ಬೆಳ್ತಂಗಡಿ : ಬೈಕ್ ಸ್ಕಿಡ್ ಆಗಿ ಸವಾರ ಸಾವು; ಮತ್ತೊಬ್ಬ ಗಂಭೀರ
Team Udayavani, May 9, 2022, 5:28 PM IST
ಬೆಳ್ತಂಗಡಿ: ಕೆಲಸ ಮುಗಿಸಿ ಬರುವ ವೇಳೆ ಬೈಕ್ ಸ್ಕಿಡ್ ಆಗಿ ಮಗುಚಿಬಿದ್ದು ಅವಿವಾಹಿತ ಯುವಕ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಕಡಿರುದ್ಯಾವರ ಗ್ರಾಮದ ಹೇಡ್ಯ ನಾರಾಯಣ ದೇವಾಡಿಗ ಎಂಬವರ ಪುತ್ರ ಯಶೋಧರ ದೇವಾಡಿಗ(30) ಮೃತಪಟ್ಟ ಯುವಕ. ಸಹಸವಾರ ನೆರೆಕರೆಯ ಅಶೋಕ(35) ಗಂಭೀರ ಗಾಯಗೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ದಿಡುಪೆ ರಸ್ತೆಯ ಶಾರದಾ ನಗರದ ದೇವಿ ಗುಡಿ ಸಮೀಪ ತಡರಾತ್ರಿ 11.30 ರ ಸುಮಾರಿಗೆ ಅಪಘಾತವಾಗಿದ್ದು, ಗಾಯಗೊಂಡ ಅಶೋಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕತ್ತಿಯಿಂದ ಹಲ್ಲೆ:ದೂರು ದಾಖಲು
ಬೆಳ್ತಂಗಡಿ: ನೀರಿನ ಪೈಪ್ ಒಡೆದು ಹಾಕಿದ ವಿಚಾರದಲ್ಲಿ ಪೊಲೀಸ್ ದೂರು ನೀಡಿದ ವ್ಯಕ್ತಿಗೆ ನೆರೆಕರೆಯ ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯದಿಂದ ವರದಿಯಾಗಿದೆ.
ಆರೋಪಿ ವಾಸು ಗೌಡ (67) ಎಂಬವರ ಮೇಲೆ ಲೂಯಿಸ್ ಎಂಬವರು ಕುಡಿಯುವ ನೀರಿನ ಪೈಪ್ ಒಡೆದು ಹಾಕಿದ ವಿಚಾರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೇ 4 ರಂದು ದೂರು ದಾಖಲಿಸಿದ್ದರು.
ಮೇ 8ರಂದು ಲೂಯಿಸ್ ಅವರು ಇಲ್ಲಿನ ಮಲ್ಲಡ್ಕ ಸಮೀಪ ರಸ್ತೆ ಬದಿ ನಿಂತಿದ್ದಾಗ ಆರೋಪಿಯು ಕತ್ತಿಯಿಂದ ಕಡಿದು ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.
ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.