ಪ್ರೌಢಶಾಲೆಗಳಲ್ಲಿ ಮಲಯಾಳ ಬೋಧನೆ:ಕನ್ನಡ ವಿದ್ಯಾರ್ಥಿಗಳಿಗೆ ಸಂಕಷ್ಟ
Team Udayavani, Jul 24, 2017, 8:35 AM IST
ಕಾಸರಗೋಡು: ಹಿರಿಯ ಪ್ರೌಢಶಾಲೆಗಳಲ್ಲಿ ಅಧಿಕೃತ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಿದ್ದರೂ ಕಾಸರಗೋಡು ಜಿಲ್ಲೆಯ ಹೆಚ್ಚಿನ ಶಿಕ್ಷಕರು ಮಲಯಾಳದಲ್ಲಿ ಬೋಧಿಸುತ್ತಿರುವುದರಿಂದ ಭಾಷಾಅಲ್ಪಸಂಖ್ಯಾಕ ಕನ್ನಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.
ಕಾಸರಗೋಡಿನ ಸರಕಾರಿ ಹೈಯರ್ ಸೆಕೆಂಡರಿ (ಪ್ಲಸ್ ಟು) ಶಾಲೆಗಳಲ್ಲಿ ನೇಮಕಗೊಳ್ಳುತ್ತಿರುವ ಹೆಚ್ಚಿನ ಶಿಕ್ಷಕರಿಗೆ ಕನ್ನಡ ತಿಳಿದಿಲ್ಲ. ಬೆರಳೆಣಿಕೆಯಲ್ಲಿರುವ ಕನ್ನಡಿಗ ಶಿಕ್ಷಕರು ಇಂಗ್ಲಿನಲ್ಲಿ ಬೋಧಿಸುತ್ತಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿರುವ ಮಲಯಾಳಿ ಶಿಕ್ಷಕರು ಇಂಗ್ಲಿಷಿನ ಬದಲು ಮಲಯಾಳದಲ್ಲಿ ಕಲಿಸುತ್ತಿದ್ದಾರೆ.
ಇದರಿಂದ ಮಲಯಾಳ ತಿಳಿಯದ ಕನ್ನಡ ವಿದ್ಯಾರ್ಥಿಗಳಿಗೆ ಪಾಠವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಮಾತ್ರವಲ್ಲ, ಮಲಯಾಳದಲ್ಲಿ ಪಾಠ ಕೇಳುವ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಉತ್ತರಿಸಬೇಕಾಗುವುದರಿಂದ ಪಾರಿಭಾಷಿಕ ಪದಗಳ ವಿಷಯದಲ್ಲಿ ಗೊಂದಲವಾಗುತ್ತಿದೆ. ಇದು ವಿಜ್ಞಾನ, ಗಣಿತದಂತಹ ವಿಷಯಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇಂಗ್ಲಿಷ್, ಹಿಂದಿ, ಸಂಸ್ಕೃತದಂತಹ ವಿಷಯಗಳನ್ನು ಆಯಾ ಭಾಷೆಗಳಲ್ಲಿ ಬೋಧಿಸಬೇಕೆಂಬ ನಿಯಮವಿದ್ದರೂ ಅದನ್ನು ಪಾಲಿಸದೆ ಮಲಯಾಳದಲ್ಲಿ ಬೋಧಿಸ ಲಾಗುತ್ತಿದೆ.
ಪ್ರಾಥಮಿಕ,ಪ್ರೌಢಶಾಲೆಗಳಲ್ಲೂ ಇದೇ ಕತೆ ಕನ್ನಡಿಗರ ಹೋರಾಟದ ಫಲವಾಗಿ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ, ಸಮಾವಿಜ್ಞಾನ, ಗಣಿತ ಮೊದಲಾದ ವಿಷಯಗಳನ್ನು ಬೋಧಿಸುವ ಶಿಕ್ಷಕರು ಹತ್ತನೇ ತರಗತಿಯವರೆಗೆ ಕನ್ನಡವನ್ನು ಕಲಿತವರಾಗಿರಬೇಕೆಂದು ನಿಯಮವನ್ನು ರೂಪಿಸಲಾಗಿದೆ. ಆದರೆ ಇಂಗ್ಲಿಷ್, ಹಿಂದಿ, ಸಂಸ್ಕೃತ ಮೊದಲಾದಭಾಷಾ ವಿಷಯಗಳ ಬೋಧಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಕಾರಣವೇನೆಂದರೆ ಭಾಷಾ ವಿಷಯಗಳನ್ನು ಆಯಾಭಾಷೆಗಳಲ್ಲಿ ಬೋಧಿಸಬೇಕೆಂಬುದು ಸರಕಾರದ ಶಿಕ್ಷಣ ನೀತಿ. ಇದರಿಂದ ಭಾಷಾ ವಿಷಯಗಳ ಬೋಧನೆಗೆ ಕನ್ನಡ, ಮಲಯಾಳವೆಂಬ ಮಾಧ್ಯಮದ ಭೇದವಿಲ್ಲ ಎಂದು ಅಧಿಕಾರಿಗಳ ಸಮಜಾಯಿಸಿಕೆ.
ಶಾಲೆಗಳಲ್ಲಿ ಭಾಷಾವಿಷಯಗಳನ್ನು ಅದೇ ಭಾಷೆಗಳಲ್ಲಿ ಬೋಧಿಸಲಾಗುವುದೆ ಎಂದು ಮಾಹಿತಿ ಹಕ್ಕು ಪ್ರಕಾರ ಪ್ರಶ್ನೆ ಕೇಳಿದರೆ ಹೌದು ಎಂಬ ಉತ್ತರ ದೊರೆಯುತ್ತದೆ. ಆದರೆ ವಾಸ್ತವವೇ ಬೇರೆ. ಕನ್ನಡ ವಿದ್ಯಾರ್ಥಿಗಳಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಲಿಸಲು ನೇಮಕಗೊಳ್ಳುತ್ತಿರುವ ಮಲಯಾಳ ಶಿಕ್ಷಕರು ಮಲಯಾಳದಲ್ಲಿ ಕಲಿಸುವುದು ಕಂಡುಬರುತ್ತದೆ. ಇದರಿಂದ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಕನ್ನಡ ವಿದ್ಯಾರ್ಥಿಗಳ ಪರಿಸ್ಥಿತಿ.
ಆದರೆ ಇದು ಅನ್ಯಾಯವೆಂದು ಯಾರಿಗೂ ತೋರುವುದಿಲ್ಲ. ಭಾಷಾ ಶಿಕ್ಷಕರು ಅದೇ ಭಾಷೆಗಳಲ್ಲಿ ಬೋಧಿಸಬೇಕೆಂಬ ನಿಯಮ ಪಾಲನೆಯಾಗುವಂತೆ ವಿದ್ಯಾಧಿಕಾರಿಗಳಾಗಲಿ ಮುಖ್ಯೋಪಾಧ್ಯಾಯರಾಗಲಿ ಶಿಕ್ಷಕ- ರಕ್ಷಕ ಸಂಘಟನೆಗಳಾಗಲೀ ಪ್ರಯತ್ನಿಸುವುದಿಲ್ಲ. ಆದರೆ ಒಂದೊಮ್ಮೆ ಇಂಗ್ಲಿಷ್ ಮೊದಲಾದ ಭಾಷಾ ವಿಷಯಗಳನ್ನು ಕಲಿಸಲು ನೇಮಕವಾಗುವ ಕನ್ನಡಿಗ ಶಿಕ್ಷಕರು ಮಲಯಾಳ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧಿಸಿದರೆ ಆ ಶಿಕ್ಷಕರ ಪರಿಸ್ಥಿತಿ ಏನಾಗಬಹುದು? ಎಂಬುದು ಊಹನಾತೀತ.
ಸಂಸ್ಕೃತ ಕಲಿಸಲು ಮಲಯಾಳ ಅಧ್ಯಾಪಕರು ನೇಮಕಗೊಂಡ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ಸಂಸ್ಕೃತದ ಬದಲು ಕನ್ನಡವನ್ನು ಆರಿಸಿಕೊಂಡು ಮಲಯಾಳದ ಬಲವಂತ ಮಾಘಸ್ನಾನದಿಂದ ಪಾರಾಗಬಹುದು. ಆದರೆ ಇಂಗ್ಲಿಷ್, ಹಿಂದಿ ಯಂತಹ ಕಡ್ಡಾಯ ವಿಷಯಗಳಲ್ಲಿ ಏನು ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ.
ಭಾಷಾ ವಿಷಯಗಳನ್ನು ಅದೇ ಭಾಷೆಗಳಲ್ಲಿ ಕಲಿಸಬೇಕೆಂಬ ನಿಯಮವನ್ನು ಪಾಲಿಸಲು ಸಾಧ್ಯವಾಗದಿದ್ದರೆ ಕನ್ನಡ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಸಲು ಕನ್ನಡ ತಿಳಿದ ಅಧ್ಯಾಪಕರನ್ನೇ ನೇಮಿಸ ಬೇಕಾದುದು ನ್ಯಾಯೋಚಿತ.ಕನ್ನಡಿಗರದ್ದೂ ತಪ್ಪಿದೆ: ಕನ್ನಡಿಗರು ಆಡಳಿತ ವ್ಯವಸ್ಥಾಪಕರಾದ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಹಿರಿಯ ಪ್ರೌಢಶಾಲೆಗಳಲ್ಲಿ ಭಾಷಾ ವಿಷಯ ಹಾಗೂ ಇತರ ವಿಷಯಗಳನ್ನು ಬೋಧಿಸಲು ಕನ್ನಡವೇ ತಿಳಿಯದ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಕಾಂಚಣದ ಪ್ರೇಮದೆದುರು ಕನ್ನಡಾಭಿಮಾನ ಮರೆಯಾಗುತ್ತದೆ. ಇದರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಬೇಕು. ಅರ್ಹರಾದ ಕನ್ನಡಿಗ ಶಿಕ್ಷಕರಿದ್ದೂ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೆತ್ತವರು ಸೇರಿಸಬಾರದು. ಹಾಗೆಯೇ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ಸರಕಾರ ನಿಯಮ ರೂಪಿಸಬೇಕು. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ತಿಳಿದ ಶಿಕ್ಷಕರಿಂದ ಕನ್ನಡದಲ್ಲೇ ಶಿಕ್ಷಣ ದೊರೆತರೆ ಮಾತ್ರ ಮಾತೃ ಭಾಷೆಯಲ್ಲಿ ಶಿಕ್ಷಣ ಎಂಬ ಧ್ಯೇಯ ನಿಜ ಅರ್ಥದಲ್ಲಿ ಸಾಕಾರಗೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್