ಬೋಟ್ ಚಾಲಕನ ಸಮಯಪ್ರಜ್ಞೆ: ದುಬಾರೆಯಲ್ಲಿ ತಪ್ಪಿದ ಭಾರೀ ದುರಂತ
Team Udayavani, Jul 9, 2022, 7:30 PM IST
ಮಡಿಕೇರಿ: ಜನರನ್ನು ಸಾಗಿಸುತ್ತಿದ್ದ ಬೋಟ್ ವೊಂದು ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ತಾಂತ್ರಿಕ ದೋಷದಿಂದ ಸಿಲುಕಿದ ಘಟನೆ ದುಬಾರೆಯಲ್ಲಿ ನಡೆದಿದೆ.
ದುಬಾರೆ ಸಾಕಾನೆ ಶಿಬಿರದ ಬಳಿ ವಾಸವಿರುವ ಹಾಡಿ ಜನ ಮಳೆಗಾಲದಲ್ಲಿ ನದಿ ದಾಟಲು ಬೋಟ್ ಅನ್ನು ಅವಲಂಬಿಸಿದ್ದಾರೆ. ಅದರಂತೆ ಶನಿವಾರ ಹಾಡಿಯ 10ಕ್ಕೂ ಹೆಚ್ಚು ಮಂದಿ ಬೋಟ್ ನಲ್ಲಿ ಹೊರಟಿದ್ದು, ಉಕ್ಕಿ ಹರಿಯುತ್ತಿರುವ ಕಾವೇರಿ ನದಿ ಮಧ್ಯ ತೆರಳುತ್ತಿದ್ದಂತೆಯೇ ಬೋಟ್ನ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಥಗಿತಗೊಂಡಿದೆ. ಪ್ರವಾಹದ ನೀರಿನಲ್ಲಿ ಬೋಟ್ ತೇಲಿಕೊಂಡು ಹೋಗುತ್ತಿದ್ದ ಸಂದರ್ಭ ಬೋಟ್ ಚಾಲಕ ಸಮಯಪ್ರಜ್ಞೆ ಮೆರೆದು ನದಿ ಮಧ್ಯದಲ್ಲಿದ್ದ ಮರದ ಕೊಂಬೆ ಹಿಡಿದು ಬೋಟ್ ಕೊಚ್ಚಿ ಹೋಗದಂತೆ ತಡೆಯುವಲ್ಲಿ ಸಫಲರಾಗಿದ್ದಾರೆ.
ಬಳಿಕ ಮತ್ತೊಂದು ಬೋಟ್ ಸಹಾಯಕ್ಕೆ ಧಾವಿಸಿ ತಾಂತ್ರಿಕ ದೋಷ ಕಂಡು ಬಂದಿದ್ದ ಬೋಟ್ನಲ್ಲಿದ್ದ ಎಲ್ಲಾ ಹಾಡಿ ನಿವಾಸಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತರುವಲ್ಲಿ ಸಫಲರಾಗಿದ್ದಾರೆ. ಸಂಭಾವ್ಯ ಭಾರೀ ದುರಂತವೊಂದು ತಪ್ಪಿದಂತಾಗಿದ್ದು, ನೋಡುಗರು ನಿಟ್ಟುಸಿರು ಬಿಡುವಂತಾಯಿತು.
ಕಾವೇರಿಗೆ ಹರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ
ಮಡಿಕೇರಿ: ಪ್ರವಾಹ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ವ್ಯಕ್ತಿಯೊಬ್ಬ ಹಾರಿ ಆತ್ಮಹತೈಗೆ ಯತ್ನಿಸಿದ ಘಟನೆ ಕುಶಾಲನಗರದ ಕೊಪ್ಪ ಸೇತುವೆ ಬಳಿ ನಡೆದಿದೆ.
ಕೊಪ್ಪ ಬಳಿ ವರ್ಕ್ ಶಾಪ್ ನಲ್ಲಿ ಲೇತ್ ಕೆಲಸ ಮಾಡುವ ಗಣೇಶ್ ಎಂಬಾತ ದ್ವಿಚಕ್ರ ವಾಹನದಲ್ಲಿ ಕೊಪ್ಪ ಸೇತುವೆ ಬಳಿ ಬಂದು ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಗಣೇಶ್ನನ್ನು ನೋಡಿದ ಸಾರ್ವಜನಿಕರು ವ್ಯಕ್ತಿಯನ್ನು ರಕ್ಷಿಸುವಂತೆ ಕೂಗಿದ್ದಾರೆ. ಈ ವೇಳೆ ಚಂದ್ರು, ರಾಜು ಹಾಗೂ ಸಲೀಂ ಎಂಬುವವರು ತೆಪ್ಪದಲ್ಲಿ ತೆರಳಿ ಗಣೇಶ್ನನ್ನು ರಕ್ಷಿಸಿದ್ದಾರೆ. ಕುಶಾಲನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾನೆ.