ವಿಧವೆಯರ ಹೆಸರಿಗೆ “ಮಹಾ”ವಿವಾದ: ಸಚಿವನ ಹೇಳಿಕೆಗೆ ಭಾರೀ ವಿರೋಧ
ವಿಧವೆಯರನ್ನು ಗೌರವಿಸಲು "ಗಂಗಾ ಭಗೀರಥಿ" ಎಂದು ಸಂಬೋಧಿಸಬೇಕು ಎಂದಿದ್ದ ಮಂಗಳಪ್ರಭಾತ್ ಲೋಧಾ
Team Udayavani, Apr 15, 2023, 6:31 AM IST
ಮುಂಬೈ: ವಿಧವೆಯರನ್ನು ಸಮಾಜದಲ್ಲಿ ಗೌರವಿಸಲು “ಗಂಗಾ ಭಗೀರಥಿ” ಎಂದು ಸಂಬೋಧಿಸಬೇಕೆಂದು ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಮಂಗಳಪ್ರಭಾತ್ ಲೋಧಾ ಹೇಳಿಕೆ ನೀಡಿದ್ದು, ಈಗ ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಕೇಂದ್ರಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಲೋಧಾ, ಅಂಗವಿಕಲರನ್ನು ಸಮಾಜದಲ್ಲಿ ಗೌರವದಿಂದ ಗುರುತಿಸಲು ಪ್ರಧಾನಿ ದಿವ್ಯಾಂಗ ಎಂದು ಕರೆದಿದ್ದಾರೆ. ಅದೇ ರೀತಿ ವಿಧವೆಯರನ್ನು ಗೌರವದಿಂದ ಗಂಗಾ-ಭಗೀರಥಿ ಎಂದು ಸಂಬೋಧಿಸುವಂತೆ ಸಲಹೆ ನೀಡಿದ್ದರು. ಆದರೆ, ಈ ಪ್ರಸ್ತಾಪಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಗಂಗಾ ಭಾಗೀರಥಿ ಎಂಬ ಪದ ಎಲ್ಲ ಸಮುದಾಯದ ಮಹಿಳೆಯರಿಗೆ ಸೂಕ್ತವಲ್ಲ ಎನ್ನಲಾಗಿದೆ. ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಕೂಡ ಆಕ್ಷೇಪಿಸಿ ರಾಜ್ಯವು ಜೀಜಾಮಾತೆ, ಪುಣ್ಯಶ್ಲೋಕ ಅಹಲ್ಯಾಬಾಯಿ, ಕರ್ಣಜ್ಯೋತಿ, ಸಾವಿತ್ರಿಬಾಯಿಯಂಥ ಮಹಾನ್ ಮಹಿಳೆಯರನ್ನು ಕಂಡಿದೆ. ನಮ್ಮದು ಪ್ರಗತಿಪರ ರಾಜ್ಯ. ಕೂಡಲೇ ಸರ್ಕಾರ ಈ ಪ್ರಸ್ತಾಪ ಹಿಂಪಡೆಯಬೇಕು ಎಂದಿದ್ದಾರೆ.