ಗೋವಾ ಬಿಜೆಪಿಯಲ್ಲಿ ಆಂತರಿಕ ಗೊಂದಲ : ರಾಜ್ಯಪಾಲರಿಗೆ ದಿಗಂಬರ ಕಾಮತ್
Team Udayavani, Mar 19, 2022, 12:42 PM IST
ಪಣಜಿ: ಬಿಜೆಪಿಯಿಂದ ಸರ್ಕಾರ ಸ್ಥಾಪಿಸಲು ಇದುವರೆಗೂ ಸಾಧ್ಯವಾಗಿಲ್ಲಇದರಿಂದಾಗಿ ರಾಜ್ಯಪಾಲರು ಇನ್ನು ಕಾದು ನೋಡುತ್ತ ಸಮಯ ವ್ಯರ್ಥ ಮಾಡಬಾರದು ಎಂದು ಗೋವಾ ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್ ಆಗ್ರಹಿಸಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದಾನವಾಗಿದ್ದು, ಮತ ವಿಭಜನೆಯಿಂದಾಗಿ ಬಿಜೆಪಿಗೆ ಲಾಭವಾಗಿ ನಾವು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಬಿಜೆಪಿಯಲ್ಲಿ ಆಂತರಿಕ ಗೊಂದಲದಿಂದಾಗಿ ಇನ್ನೂ ಸರ್ಕಾರ ರಚನೆಯಾಗಿಲ್ಲ. ಇದರಿಂದಾಗಿ ಇನ್ನೂ ಸಮಯ ವ್ಯರ್ಥ ಮಾಡಬೇಡಿ ಎಂದು ದಿಗಂಬರ್ ಕಾಮತ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಬಿಜೆಪಿಯ ಸರ್ಕಾರ ರಚನೆ ಪ್ರಕ್ರಿಯೆ ನಡೆಸುವ ರೀತಿ ಪ್ರಶ್ನಾರ್ಹವಾಗಿದೆ. ಹೀಗಾಗಿ ವಿರೋಧಿ ಶಾಸಕರು ಮತ್ತು ಪಕ್ಷೇತರ ಶಾಸಕರು ಈ ಬಗ್ಗೆ ಯೋಚಿಸುವ ಸಮಯ ಬಂದಿದೆ. ಸರ್ಕಾರ ಸ್ಥಾಪನೆಯಾಗದೆಯೇ ಹಂಗಾಮಿ ಸಭಾಪತಿಗಳನ್ನು ಆಯ್ಕೆ ಮಾಡಿ ಶಾಸಕರಿಗೆ ಪ್ರಮಾಣವಚನ ಬೋಧಿಸಲಾಗಿದೆ. ಗೋವಾ ವಿಧಾನಸಭೆಯಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲ ಸಲ ಎಂದು ಕಾಮತ್ ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಮೈಕಲ್ ಲೋಬೊ ಮಾತನಾಡಿ, ಸರ್ಕಾರ ರಚನೆಗೆ ಕಾಲಹರಣ ಮಾಡದೆಯೇ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಅವಕಾಶ ಸಿಕ್ಕರೆ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಲು ಸಿದ್ಧವಿದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಇತರ ಶಾಸಕರು ಉಪಸ್ಥಿತರಿದ್ದರು.