ಅನಾಥ ಮಗುವಿಗೆ ‘ವೈಷ್ಣವಿ’ಎಂದು ನಾಮಕರಣ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ
Team Udayavani, Nov 20, 2021, 7:57 PM IST
ಚಿಕ್ಕೋಡಿ: ರಸ್ತೆ ಬದಿಯಲ್ಲಿ ಅಳುತ್ತಾ ಮಲಗಿರುವ ಅನಾಥ ಹಸುಗೂಸಿಗೆ ‘ವೈಷ್ಣವಿ’ ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ನಾಮಕರಣ ಮಾಡಿದರು.
ನಿಪ್ಪಾಣಿ ಮತಕ್ಷೇತ್ರದ ಮಮದಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅಂಬಿಕಾ ದೇವಸ್ಥಾನದಲ್ಲಿ ಅನಾಥ ಮಗುವಿನ ನಾಮಕರಣದಲ್ಲಿ ಪಾಲ್ಗೊಂಡು ಹೆಣ್ಣು ಮಗುವನ್ನು ಮುದ್ದಾಡಿದ ಪ್ರಸಂಗ ನಡೆಯಿತು.
ನಿಪ್ಪಾಣಿ ತಾಲೂಕಿನ ಸುಳಗಾಂವ ಗ್ರಾಮದ ಹದ್ದಿಯಲ್ಲಿ ರಸ್ತೆ ಬದಿಯಲ್ಲಿ 10 ದಿನದ ಹೆಣ್ಣು ಮಗು ಅಳುತ್ತಾ ಮಲಗಿತ್ತು.ಅದನ್ನು ಅಪ್ಪಾಚಿವಾಡಿ ಗ್ರಾಮದ ಅಮರ ಪವಾರ ಮತ್ತು ಶುಭಾಂಗಿ ಪವಾರ ಮಗುವಿನ ಎತ್ತಿಕೊಂಡು ಬಂದು ಸಾಕಿದ್ದಾರೆ. ಶನಿವಾರ ಮಮದಾಪೂರ ಗ್ರಾಮದಲ್ಲಿ ಅನಾಥ ಮಗುವಿನ ನಾಮಕರಣ ನಡೆಯಿತು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ತಾಯಿಯ ಬೆಚ್ಚಗಿನ ಮಡಿಲಲ್ಲಿರುವಬೇಕಿದ್ದ ಈ ಪುಟ್ಟ ಕಂದಮ್ಮ ರಸ್ತೆ ಬದಿ ಅನಾಥವಾಗಿ ಮಲಗಿತ್ತು. ಆಗಿನ್ನು ಆ ಕಂದಮ್ಮ ಹೊಸ ಪ್ರಪಂಚಕ್ಕೆ ಕಾಲಿಟ್ಟು 10 ದಿನಗಳಾಗಿತ್ತಷ್ಟೇ. ಈ ಸಂದರ್ಭದಲ್ಲಿ ಅನಾಥ ಮಗುವಿನ ಬಾಳಿಗೆ ಬೆಳಕಾದವರು ಅಮರ ಪವಾರ ಮತ್ತು ಶ್ರೀಮತಿ ಶುಭಾಂಗಿ ಪವಾರ ದಂಪತಿ. ಇವರು ಹಸುಗೂಸನ್ನು ರಕ್ಷಿಸಿ, ಆ ಕಂದಮ್ಮಳ ಬಾಳಿಗೆ ತಂದೆ-ತಾಯಿಯಾಗಿ, ಆಸರೆ ನೀಡುತ್ತಿದ್ದಾರೆ.
ಇಂದು ಪ್ರೀತಿ ಹಾಗೂ ಅಭಿಮಾನದಿಂದ ನನ್ನನ್ನು ಆಹ್ವಾನಿಸಿ, ಈ ಕೂಸಿಗೆ “ವೈಷ್ಣವಿ” ಎಂದು ನಾಮಕರಣ ಮಾಡಿದರು. ಪವಾರ ದಂಪತಿ ಇಂತಹ ಹಲವು ಅನಾಥ ಮಕ್ಕಳನ್ನು ಸಾಕಿ ಸಲಹುತ್ತಿದ್ದಾರೆ. ಇದರೊಂದಿಗೆ ವೃದ್ಧರಿಗೂ ಆಶ್ರಯ ನೀಡುತ್ತಿದ್ದು, ಅವರ ಈ ಮಾನವೀಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಾಳಾಸಾಹೇಬ ಕದಮ, ಸಂಜಯ ಅವಟೆ, ಗಜಾನನ ಮರಾಠೆ, ಬಾಳು ಬೆಳೆಕರ, ಪ್ರಕಾಶ ಪಾಟೀಲ, ರವಿ ಜೋಕಾರೆ ಶೀತಲ ಘೋರವಾದೆಡೆ, ತೌಶಿಫ್ ನದಾಫ್, ಸರಿತಾ ಪಾಟೀಲ ವೈಶಾಲಿ ಮಾನೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.