು ಆಗ್ರಹಿಸಿದ್ದಾರೆ.
ಅಸ್ಸಾಂ ಪೊಲೀಸರು ಕುಕಿ ನಾಗರಿಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದು, ಈ ಆರೋಪವನ್ನು ಮಣಿಪುರ ಪೊಲೀಸರು ಅಲ್ಲಗಳೆದಿದ್ದಾರೆ.