Malabar ಅಭಿವೃದ್ಧಿ ಯೋಜನೆ; ಜ. 5: ಸಚಿವ ಗಡ್ಕರಿ ವಿಧ್ಯುಕ್ತ ಘೋಷಣೆ
Team Udayavani, Jan 3, 2024, 12:21 AM IST
ಕಾಸರಗೋಡು: ಉತ್ತರ ಕೇರಳದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರಕಾರ ರೂಪು ನೀಡಿರುವ ಮಲಬಾರ್ ಅಭಿವೃದ್ಧಿ ಯೋಜನೆಯನ್ನು ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಜನವರಿ 5ರಂದು ಕಾಸರಗೋಡಿನಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ವಿಧ್ಯುಕ್ತ ವಾಗಿ ಘೋಷಿಸುವರು.
ಬೆಳಗ್ಗೆ 10.30ಕ್ಕೆ ಕಾಸರಗೋಡು ತಾಳಿಪಡು³ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವರಾದ ಆರ್.ಪಿ. ಸಿಂಗ್, ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ – ಪ್ರವಾಸೋದ್ಯಮ ಖಾತೆ ಸಚಿವ ಮೊಹಮ್ಮದ್ ರಿಯಾಸ್ ಸಹಿತ ಪ್ರಮುಖರು ಭಾಗವಹಿಸುವರು. ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕೂಡ ಭಾಗಿಯಾಗುವ ಸಾಧ್ಯತೆಯಿದೆ.
ತಾಳಿಪಡ್ಪು ಮೈದಾನದಲ್ಲಿ ವೇದಿಕೆ ಮತ್ತು ಚಪ್ಪರ ನಿರ್ಮಾಣ ಕೆಲಸ ಈಗಾಗಲೇ ಆರಂಭಗೊಂಡಿದೆ. ಆದರೆ ಮಲಬಾರ್ ಅಭಿವೃದ್ಧಿ ಯೋಜನೆಯಲ್ಲಿ ಕಾಸರಗೋಡು ಸೇರಿದಂತೆ ಉತ್ತರ ಕೇರಳದಲ್ಲಿ ಯಾವುದೆಲ್ಲ ಯೋಜನೆಗಳನ್ನು ಸೇರ್ಪಡೆಗೊಳಿಲಾಗಿದೆ ಎಂಬುದನ್ನು ಕೇಂದ್ರ ಸರಕಾರ ಈ ತನಕ ಬಹಿರಂಗಪಡಿಸಿಲ್ಲ. ಅದನ್ನು ಕಾರ್ಯಕ್ರಮದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸುವರು. ಇದರಲ್ಲಿ ಕಾಸರಗೋಡು ಜಿಲ್ಲೆಗೆ ಕೆಲವು ಅಚ್ಚರಿಯ ಕೊಡುಗೆಗಳು ಇರುವ ಸಾಧ್ಯತೆಯಿದೆ. ಕೇಂದ್ರ ಸಚಿವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.
ಕಾಸರಗೋಡಿನ ಕಾರ್ಯಕ್ರಮದ ಬಳಿಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಡುಕ್ಕಿ ಜಿಲ್ಲೆಯ ಮೂನ್ನಾರಿಗೂ ಸಾಗಿ ಅಲ್ಲೂ ಹಲವು ಮಹತ್ತರ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.