Kasaragod ಬಾಣಂತನದ ನೋವು ತಾಳಲಾರದೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Team Udayavani, Sep 17, 2023, 10:15 PM IST
ಕುಂಬಳೆ: ಹತ್ತು ದಿನಗಳ ಬಾಣಂತಿ ಮೃತದೇಹ ಮನೆ ಪರಿಸರದ ಬಾವಿಯಲ್ಲಿ ಪತ್ತೆಯಾದ ಘಟನೆ ಕೂಡ್ಲು ಪಾರೆಕಟ್ಟೆ ಬಳಿ ಶನಿವಾರ ತಡರಾತ್ರಿ ನಡೆದಿದೆ. ಸುರೇಖಾ (29) ಮೃತಪಟ್ಟ ಮಹಿಳೆ.
ಪೈವಳಿಕೆ ಜೋಡುಕಲ್ಲು ಬಳಿಯ ಅರಿಯಾಳ ನಿವಾಸಿ ಜಯ ಕುಮಾರ್ ಆಚಾರ್ಯ ಅವರ ಪತ್ನಿ ಸುರೇಖಾ ಹತ್ತು ದಿನಗಳ ಹಿಂದೆ ಬಾಣಂತಿಯಾಗಿ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ಸುರೇಖಾ ಅವರ ಬಳಿ ಅವರ ತಾಯಿ, ಅತ್ತೆ ಹಾಗೂ ಸಮೀಪದ ಕೊಠಡಿಯಲ್ಲಿ ಪತಿ ಮಲಗಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ನವಜಾತ ಶಿಶು ಅಳುತ್ತಿದ್ದು, ಮನೆಯವರು ಎದ್ದು ನೋಡಿದಾಗ ಸುರೇಖಾ ಮಲಗಿದಲ್ಲಿ ಇರಲಿಲ್ಲ. ಬಳಿಕ ನಡೆಸಿದ ಹುಡುಕಾಟದಲ್ಲಿ ಮನೆ ಸಮೀಪದ ಬಾವಿ ಬಳಿ ಟಾರ್ಚ್ ಲೈಟ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮೃತದೇಹ ಬಾವಿಯಲ್ಲಿ ಪತ್ತೆಯಾಗಿತ್ತು.
ಬಾಣಂತಿ ಸಮಯದಲ್ಲಿ ಆಪರೇಷನ್ ಮಾಡಿದ್ದ ಸುರೇಖಾರಿಗೆ ತೀವ್ರ ಹೊಟ್ಟೆ ನೋವು ಕಾಡುತ್ತಿರುವುದಾಗಿ ತಿಳಿಸುತ್ತಿದ್ದು, ಇದರಿಂದ ಮಾನಸಿಕ ಖನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಅವರು ಪೋಸ್ಟ್ ಮಾಸ್ತರ್ ಹುದ್ದೆ ನಿರ್ವಹಿಸುತ್ತಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತ ಪರೀಕ್ಷೆ ನಡೆಸಿದ್ದಾರೆ.