ನಿರ್ಬಂಧದ ಮಧ್ಯೆಯೂ ಅಂಜನಾದ್ರಿಗೆ ಹರಿದು ಬಂದ ಕೇಸರಿಧಾರಿ ಹನುಮಭಕ್ತರು
ಕಿ.ಮೀ.ಗಟ್ಟಲೇ ಕ್ಯೂ ನಿಂತ ಮಾಲಾಧಾರಿಗಳು, ಪೊಲೀಸರ ಹರ ಸಾಹಸ
Team Udayavani, Dec 16, 2021, 7:24 PM IST
ಗಂಗಾವತಿ: ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧದ ಮಧ್ಯೆಯೂ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿಗೆ ಸಹಸ್ರಾರು ಸಂಖ್ಯೆಯಲ್ಲಿ ಕೇಸರಿಧಾರಣೆ ಮಾಡಿದ ಹನುಮಭಕ್ತರ ದಂಡು ನಾಡಿನ ವಿವಿಧ ಜಿಲ್ಲೆಗಳಿಂದ ಹರಿದು ಬಂತು. ಇಡೀ ಅಂಜನಾದ್ರಿ ಹಾಗೂ ಸುತ್ತಲೀನಾ ಪ್ರದೇಶ ಗುರುವಾರ ಕೇಸರಿಮಯವಾಗಿತ್ತು.
ಒಂದು ತಿಂಗಳ ಕಾಲ ಹನುಮಾಲೆಯನ್ನು ಧರಿಸಿ ವೃತನಿಯಮ ಪಾಲಿಸಿದ ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಿ ಮಾಲೆ ವಿಸರ್ಜನೆ ಮಾಡುವುದು ವಾಡಿಕೆಯಾಗಿದ್ದು, ಅಂಜನಾದ್ರಿಯಲ್ಲಿ ಬೆಳಗಿನ ಜಾವದಿಂದಲೇ ಹನುಮಮಾಲೆಧಾರಿಗಳು ತುಂಗಭದ್ರಾ ನದಿ ಹಾಗೂ ಎಡದಂಡೆ ಕಾಲುವೆಯ ಉಪಕಾಲುವೆಗಳಲ್ಲಿ ಮಿಂದು ಸ್ವಯಂ ಪ್ರೇರಣೆಯಿಂದ ಮಾಲೆ ವಿಸರ್ಜನೆ ಮಾಡಿ ಧಾರ್ಮಿಕ ವಿಧಿವಿಧಾನ ಮಾಡಿದರು.
ಅಂಜನಾದ್ರಿಗೆ ಆಗಮಿಸುವ ಹನುಮಭಕ್ತರಿಗೆ ಅನಾನುಕೂಲವಾಗದಂತೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ತಾಲೂಕು ಆಡಳಿತ ಸಂಚಾರ ಸುಗಮ ಹಾಗೂ ವಾಹನಗಳ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಭಜರಂಗದಳ, ವಿಶ್ವಹಿಂದು ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರು ಹನುಮಭಕ್ತರಿಗೆ ಅನ್ನಪ್ರಸಾದ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡಿದ್ದರು.
ಇದನ್ನೂ ಓದಿ :ಅಪ್ಪು ಫೋಟೋದೊಂದಿಗೆ ಅಂಜನಾದ್ರಿಗೆ: ಅಭಿಮಾನ ಮೆರೆದ ಹನುಮ ಭಕ್ತರು
ಜತೆಗೆ ಹನುಮನಹಳ್ಳಿ, ಸಾಣಾಪೂರ, ಆನೆಗೊಂದಿ ಚಿಕ್ಕರಾಂಪೂರ ಸೇರಿ ಅಂಜನಾದ್ರಿಯ ಸುತ್ತಲಿನ ಗ್ರಾಮಗಳಲ್ಲಿ ಯುವಕರು ಸ್ವಯಂ ಪ್ರೇರಣೆಯಿಂದ ಪಾದಯಾತ್ರೆಯಲ್ಲಿ ಬರುವ ಹನುಮಭಕ್ತರಿಗೆ ಉಪಹಾರ ಶುದ್ಧ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ ಭಕ್ತಿ ಮೆರೆದರು.
ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ತಹಶೀಲ್ದಾರ್ ಯು.ನಾಗರಾಜ ಸೇರಿ ಸುತ್ತಲಿನ ಗ್ರಾಮಗಳ ಜನರು ಭಾಗಿಯಾಗಿದ್ದರು.