ಆರಂಭವಾಗದ ರಬ್ಬರ್ ಟ್ಯಾಪಿಂಗ್: ಲಕ್ಷಾಂತರ ರೂ. ನಷ್ಟ
Team Udayavani, Oct 3, 2018, 1:35 AM IST
ಕಾಸರಗೋಡು: ಕೇರಳ ಪ್ಲಾಂಟೇಶನ್ ಕಾರ್ಪೊರೇಷನ್ನ ಬೋವಿಕ್ಕಾನ ಎಸ್ಟೇಟ್ನಲ್ಲಿರುವ ರಬ್ಬರ್ ಮರಗಳಿಂದ ಟ್ಯಾಪಿಂಗ್ ಆರಂಭಗೊಳ್ಳದೆ ಕೇರಳ ತೋಟಗಾರಿಕಾ ನಿಗಮಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮಾತ್ರವಲ್ಲದೆ ಸುಮಾರು 10 ವರ್ಷ ಕಳೆದರೂ ಈ ತನಕ ಟ್ಯಾಪಿಂಗ್ ನಡೆಯದ ರಬ್ಬರ್ ತೋಟಗಳೂ ತೋಟಗಾರಿಕಾ ನಿಗಮದ ವ್ಯಾಪ್ತಿಯಲ್ಲಿವೆ. ಇದರಿಂದ ಸುಮಾರು 100ಕ್ಕಿಂತಲೂ ಹೆಚ್ಚು ಮಂದಿ ಕಾರ್ಮಿಕರಿಗೆ ಲಭಿಸಬೇಕಾದ ಕೆಲಸವೂ ನಷ್ಟವಾಗಿದೆ. ಎಸ್ಟೇಟ್ನಲ್ಲಿದ್ದ ಗೇರು ಮರಗಳನ್ನು ಕಡಿದು ಸುಮಾರು 500 ಹೆಕ್ಟೇರ್ ಜಾಗದಲ್ಲಿ ಪ್ಲಾಂಟೇಶನ್ ಕಾರ್ಪೊರೇಷನ್ ರಬ್ಬರ್ ಗಿಡಗಳನ್ನು ನೆಟ್ಟು ಬೆಳೆಸುತ್ತಿದೆ.
10 ವರ್ಷ ಕಳೆದರೂ ಟ್ಯಾಪಿಂಗ್ ಆರಂಭಗೊಂಡಿಲ್ಲ
2008ರಿಂದ 2012ರ ಅವಧಿಯಲ್ಲಿ ರಬ್ಬರ್ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಕಾಸರಗೋಡು ಪ್ಲಾಂಟೇಶನ್ ಡಿವಿಜನ್ನ ಚಾಕೂಮೂಲೆ ಬ್ಲಾಕ್ನಲ್ಲಿ 2008ರಲ್ಲಿ ರಬ್ಬರ್ ಕೃಷಿ ಆರಂಭಿಸಲಾಗಿದೆ. 33,577 ಸಸಿಗಳನ್ನು ಇಲ್ಲಿ ನೆಟ್ಟು ಪೋಷಿಸಲಾಗಿದೆ. ಇದೀಗ 10 ವರ್ಷ ಕಳೆದರೂ ಇಲ್ಲಿ ಟ್ಯಾಪಿಂಗ್ ಆರಂಭಗೊಂಡಿಲ್ಲ. ಆರು ವರ್ಷದಿಂದ ಏಳು ವರ್ಷಕ್ಕೆ ಆರಂಭಿಸಬೇಕಾದ ಟ್ಯಾಪಿಂಗ್ ನಡೆಸದೆ ಇರುವುದರಿಂದ ಕಾರ್ಪೊರೇಷನ್ಗೆ ಭಾರೀ ನಷ್ಟ ಸಂಭವಿಸಿದೆ.
ಇದೇ ರೀತಿಯಲ್ಲಿ 2009ರಿಂದ 2012ರವರೆಗೆ ಪೆರ್ಲ ಬ್ಲಾಕ್ನ ಸರ್ಪಮಲೆ, ಸಾಯ, ಪೆರಡಾಲ, ಪೆರಿಯಲ್ತಡ್ಕ, ಪುತ್ರಕಳ ಡಿವಿಜನ್ಗಳಲ್ಲಿ 60 ಸಾವಿರ ಮರಗಳು, ಕಾಸರಗೋಡು ಬ್ಲಾಕ್ ವ್ಯಾಪ್ತಿಯಲ್ಲಿ 15 ಸಾವಿರ ಗಿಡಗಳು, ಆಲೂರು ಬ್ಲಾಕ್ನಲ್ಲಿ 24 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಇವುಗಳ ಪೈಕಿ ಆಲೂರು ಬ್ಲಾಕ್ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ರಬ್ಬರ್ ಗಿಡಗಳು ಟ್ಯಾಪಿಂಗ್ ನಡೆಸಲು ಸಿದ್ಧವಾಗಿದ್ದರೂ ಆರಂಭಗೊಂಡಿಲ್ಲ. ಏಳು ವರ್ಷ ಪೂರ್ತಿಯಾದ ರಬ್ಬರ್ ಮರಗಳನ್ನು ಟ್ಯಾಪಿಂಗ್ ನಡೆಸಬಹುದು ಎಂಬುದು ರಬ್ಬರ್ ಮಂಡಳಿಯ ವ್ಯವಸ್ಥೆಯಾಗಿದೆ. ಆದರೆ ಪೆರ್ಲ ಡಿವಿಜನ್ನ ಚೋಕುಮೂಲೆ ಬ್ಲಾಕ್ನಲ್ಲಿ ಟ್ಯಾಪಿಂಗ್ಗಾಗಿ 2017ರಲ್ಲಿ ಮರಗಳಿಗೆ ಮಾರ್ಕ್ ಹಾಕಲಾಗಿತ್ತಾದರೂ ಟ್ಯಾಪಿಂಗ್ ನಡೆಯಲಿಲ್ಲ.
ಎಲ್ಲ ಕಡೆಗಳಲ್ಲಿ ಟ್ಯಾಪಿಂಗ್ ಆರಂಭಿಸಿದರೆ ಸುಮಾರು 100 ಮಂದಿ ಕಾರ್ಮಿಕರಿಗೆ ಕೆಲಸ ನೀಡಬಹುದು. ಟ್ಯಾಪಿಂಗ್ ಆರಂಭಿಸಲು ಕಾರ್ಮಿಕರ ನೇಮಕ, ರಬ್ಬರ್ ಶೀಟ್ ಯಂತ್ರ ಸಹಿತ ಇತರ ಸೌಕರ್ಯಗಳನ್ನು ಮೊದಲು ಕಲ್ಪಿಸಬೇಕಾಗಿದೆ. ಇದಿಲ್ಲದಿದ್ದರೆ ಟ್ಯಾಪಿಂಗ್ ಕೈಗೊಳ್ಳಲು ಸಾಧ್ಯವಾಗದು. ಟ್ಯಾಪಿಂಗ್ ಪ್ರಾಯ ಕಳೆದ ರಬ್ಬರ್ ಮರಗಳನ್ನು ಸರಿಯಾಗಿ ನೋಡಿಕೊಳ್ಳದೆ ತೋಟ ಸಹ ಉತ್ತಮವಾಗಿಲ್ಲ. ಕೀಟನಾಶಕ ಸಿಂಪಡಣೆ ಸಹಿತ ಸರಿಯಾದ ಪೋಷಣೆ ಇಲ್ಲದೆ ರಬ್ಬರ್ ತೋಟಗಳನ್ನು ಪ್ರಯೋಜನವಿಲ್ಲದ ರೀತಿಯಲ್ಲಿ ನಾಶದಂಚಿಗೆ ತಳ್ಳುವುದರಲ್ಲಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ರಬ್ಬರ್ ಇಳುವರಿ ಕಡಿಮೆ
ಕಾಸರಗೋಡು ಜಿಲ್ಲೆಯಲ್ಲಿ ರಬ್ಬರ್ ಇಳುವರಿ ಕಡಿಮೆಯಾಗಿದೆ. ಕೇರಳದ ಇತರ ಜಿಲ್ಲೆಗಳಲ್ಲಿ ರಬ್ಬರ್ ಹೇರಳ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಮಧ್ಯೆ ತೋಟಗಾರಿಕಾ ನಿಗಮಕ್ಕೆ ಸೇರಿದ ರಬ್ಬರ್ ತೋಟಗಳು ಜಿಲ್ಲೆಯಲ್ಲಿ ವಿನಾಶದಂಚಿಗೆ ಸಾಗುತ್ತಿವೆ. ಅವುಗಳ ಪಾಲನೆ ಕೂಡ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ