ಜಲಪ್ರಳಯ: ನಿರಾಶ್ರಿತ ಕೇಂದ್ರಗಳಲ್ಲಿ 10.50 ಲಕ್ಷ ಮಂದಿ
Team Udayavani, Aug 21, 2018, 6:00 AM IST
ಕಾಸರಗೋಡು: ಕೇರಳದಲ್ಲಿ ಭಾರೀ ಮಳೆ ಸಾಧ್ಯತೆಯಿಲ್ಲವೆಂದೂ, ಹನಿ ಮಳೆಯಾಗಲಿದೆ ಎಂದೂ ಹವಾಮಾನ ವೀಕ್ಷಣೆ ಕೇಂದ್ರ ಹೇಳಿರುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಪ್ರಸ್ತುತ ಇದ್ದ ಮುನ್ನೆಚ್ಚರಿಕೆ ನಿರ್ದೇಶವನ್ನು ಹಿಂದೆಗೆದುಕೊಳ್ಳಲಾಗಿದೆ. ಕಳೆದ 24 ಗಂಟೆಗಳೊಳಗೆ ಎಲ್ಲೂ ಭಾರೀ ಮಳೆಯಾಗದಿರುವುದರಿಂದ ಸಮಾಧಾನದ ನಿಟ್ಟುಸಿರು ಬಿಡಲು ಕಾರಣವಾಗಿದೆ. ಮಳೆಯ ಬಿರುಸು ಕಡಿಮೆಯಾಗಿದ್ದರೂ ಪ್ರಳಯ ಬಾಧಿತ ಪ್ರದೇಶಗಳಾದ ಪತ್ತನಂತಿಟ್ಟ, ಎರ್ನಾಕುಳಂ ಮತ್ತು ತೃಶ್ಶೂರು ಜಿಲ್ಲೆಗಳಲ್ಲಿ ಸ್ಥಿತಿ ಶೋಚನೀಯಾವಸ್ಥೆಯಲ್ಲಿದೆ. ಹಲವಾರು ಮಂದಿ ವಿವಿಧೆಡೆ ಸಿಲುಕಿಕೊಂಡಿದ್ದಾರೆ.
ಇತಿಹಾಸದಲ್ಲಿ ಈ ಹಿಂದೆ ಎಂದೂ ಕಂಡರಿಯದ ಜಲ ಪ್ರಳಯ ದುರಂತದಿಂದ ಮಳೆ ಕಡಿಮೆಯಾಗಿರುವುದರಿಂದ ಕೇರಳ ದಡ ಸೇರುತ್ತಿದ್ದು, ಸಂತ್ರಸ್ತರಲ್ಲಿ ಹೊಸ ಆಶಾಕಿರಣ ಮೂಡತೊಡಗಿದೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಕುಸಿದಿದ್ದು, ಅದರ ಜತೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟವೂ ಇಳಿಯತೊಡಗಿದೆ. ಅಣೆಕಟ್ಟುಗಳಲ್ಲೂ ನೀರಿನ ಮಟ್ಟ ನಿಧಾನವಾಗಿ ಇಳಿಯತೊಡಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ನದಿಗಳಲ್ಲಿ ಮೃತ ದೇಹಗಳು ತೇಲಿಕೊಂಡು ಬರತೊಡಗಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಆ.19 ರಂದು 30 ಮೃತದೇಹಗಳು ಪತ್ತೆಯಾಗಿವೆ. ಮಾತ್ರವಲ್ಲ 22,034 ಮಂದಿಯನ್ನು ಪ್ರವಾಹದ ಹಿಡಿತದಿಂದ ರಕ್ಷಿಸಲಾಗಿದೆ. 2,324 ಮಂದಿಯನ್ನು ಹೆಲಿಕಾಪ್ಟರ್ಗಳಲ್ಲಿ ವಾಯು ಪಡೆ ರಕ್ಷಿಸಿದರೆ, 1500 ಮಂದಿಯನ್ನು ಸೇನಾ ಪಡೆ ರಕ್ಷಿಸಿದೆ. ಈಗಲೂ ಹಲವು ಮಂದಿ ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 3,734 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದ್ದು, 10.50 ಲಕ್ಷ ಮಂದಿ ಇಲ್ಲಿ ಕಳೆಯುತ್ತಿದ್ದಾರೆ. ಅವರೆಲ್ಲ ತಮ್ಮ ಮನೆಗೆ ತೆರಳುವ ತಯಾರಿಯಲ್ಲಿದ್ದಾರೆ. ಮಳೆಯಿಂದಾಗಿ ರಸ್ತೆ ಹಾನಿಗೊಂಡಿರುವುದರಿಂದ ಸುಮಾರು 4,450 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ಹೇಳಿದೆ. 221 ಸೇತುವೆಗಳು ಪ್ರವಾಹದಲ್ಲಿ ಮುಳುಗಿದ್ದು, ಈ ಪೈಕಿ 59 ಸೇತುವೆಗಳು ಇನ್ನೂ ನೀರಿನಡಿಯಲ್ಲಿವೆ.
ನೆರೆಯಿಂದ ಕೊಚ್ಚಿ, ನೆಡುಂಬಶೆÏàರಿ ವಿಮಾನ ನಿಲ್ದಾಣ ಈಗ ಪೂರ್ಣವಾಗಿ ನೆರೆ ಮುಕ್ತವಾಗಿದ್ದು, ಇದರಿಂದಾಗಿ ವಿಮಾನ ಸೇವೆ ಪುನರಾರಂಭಗೊಂಡಿದೆ. ಮೊಟಕುಗೊಂಡಿದ್ದ ರೈಲು ಸೇವೆ ಮತ್ತು ದೀರ್ಘ ದೂರ ಬಸ್ ಸಂಚಾರ ಪುನರಾರಂಭಗೊಂಡಿವೆ.
ಪ್ರಳಯ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿದು ಸಂತ್ರಸ್ತರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರೂ ನೀರಿನಲ್ಲಿ ಮುಳುಗಿದ್ದ ಮನೆ, ರಸ್ತೆ, ಪರಿಸರ ಪ್ರದೇಶಗಳು ತ್ಯಾಜ್ಯದಿಂದ ತುಂಬಿಕೊಂಡಿದೆ. ಇದರಿಂದಾಗಿ ಶುಚೀಕರಣ ಸಮಸ್ಯೆ ತಲೆದೋರಿದೆ. ಪ್ರವಾಹದಲ್ಲಿ ಸಹಸ್ರಾರು ಜಾನುವಾರುಗಳು ಮತ್ತು ಸಾಕುಪ್ರಾಣಿಗಳು ಸಿಲುಕಿ ಸಾವಿಗೀಡಾಗಿವೆ. ನೆರೆ ಇಳಿದಂತೆ ಅವುಗಳ ಮೃತದೇಹಗಳು ಕಂಡು ಬರುತ್ತಿದ್ದು ಕೊಳೆಯುತ್ತಿವೆ. ಕೊಳೆತ ಪ್ರಾಣಿಗಳನ್ನು ಸಾಗಿಸುವುದು, ರಸ್ತೆ ಚರಂಡಿ, ಪರಿಸರದ ಪ್ರದೇಶಗಳನ್ನು ಶುಚೀಕರಿಸುವ ಕೆಲಸಗಳು ಸಮಸ್ಯೆಯಾಗಲಿವೆ.
ಕನ್ನಡ ಬಳಗದ ಸೇವೆ
ಕಾಸರಗೋಡಿನ ಸಿರಿಚಂದನ ಕನ್ನಡ ಯುವ ಬಳಗದ 12 ಮಂದಿ ನೆರೆ ಪೀಡಿತ ವಯನಾಡಿಗೆ ತೆರಳಿ ಆ ಬಳಿಕ ಕೊಡಗಿಗೆ ಹೋಗಲಿದ್ದು, ಒಂದು ದಿನ ಪೂರ್ತಿ ಅಲ್ಲಿ ಸೇವೆ ಸಲ್ಲಿಸಲಿದೆ. ಇದರ ನೇತೃತ್ವವನ್ನು ಡಾ| ರತ್ನಾಕರ ಮಲ್ಲಮೂಲೆ ಅವರು ವಹಿಸಿದ್ದಾರೆ.
ಶುಚಿಗೆ ಕಾಸರಗೋಡಿನ ತಂಡಗಳು
ಪ್ರಳಯದಿಂದ ತತ್ತರಿಸಿರುವ ವಿವಿಧ ಜಿಲ್ಲೆಗಳ ಪ್ರದೇಶಗಳಲ್ಲಿ ಶುಚೀಕರಣಕ್ಕಾಗಿ ಕಾಸರಗೋಡು ಜಿಲ್ಲೆಯ ಹಲವು ರಾಜಕೀಯ ಪಕ್ಷಗಳೂ ಪ್ರತ್ಯೇಕ ತಂಡಗಳನ್ನು ಕಳುಹಿಸಲಿವೆೆ. ಕಾಂಗ್ರೆಸ್ನ ಒಂದು ತಂಡ ಶುಚೀಕರಣಕ್ಕಾಗಿ ಈಗಾಗಲೇ ವಯ ನಾಡಿಗೆ ತೆರಳಿದೆ. ಇನ್ನೊಂದು ತಂಡ ಎರ್ನಾಕುಳಂಗೆ ತೆರಳಲು ಸಜ್ಜಾಗಿದೆ. ಅದೇ ರೀತಿ ಡಿವೈಎಫ್ಐ 12 ಬ್ಲಾಕ್ಗಳ ಪ್ರತಿಯೊಂದು ಬ್ಲಾಕ್ನಿಂದ 50 ಮಂದಿಯ ತಂಡವನ್ನು ಶುಚೀಕರಣಕ್ಕೆ ಕಳುಹಿಸಲಿದೆ. ಈ ಪೈಕಿ ಉದುಮ ಬ್ಲಾಕ್ ತಂಡ ಸೋಮವಾರ ಪ್ರಯಾಣ ಆರಂಭಿಸಿದೆ. ಇದೇ ರೀತಿ ಆರ್ಎಸ್ಎಸ್ನ ಹಲವು ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೆ ಶುಚೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ಮುಸ್ಲಿಂ ಲೀಗ್ನ ವೈಟ್ ಗಾರ್ಡ್ ಎಂಬ ತಂಡ ರೂಪಿಸಲಾಗಿದ್ದು, ಪ್ರತಿ ಪಂಚಾಯತ್ನಿಂದ ತಲಾ 30 ಮಂದಿಯ ತಂಡ ತೆರಳಲಿದೆ.
ನಕಲಿ ಸಂಘಟನೆಗಳ ಬಗ್ಗೆ ಜಾಗ್ರತೆ
ರಾಜ್ಯ ಪ್ರಳಯದಲ್ಲಿ ಸಿಲುಕಿರುವಾಗ ಅವರಿಗೆ ಆರ್ಥಿಕ ಸಹಾಯ ಒದಗಿಸುವ ಹೆಸರಿನಲ್ಲಿ ಜನರಿಂದ ದೇಣಿಗೆ ಪಡೆದು ಜೇಬಿಗಿಳಿಸುವ ನಕಲಿ ಸಂಘಟನೆಗಳು ಕಾರ್ಯವೆಸಗುತ್ತಿವೆ ಎಂದೂ ಆ ಬಗ್ಗೆ ಜನರು ಜಾಗ್ರತೆ ವಹಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ಹೀಗೆ ನಕಲಿ ಸಂಘಟನೆಗಳು ಮತ್ತು ಕೇವಲ ಕಾಗದದಲ್ಲಿ ಮಾತ್ರವೇ ಸೀಮಿತವಾಗಿರುವ ಸಂಘಟನೆಗಳು ಹಣ ಸಂಗ್ರಹ ನಡೆಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದೂ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು