ʻತಾಕತ್ತಿದ್ರೆ 175 ಸ್ಥಾನಗಳಿಗೆ ಸ್ಪರ್ಧಿಸಿʼ : ನಾಯ್ಡು-ಕಲ್ಯಾಣ್ಗೆ ಜಗನ್ಮೋಹನ್ ಸವಾಲ್
Team Udayavani, Feb 28, 2023, 5:32 PM IST
ಗುಂಟೂರು: ಆಂಧ್ರ ಪ್ರದೇಶದಲ್ಲಿ 2024 ರಲ್ಲಿ ಅಸೆಂಬ್ಲಿ ಚುನಾವಣೆ ಎದುರಿಸುತ್ತಿದೆಯಾದರೂ ಆಂಧ್ರ ರಾಜಕಾರಣದಲ್ಲಿ ಚುನಾವಣಾ ಕಾವು ಈಗಿಂದಲೇ ನಿಧಾನವಾಗಿ ಬಿಸಿಯೇರುತ್ತಿದೆ. ಈ ಮಧ್ಯೆ ವೈಎಸ್ಆರ್ ರೈತು ಭರೋಸಾ-ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಧನಸಹಾಯ ಬಿಡುಗಡೆ ಕಾರ್ಯಕ್ರಮಕ್ಕೆ ಗುಂಟೂರು ಜಿಲ್ಲೆಯ ತೆನಾಲಿಗೆ ಆಗಮಿಸಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ಧಾರೆ.
ಬಹಿರಂಗ ಸಭೆಯಲ್ಲಿ ಮಾತನಾಡಿದ ಜಗನ್ ಮೋಹನ್, ʻಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರಿಗೆ ತಾಕತ್ತಿದ್ದರೆ ಆಂಧ್ರ ಪ್ರದೇಶದ ಎಲ್ಲಾ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿʼ ಎಂದು ಬಹಿರಂಗವಾಗಿ ಸವಾಲೆಸೆದಿದ್ದಾರೆ.
ʻಮುಂಬರುವ ಉನಾವಣೆಯಲ್ಲಿ ನಾವು ಎಲ್ಲಾ 175 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಿದ್ದೇವೆ. ಆದರೆ ಇತರೆ ಪಕ್ಷಗಳಿಗೆ ಜನರ ಮುಂದೆ ಬರುವ ಧೈರ್ಯವೇ ಇಲ್ಲʼ ಎಂದು ಕಿಡಿ ಕಾರಿದ್ದಾರೆ.
ʻನಿಮಗೆ ನಮ್ಮ ಯೋಜನೆಗಳು ತಲುಪಿದ್ದರೆ ಮಾತ್ರ ನಮ್ಮನ್ನು ಬೆಂಬಲಿಸಿʼ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅವರು ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದ ವೈಎಸ್ಆರ್ ರೈತು ಭರೋಸಾ-ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಧನಸಹಾಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವೈಎಸ್ಆರ್ ರೈತು ಭರೋಸಾ-ಪಿಎಂ ಕಿಸಾನ್ ಯೋಜನೆಯಡಿ ಬರುವ ಸುಮಾರು 52 ಲಕ್ಷ ರೈತರ ಬ್ಯಾಂಕ್ ಖಾತೆಗೆ 1,090 ಕೋಟಿ ರೂ ವರ್ಗಾಯಿಸಿದ್ಧಾರೆ.
ಅಲ್ಲದೇ, ಮ್ಯಾಂಡೋಸ್ ಸೈಕ್ಲೋನ್ನಿಂದ ತತ್ತರಿಸಿದ್ದ ಸುಮಾರು 90,000 ರೈತರಿಗೆ 77 ಕೋಟಿ ಮೊತ್ತದ ಸಬ್ಸಿಡಿಯನ್ನೂ ಬಿಡುಗಡೆಗೊಳಿಸಿದ್ದಾರೆ.
ʻನಾವು ಕಳೆದ 4 ವರ್ಷಗಳಲ್ಲಿ ರಾಜ್ಯದ ಪ್ರತಿ ಕುಟುಂಬವನ್ನೂ ಮೇಲೆತ್ತುವ ಕೆಲಸ ಮಾಡಿದ್ದೇವೆ. ನಾವು ನೀಡಿದ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ಧೇವೆ. ಈ ಎಲ್ಲಾ ಸಾಧನೆಗಳ ಮೇಲೆ ನಿಂತು ನಿಮ್ಮ ಮಗ ನಿಮ್ಮ ಬಳಿಗೆ ಬಂದು ಧೈರ್ಯದಿಂದ ಮತ ಯಾಚಿಸುತ್ತಾನೆʼ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದು, ಈ ಕಾರ್ಯಕ್ರಮದ ಮೂಲಕ ಆಂಧ್ರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಇದನ್ನೂ ಓದಿ : ಜಮೀರ್ ಅಹ್ಮದ್ ಹಾಗೂ ಸಿದ್ದರಾಮಯ್ಯ ಟಿಪ್ಪು ರಕ್ತ ಹಂಚಿಕೊಂಡು ಹುಟ್ಟಿದ್ದಾರೆ: ಈಶ್ವರಪ್ಪ