ಅಂಜನಾದ್ರಿಗೆ ಶ್ರೀಕೃಷ್ಣ ಜನ್ಮಭೂಮಿ ಮಥುರಾಶ್ರಮದಿಂದ 251 ಕೆಜಿ ಘಂಟೆ ದೇಣಿಗೆ
Team Udayavani, Mar 5, 2022, 8:21 PM IST
ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಯ ದೇವಾಲಯಕ್ಕೆ ಶ್ರೀಕೃಷ್ಣಜನ್ಮಭೂಮಿ ಮಥುರಾಶ್ರಮದಿಂದ ಸುಮಾರು 2.1೦ ಲಕ್ಷ ರೂ. ಮೌಲ್ಯದ 251 ಕೆಜಿ ಘಂಟೆಯನ್ನು ದೇಣಿಗೆಯಾಗಿ ನೀಡಲಾಗಿದೆ.
ಈ ಹಿಂದೆ ಶ್ರೀಕೃಷ್ಣಜನ್ಮಭೂಮಿ ಮಥುರಾಶ್ರಮದಿಂದ ಅಂಜನಾದ್ರಿ ದೇವಾಲಯಕ್ಕೆ ಆಗಮಿಸಿದ್ದ ಮಥುರಾಶ್ರಮದಿಂದ ಸದಸ್ಯರು ಅಂಜನಾದ್ರಿಯಲ್ಲಿ ಮಥುರಾ ಶ್ರೀಕೃಷ್ಣಜನ್ಮ ಭೂಮಿಯ ಸೂಚಕವಾದ ವಸ್ತುಗಳಿರಬೇಕು. ಆದ್ದರಿಂದ ಶ್ರೀಕೃಷ್ಣಜನ್ಮಭೂಮಿ ಮಥುರಾಶ್ರಮದಿಂದ ಬೃಹತ್ ಘಂಟೆ ದೇಣಿಗೆ ನೀಡುವ ಹರಕೆ ಮಾಡಿಕೊಂಡು ಮಥುರಾಕ್ಕೆ ತೆರಳಿದ ನಂತರ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಇವರನ್ನು ಸಂಪರ್ಕ ಮಾಡಿ ಮಥುರಾದಿಂದ ವಾಹನದಲ್ಲಿ ಶುಕ್ರವಾರ ಅಂಜನಾದ್ರಿಗೆ ಘಂಟೆಯನ್ನು ಕಳುಹಿಸಲಾಗಿದೆ. ಸುಮಾರು ೧೦ ಜನ ಕೂಲಿಕಾರರು ಘಂಟೆಯನ್ನು ಬೆಟ್ಟದ ಮೇಲಕ್ಕೆ ಕಟ್ಟಿಗೆ ಸಹಾಯದಿಂದ ಸಾಗಿಸಿದರು.
ಮಥುರಾಶ್ರಮದ ಹರಕೆ
ಇತ್ತೀಚೆಗೆ ಅಂಜನಾದ್ರಿಗೆ ಭೇಟಿ ನೀಡಿದ್ದ ಶ್ರೀಕೃಷ್ಣಜನ್ಮಭೂಮಿ ಮಥುರಾಶ್ರಮದ ಸದಸ್ಯರು ಅಪೇಕ್ಷೆಯಿಂದ ಘಂಟೆಯ ಹರಕೆ ಹೊತ್ತು ಸುಮಾರು ೨.೧೦ ರೂ.ಗಳ ಮೌಲ್ಯದ ೨೫೧ ಕೆಜಿಯ ಘಂಟೆಯನ್ನು ಕಳುಹಿಸಿದ್ದಾರೆ. ಅಂಜನಾದ್ರಿಗೂ ಉತ್ತರ ಭಾರತದ ರಮಾನಂದ ತೀರ್ಥರ ಪರಂಪರೆಯ ಸಾಧು ಸಂತರ ಶತಮಾನಗಳಿಗಿಂತಲೂ ಹೆಚ್ಚು ಸಂಪರ್ಕವಿದ್ದು ಈಗಲೂ ಅಯೋಧ್ಯೆ, ಮಥುರಾ, ಕಾಶಿ ಸೇರಿ ಉತ್ತರ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅಂಜನಾದ್ರಿ ಕಿಷ್ಕಿಂದಾ, ಮಧುವನ, ವಾಲೀ ಬಂಡಾರ, ಚಿಂತಾಮಣಿ, ಋಷಿಮುಖ ಪರ್ವತ ಸೇರಿ ಇಲ್ಲಿಯ ಕ್ಷೇತ್ರಗಳ ಸ್ಮರಣೆಯಾಗುತ್ತದೆ. ಆದ್ದರಿಂದ ಚಾರಧಾಮ ಯಾತ್ರೆಯಲ್ಲಿ ಪಂಪಾಸರೋವರ ಕಿಷ್ಕಿಂದಾ ಕ್ಷೇತ್ರವೂ ಸೇರಿದೆ ಎಂದು ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಉದಯವಾಣಿ ಜತೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.