Kasaragod: ನಾಪತ್ತೆಯಾಗಿದ್ದ ಟ್ಯಾಕ್ಸಿ ಚಾಲಕನ ಮೃತದೇಹ ಪತ್ತೆ
Team Udayavani, Jul 1, 2023, 9:45 PM IST
ಕಾಸರಗೋಡು: ಶುಕ್ರವಾರ ಮುಂಜಾನೆ ಮನೆಯಿಂದ ನಾಪತ್ತೆಯಾಗಿದ್ದ ಚಟ್ಟಂಚಾಲ್ನಲ್ಲಿ ಟ್ಯಾಕ್ಸಿ ಚಾಲಕರಾಗಿರುವ ತೆಕ್ಕಿಲ್ ಮನ್ಯ ನಿವಾಸಿ ಎ.ಶ್ರೀಧರನ್(45) ಅವರ ಮೃತದೇಹ ತಳಂಗರೆ ಹಾರ್ಬರ್ ಪರಿಸರದಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ನಾಪತ್ತೆ ಬಗ್ಗೆ ಮನೆಯವರು ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಶೋಧ ನಡೆಸುತ್ತಿರುವಂತೆ ಮೃತ ದೇಹ ಪತ್ತೆಯಾಗಿದೆ.
ಜೂ.29 ರಂದು ಪಯ್ಯನ್ನೂರಿಗೆ ಬಾಡಿಗೆಗೆ ತೆರಳಿದ್ದ ಶ್ರೀಧರನ್ ರಾತ್ರಿ ಒಂದು ಗಂಟೆಗೆ ಮನೆಗೆ ಬಂದಿದ್ದರು. ಕೆಲವೇ ಹೊತ್ತಿನಲ್ಲಿ ಅವರು ಕಾರಿನೊಂದಿಗೆ ತೆರಳಿದ್ದರೆಂದು ಮೇಲ್ಪರಂಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ಅವರ ಮೊಬೈಲ್ ಫೋನ್ ಮತ್ತು ಪರ್ಸನ್ನು ಮನೆಯಲ್ಲೇ ಇರಿಸಲಾಗಿತ್ತು. ಅವರ ಕಾರು ಚಂದ್ರಗಿರಿ ಸೇತುವೆ ಸಮೀಪ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.