ಮೀಸಲಾತಿ ಕೂಗು; ಸರಕಾರದ ಹೊಸ ತಂತ್ರ: ಲಿಂಗಾಯತ, ಒಕ್ಕಲಿಗರಿಗೆ ಪ್ರತ್ಯೇಕ ಕೆಟಗರಿ
Team Udayavani, Dec 29, 2022, 7:43 PM IST
ಬೆಳಗಾವಿ: ಕರ್ನಾಟಕದ ಪ್ರಬಲ ಸಮುದಾಯದಗಳಾಗಿರುವ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಎರಡು ಪ್ರತ್ಯೇಕ ಕೆಟಗರಿಗಳನ್ನು ಗುರುವಾರ (ಡಿ 29) ಅಸ್ತಿತ್ವಕ್ಕೆ ತಂದಿದೆ.
3ಎನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2ಸಿ ವರ್ಗ ಹಾಗೂ 3ಬಿಯಲ್ಲಿದ್ದ ಲಿಂಗಾಯತರಿಗೆ 2ಡಿ ಎಂಬ ಮೀಸಲಾತಿ ವರ್ಗ ರಚಿಸಲು ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಚುನಾವಣೆ ಸಮೀಪದಲ್ಲೇ ಇರುವ ವೇಳೆ ನಿರ್ಣಾಯಕ ಪ್ರಬಲ ಸಮುದಾಯದ 2 ಎ ಮೀಸಲಾತಿ ಕೂಗು ಸರಕಾರಕ್ಕೆ ಹೊಸ ಸವಾಲು ತಂದೊಡ್ಡಿತ್ತು. ಕೊನೆಗೂ 2ಸಿ ಮತ್ತು 2ಡಿ ರಚನೆ ಮಾಡಿ ಹೊಸ ತಂತ್ರ ಮಾಡಿ ಪಾರಾಗಿದೆ.
ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಮಾತನಾಡಿ ಈ ಹೊಸ ಕೆಟಗರಿಗಳಿಂದ 2 ಎ ಮತ್ತು 2 ಬಿ ಮೀಸಲಾತಿ ಹೊಂದಿರುವವರಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಸದ್ಯಕ್ಕೆ ವಿಜಯೋತ್ಸವವೂ ಬೇಡ, ವಿರೋಧವೂ ಬೇಡ: ಕೂಡಲಸಂಗಮ ಶ್ರೀ ಮನವಿ
2ಎ ಮೀಸಲಾತಿಗಾಗಿ ಹೋರಾಟ ಮಾಡಿದ್ದ ಪಂಚಮಸಾಲಿ ಸಮುದಾಯದ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಪ್ರತಿಕ್ರಿಯಿಸಿ ,ಮಾನ್ಯ ಸಿಎಂ ಡಿ.29ರಂದು ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದರು.ಮಾಧುಸ್ವಾಮಿ ಹೇಳಿಕೆ ಬಗ್ಗೆ ಸ್ಪಷ್ಟ ನಿಖರ ಮಾಹಿತಿ ಸಿಕ್ಕಿಲ್ಲ. ಈರಣ್ಣ ಕಡಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಾತನಾಡಿದ್ದೇನೆ. ಅವರು ಬರ್ತಾರೆ ಅವರು ಬಂದ ಮೇಲೆ ಚರ್ಚಿಸಿ ನಿರ್ಧಾರ ತಿಳಿಸುತ್ತೇನೆ. ಸ್ಪಷ್ಟ ಮಾಹಿತಿ ಗೊತ್ತಿಲ್ಲ, ಕ್ಯಾಬಿನೆಟ್ ಪ್ರತಿ ನಮಗೆ ಸಿಕ್ಕಿಲ್ಲ.ಸ್ಪಷ್ಟವಾದ ಮಾಹಿತಿ ಜನರಿಗೆ ತಿಳಿಸುತ್ತೇವೆ. ಈಗಲೇ ವಿಜಯೋತ್ಸವ, ತಿರಸ್ಕಾರ ಯಾವುದೇ ತೀರ್ಮಾನ ಕೈಗೊಳ್ಳಬೇಡಿ. ಎಲ್ಲ ವಿಚಾರ ತಿಳಿದುಕೊಂಡು ಮಾಹಿತಿ ನೀಡುತ್ತೇನೆ ಎಂದರು.
ಪಂಚಮಸಾಲಿ ಸಮಾಜದ ಕಾರ್ಯಕಾರಣಿ ಸಭೆ ಹಿನ್ನೆಲೆಯಲ್ಲಿ ಮುಖಂಡರು, ಪದಾಧಿಕಾರಿಗಳು ಕೂಡ ಆಗಮಿಸಿದ್ದರು.
ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಚನ್ನಮ್ಮ ವೃತ್ತದಲ್ಲಿ ಪೋಲಿಸ್ ಭದ್ರತೆ ಕೈಗೊಳ್ಳಲಾಗಿದ್ದು, ಕೆಎಸ್ಆರ್ ಪಿ ಹಾಗೂ ಸಿಎಆರ್,ಪೋಲಿಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ.