ಬಸ್ಸಿನಡಿಗೆ ನುಗ್ಗಿದ ಬೈಕ್ : ಯುವಕ ಸ್ಥಳದಲ್ಲೇ ಸಾವು
Team Udayavani, Sep 19, 2017, 6:40 AM IST
ಮಂಜೇಶ್ವರ: ಮಂಜೇಶ್ವರದ ವಾಮಂಜೂರು ಚೆಕ್ ಪೋಸ್ಟ್ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಿತ ವೇಗದಲ್ಲಿ ಬಂದ ಬೈಕ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸವಾರನ ನಿಯಂತ್ರಣ ತಪ್ಪಿ ಕರ್ನಾಟಕ ಸಾರಿಗೆ ಬಸ್ಸಿನಡಿಗೆ ಸಿಲುಕಿ ಸಂಭವಿಸಿದ ಅಪಘಾತದಲ್ಲಿ ಒಬ್ಬ ಘಟನಾ ಸ್ಥಳದಲ್ಲೇ ಸಾವನ್ನಪ್ಪಿ ಇನ್ನೊಬ್ಬ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾರ ಬಂದ್ಯೋಡ್ ಅಡ್ಕ ಭಗವತೀ ಕ್ಷೇತ್ರ ಸಮೀಪದ ನಿತಿನ್ (25) ಅವರು ಸಾವನ್ನಪ್ಪಿದ್ದಾರೆ. ಇನೊಬ್ಬ ಇದೇ ಪರಿಸರ ನಿವಾಸಿ ಚೇತನ್ (24) ಅವರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ಭಾಗದಿಂದ ಮಂಗಳೂರು ಕಡೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸಿಗೆ ಮಂಜೇಶ್ವರ ಭಾಗದಿಂದ ಉಪ್ಪಳ ಕಡೆ ಸಾಗುತಿದ್ದ ಅಪಾಚಿ ಬೈಕ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ಸಿನಡಿಗೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹೆದ್ದಾರಿ ಪೊಲೀಸರು ಆಗಮಿಸಿ ಸಂಚಾರವನ್ನು ಸುಗಮಗೊಳಿಸಿದರು.