ದೇಶದ್ರೋಹ ಕಾಯ್ದೆಗೆ ತಡೆ; ಜೈಲಿನಲ್ಲಿದ್ದವರಿಗೆ ರಿಲೀಫ್, ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ?
ಇದೇ ಮೊದಲ ಬಾರಿಗೆ ದೇಶದ್ರೋಹ ಪ್ರಕರಣವಾದ ಸೆಕ್ಷನ್ 124 ಎ ಅನ್ನು ಅಮಾನತ್ತಿನಲ್ಲಿಡಲಾಗಿದೆ.
Team Udayavani, May 11, 2022, 12:58 PM IST
ನವದೆಹಲಿ: ಕೇಂದ್ರ ಸರ್ಕಾರ ದೇಶದ್ರೋಹ ಕಾಯ್ದೆಯ ಮರುಪರಿಶೀಲನೆ ಅಂತಿಮಗೊಳ್ಳುವವರೆಗೆ ದೇಶದ್ರೋಹ ಕಾಯ್ದೆಯನ್ನು ಬಳಸಬಾರದು. ಹಾಗೂ ಬಾಕಿ ಉಳಿದಿರುವ ಎಲ್ಲಾ ದೇಶದ್ರೋಹ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ಬುಧವಾರ (ಮೇ 11) ತಡೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಧ್ವನಿವರ್ಧಕ ಬಳಕೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆ ವರೆಗೆ ಅವಕಾಶವಿಲ್ಲ!
ದೇಶದ್ರೋಹ ಕಾಯ್ದೆಯನ್ನು ಮರು ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ಕಾಯ್ದೆಯನ್ನು ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಪೀಠ ಕೇಂದ್ರ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ಒಂದು ವೇಳೆ ದೇಶದ್ರೋಹದ ಹೊಸ ಪ್ರಕರಣಗಳು ದಾಖಲಾದರೆ, ಸಂಬಂಧಪಟ್ಟವರು ಅದನ್ನು ತ್ವರಿತವಾಗಿ ವಿಲೇವಾರಿ ಮಾಡಲು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸಿಜೆಐ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ದೇಶದ್ರೋಹ ಪ್ರಕರಣವಾದ ಸೆಕ್ಷನ್ 124 ಎ ಅನ್ನು ಅಮಾನತ್ತಿನಲ್ಲಿಡಲಾಗಿದೆ. ಮುಂದಿನ ಆದೇಶ ನೀಡುವವರೆಗೂ ಸೆಕ್ಷನ್ 124ಎ ಅನ್ನು ಅನಿರ್ದಿಷ್ಟಾವಧಿವರೆಗೆ ಅಮಾನತ್ತಿನಲ್ಲಿಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಕುರಿತು ರಾಜ್ಯ ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಸ್ವತಂತ್ರವಾಗಿರುವುದಾಗಿ ಸುಪ್ರೀಂ ಪೀಠ ತಿಳಿಸಿದೆ. ಬಾಕಿ ಉಳಿದಿರುವ ದೇಶದ್ರೋಹ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದ್ರೋಹ ಆರೋಪದಡಿ ಜೈಲುಶಿಕ್ಷೆ ಅನುಭವಿಸುತ್ತಿರುವವರು ನಿಗದಿಪಡಿಸಿದ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ದೇಶದ್ರೋಹ ಕಾಯ್ದೆಯ ಸೆಕ್ಷನ್ 124 ಎ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸೋಮವಾರ ವಾದ ಮಂಡಿಸಿದ್ದ ಕೇಂದ್ರ ಸರ್ಕಾರ, ಕಾಯ್ದೆಯ ಮರು ಪರಿಶೀಲನೆಗೆ ತಾನು ಸಿದ್ಧ ಎಂದಿತ್ತು.
ಇದಕ್ಕೆ ಮಂಗಳವಾರದ ವಿಚಾರಣೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ, ದೇಶದ್ರೋಹ ಕಾಯ್ದೆಯನ್ನು ಮರುಪರಿಶೀಲನೆಗೆ ಒಳಪಡಿಸುವುದಾದರೆ, ಈಗಾಗಲೇ ದಾಖಲಾಗಿರುವ ಪ್ರಕರಣಗಳು ಮತ್ತು ಮುಂದೆ ದಾಖಲಾಗುವ ಪ್ರಕರಣಗಳ ಕಥೆ ಏನು ಎಂಬ ಬಗ್ಗೆ ಸ್ಪಷ್ಟನೆ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಿ, ಬುಧವಾರಕ್ಕೆ (ಮೇ 11) ವಿಚಾರಣೆ ಮುಂದೂಡಿತ್ತು.