Karnataka Election ನಾನು ಟೆಂಪಲ್ ರನ್ ಮಾಡುತ್ತಿಲ್ಲ:ಡಿ.ಕೆ.ಶಿವಕುಮಾರ್
Team Udayavani, Apr 24, 2023, 7:10 AM IST
ಕುಂದಾಪುರ: ನಾನು ಟೆಂಪಲ್ ರನ್ ಮಾಡುತ್ತಿಲ್ಲ. ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ. ನಮ್ಮ ಧರ್ಮ, ಸಂಸ್ಕೃತಿ, ದೇವರ ಬಗ್ಗೆ ನಂಬಿಕೆ ಇದೆ. ನಾನು ಹೋದ ಕ್ಷೇತ್ರದ ಎಲ್ಲ ದೇವಸ್ಥಾನಗಳಿಗೂ ಭೇಟಿ ಕೊಡುತ್ತಿದ್ದೇನೆ. ಪ್ರಾರ್ಥನೆ ಮಾಡುತ್ತಿದ್ದೇನೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೈಂದೂರಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಕನಕಪುರದ ಬಿಜೆಪಿ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಅವರು ಎಷ್ಟು ಬೇಕಾದರೂ ಪ್ರಚಾರ ಮಾಡಲಿ. ಅವರಿಗೆ ದೊಡ್ಡ ಅವಕಾಶವಿದೆ. ಯಾರ ಮನ ಬೇಕಾದರೂ ಒಲಿಸಲಿ. ಮತದಾರರ ಬಳಿ ಏನು ಬೇಕಾದರೂ ಕೇಳಿಕೊಳ್ಳಲಿ. ಅಶೋಕ್ಗೆ ಯಾವುದೇ ಅಡಚಣೆ ಮಾಡಲ್ಲ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಉಪ್ಪಿನಕಾಯಿ ಹಾಕಲು ಎಂದಿರುವ ಸಿಎಂ ಬೊಮ್ಮಾಯಿಗೆ ತಿರುಗೇಟು ನೀಡಿದ ಅವರು, ಬಿಜೆಪಿ ರಾಜ್ಯಾದ್ಯಂತ ಜಾಹೀರಾತನ್ನು ಕೊಟ್ಟಿದೆ ? ಮಹಿಳೆಯರಿಗೆ 2-3 ಸಾವಿರ ಹಣ ಕೊಡುವ ಭರವಸೆ ಕೊಟ್ಟಿದ್ದಾರೆ. ಬಜೆಟ್ನಲ್ಲಿ 1 ಸಾವಿರ ರೂ. ಕೊಡುವುದಾಗಿ ಘೋಷಿಸಿದ್ದಾರೆ. ಪ್ರಣಾಳಿಕೆಯಲ್ಲಿ 7-10 ಗಂಟೆ ಕರೆಂಟ್ ಕೊಡುತ್ತೇವೆ ಎಂದಿದ್ದಾರೆ ಯಾಕೆ ?ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದಾರೆ ಅದು ಯಾವ ಕಾರ್ಡ್? ಕಾಂಗ್ರೆಸ್ಗೆ ಬದ್ಧತೆಯಿದೆ. ಮೊದಲ ಕ್ಯಾಬಿನೆಟ್ನಲ್ಲಿ ನಾವು ಹೇಳಿದ್ದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.