ಹುಣಸೂರು: ಕಲ್ಲುರ್ಟಿ ಪಾಷಾಣ ಮೂರ್ತಿ ದೈವಸ್ಥಾನದಲ್ಲಿ ಸಂಭ್ರಮದ ಕೋಲ
ಕಾಂತಾರ ಎಫೆಕ್ಟ್ ; ವಾರ್ಷಿಕ ಆಚರಣೆ ನೋಡಲು ಮುಗಿಬಿದ್ದ ಜನರು: ನಿಯಂತ್ರಿಸಲು ಪೊಲೀಸರ ಹರಸಾಹಸ
Team Udayavani, Feb 23, 2023, 9:15 PM IST
ಹುಣಸೂರು: ಹುಣಸೂರಿನ ಕಲ್ಲುರ್ಟಿ ಪಾಷಾಣ ಮೂರ್ತಿ ಶಕ್ತಿ ದೇವತೆಯ ದೈವಸ್ಥಾನದ 5 ನೇ ವರ್ಷದ ವಾರ್ಷಿಕೋತ್ಸದ ಅಂಗವಾಗಿ ದೇವಾಲಯ ಆವರಣದಲ್ಲಿ ನೂರಾರು ಭಕ್ತರ ಜಯ ಉದ್ಘೋಷಗಳ ನಡುವೆ ಕೋಲ ವಿಜೃಂಭಣೆಯಿಂದ ಜರುಗಿತು.
ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಹೋಮ, ಪೂಜೆ, ಕಲ್ಲುರ್ಟಿ ದೇವಿಗೆ ಬಗೆಬಗೆಯ ಹೂವಿನಿಂದ ಶೃಂಗರಿಸಲಾಗಿತ್ತು. ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಯರಾಮ್, ಸೋಮವಾರಪೇಟೆ ಐಗೂರಿನ ಆನಂದ್ ಗುರುಜಿ ನೇತೃತ್ವದ ತಂಡ ಕೋಲವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ರಾತ್ರಿ ಆರಂಭವಾದ ಕೋಲವು ಮುಂಜಾನೆವರೆಗೆ ನಡೆಯಿತು. 5 ಸಾವಿರಕ್ಕೂ ಹೆಚ್ಚು ಭಕ್ತರು ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಸುಳ್ಯದ ಜಯರಾಮ್ ಗುರೂಜಿ, ಶ್ರೀನಿವಾಸ್, ಲೋಕೇಶ್, ರಾಮಕೃಷ್ಣ, ದೇವರಾಜ್ ಕೋಲ ಯಶಸ್ವಿಗಾಗಿ ಶ್ರಮಿಸಿದರು.
ಕಾಂತರ ಎಫೆಕ್ಟ್ ಮುಗಿಬಿದ್ದ ಜನ
ಕಳೆದ ನಾಲ್ಕು ವರ್ಷಗಳಿಂದ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಕೋಲದಲ್ಲಿ ದಕ್ಷಿಣಕನ್ನಡ, ಕೊಡಗಿನಿಂದ ಬಂದವರು ಹಾಗೂ ದೇವಾಲಯದವರು ಮಾತ್ರ ಭಾಗವಹಿಸಿ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಿದ್ದರು. ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಚಿತ್ರ ಕಂಡ ಜನರು ರಾತ್ರಿ 11ಕ್ಕೆ ಆರಂಭವಾದ ಕೋಲ ನೋಡಲು 8 ಗಂಟೆಯಿಂದಲೇ ತಂಡೋಪತಂಡವಾಗಿ ಆಗಮಿಸಿದ್ದರು, ಜನರನ್ನು ನಿಯಂತ್ರಿಸಲು ಪೊಲೀಸರು, ದೇವಸ್ಥಾನ ಆಡಳಿತ ಮಂಡಳಿಯವರು ಹರಸಾಹಸ ಪಟ್ಟರು.