Manjeshwar: ಹಲವು ಪ್ರಕರಣಗಳ ಆರೋಪಿ ಗುಜಿರಿ ಅಮ್ಮಿ ಬಂಧನ
Team Udayavani, May 3, 2023, 10:00 PM IST
ಮಂಜೇಶ್ವರ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪೈವಳಿಕೆ ಕಯ್ಯಾ ರು ಅಟ್ಟೆಗೋಳಿಯ ಅಬ್ದುಲ್ ಹಮೀದ್ ಯಾನೆ ಗುಜಿರಿ ಅಮ್ಮಿ ಯಾನೆ ಅಟ್ಟೆಗೋಳಿ ಅಮ್ಮಿ(30)ಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 11, ಕುಂಬಳೆ ಮತ್ತು ಕಾಸರಗೋಡು ಠಾಣೆಯಲ್ಲಿ ಹಲವು ಕೇಸುಗಳಿವೆ ಎಂದು ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್ ತಿಳಿಸಿದ್ದಾರೆ. ಕೊಲೆ ಯತ್ನ, ಗಾಂಜಾ ಸಾಗಾಟ, ಖೋಟಾ ನೋಟು ವಿತರಣೆ, ಸುಫಾರಿ ಇತ್ಯಾದಿ ಕ್ರಿಮಿನಲ್ ಒಳಗೊಂಡಿದೆ.
ಪೊಲೀಸರಿಗೆ ಬಂದೂಕು ತೋರಿಸಿ ಬೆದರಿಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಹಲವು ವಾರೆಂಟ್ಗಳೂ ಈತನ ವಿರುದ್ಧ ಇದೆ. ಬಂಧಿತ ಆರೋಪಿ ಕಳೆದ ಏಳು ವರ್ಷಗಳಿಂದ ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.