ಡಿಜಿಪಿಯಾಗಿ ಲೋಕನಾಥ್ ಬೆಹೆರ ಮರು ನೇಮಕ
Team Udayavani, Jun 29, 2017, 3:35 AM IST
ತಿರುವನಂತಪುರ: ಹಿರಿಯ ಐಪಿಎಸ್ ಅಧಿಕಾರಿ ಲೋಕನಾಥ್ ಬೆಹೆರ ಸುಮಾರು ಎರಡು ತಿಂಗಳ ಬಳಿಕ ಮತ್ತೂಮ್ಮೆ ರಾಜ್ಯದ ಪೊಲೀಸ್ ನಿರ್ದೇಶಕರಾಗಿ ನೇಮಕ ಗೊಂಡಿದ್ದಾರೆ. ಹಾಲಿ ಡಿಜಿಪಿ ಟಿ. ಪಿ. ಸೇನ್ಕುಮಾರ್ ಜೂ. 30ರಂದು ನಿವೃತ್ತರಾಗಲಿದ್ದು, ಅವರ ಉತ್ತರಾಧಿಕಾರಿಯಾಗಿ ಸರಕಾರ ಬೆಹೆರ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಸೇನ್ಕುಮಾರ್ ಸರಕಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 11 ತಿಂಗಳು ಹೋರಾಡಿ ಡಿಜಿಪಿ ಹುದ್ದೆಯನ್ನು ಪಡೆದಿದ್ದರು. ಹೀಗಾಗಿ ಆಗ ಡಿಜಿಪಿಯಾಗಿದ್ದ ಬೆಹೆರ ಜಾಗ ಖಾಲಿ ಮಾಡಿದ್ದರು. ಇದೀಗ ಸೇನ್ಕುಮಾರ್ ನಿವೃತರಾಗಲಿರುವುದರಿಂದ ಬೆಹೆರ ಮರಳಿ ಅದೇ ಜಾಗಕ್ಕೆ ಬರಲಿದ್ದಾರೆ. ಎಲ್ಡಿಎಫ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಸೇನ್ಕುಮಾರ್ ಅವರನ್ನು ಡಿಜಿಪಿ ಹುದ್ದೆಯಿಂದ ಕಿತ್ತು ಹಾಕಿತ್ತು. ಇದನ್ನು ಪ್ರಶ್ನಿಸಿ ಸೇನ್ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೇನ್ಕುಮಾರ್ ಅವರನ್ನು ವರ್ಗಾಯಿಸಿದ ಸರಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಕೂಡ ಹಾಕಿತ್ತು. ಇಂದು ನಡೆದ ಸಂಪುಟ ಸಭೆಯಲ್ಲಿ ಪ್ರಸ್ತುತ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಪಡೆಯ ನಿರ್ದೇಶಕರಾಗಿರುವ ಬೆಹೆರ ಅವರನ್ನು ಮರಳಿ ಡಿಜಿಪಿ ಹುದ್ದೆಗೆ ನೇಮಿಸುವ ನಿರ್ಧಾರ ಕೈಗೊಳ್ಳಲಾಯಿತು. ಮುಖ್ಯ ಕಾರ್ಯ ದರ್ಶಿ ನಳಿನಿ ನೆಟ್ಟೊ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿ ಯವರನ್ನೊಳಗೊಂಡಿರುವ ತಿರಸದಸ್ಯ ಸಮಿತಿ ಬೆಹೆರ ಮರು ನೇಮಕಾತಿಗೆ ಶಿಫಾರಸು ಮಾಡಿತ್ತು.