ಬ್ರಹ್ಮಾವರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು
Team Udayavani, Jan 19, 2022, 7:33 PM IST
ಉಡುಪಿ: ಬ್ರಹ್ಮಾವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಜನವರಿ 19, ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಉದ್ಯಾವರ ಅಂಕುದ್ರುವಿನ ಅನಿಲ್ ಪಿಂಟೋ ಎಂಬವರ ಪತ್ನಿ ಸರಿತಾ ಪಿಂಟೋ (38) ಎನ್ನುವವರಾಗಿದ್ದಾರೆ.
ಜನವರಿ 17 ರಂದು, ಸರಿತಾ, ಅವರು ಪತಿ ಮತ್ತು 3 ವರ್ಷದ ಮಗನೊಂದಿಗೆ ಕೋಟದಲ್ಲಿರುವ ಸರಿತಾ ಅವರ ಪೋಷಕರನ್ನು ಭೇಟಿ ಮಾಡಲು ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಬ್ರಹ್ಮಾವರದಲ್ಲಿ ಸ್ಕೂಟರ್ ಸ್ಕಿಡ್ ಆಗಿದೆ. ಹಿಂಬದಿ ಸವಾರಿ ಮಾಡುತ್ತಿದ್ದ ಸರಿತಾ ಅವರ ತಲೆಗೆ ಗಂಭೀರ ಗಾಯವಾಗಿತ್ತು.
ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಗಾಯವಾದ ಕಾರಣ ಸರಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಅದೃಷ್ಟವಶಾತ್ ಅವರ ಪತಿ ಅನಿಲ್ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರಿತಾ ಅವರು ಪತಿ, ಇಬ್ಬರು ಚಿಕ್ಕ ಮಕ್ಕಳನ್ನು (ಮಗಳು ಮತ್ತು ಮಗ) ಅಗಲಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.