ಮಹಾನಗರ ಪಾಲಿಕೆಯಲ್ಲಿ ಆನ್ಲೈನ್ ಸೇವೆ ಅಳವಡಿಕೆಗೆ ತಾಂತ್ರಿಕ ಸಮಸ್ಯೆ!
Team Udayavani, Dec 12, 2020, 4:13 AM IST
ಸಾಂದರ್ಭಿಕ ಚಿತ್ರ
ಮಹಾನಗರ: ತೆರಿಗೆ ಪಾವತಿ, ಸಾರ್ವಜನಿಕರ ಅರ್ಜಿ ಸ್ವೀಕಾರ, ನೀರಿನ ಬಿಲ್ ಪಾವತಿ ಸಹಿತ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಆನ್ಲೈನ್ಗೊಳಿಸುವ ಬಹುನಿರೀಕ್ಷಿತ ಯೋಜನೆಯು ಸದ್ಯಕ್ಕೆ ಪ್ರಾರಂಭಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.
ಕೊರೊನಾ ಕಾರಣದಿಂದಾಗಿ ಡಿಜಿಟ ಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯವಿದ್ದು, ಮನಪಾದಲ್ಲಿ ಸದ್ಯ ಈ ಆನ್ಲೈನ್ ಸೇವೆ ಪ್ರಕ್ರಿಯೆಯು ಪ್ರಥಮ ಹಂತದಲ್ಲಿದೆ. ಎರಡು ವರ್ಷ ಗಳಿಂದ ಈ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಬಳಿಕವಷ್ಟೇ ಈ ಸೇವೆ ಸಾರ್ವಜನಿಕರಿಗೆ ದೊರಕಲಿದೆ. ಹೀಗಿರುವಾಗ, ಈ ವರ್ಷವೂ ಆನ್ಲೈನ್ ಸೇವೆ ಲಭ್ಯವಾಗುವುದು ಅನುಮಾನ.
ರಾಜ್ಯದಲ್ಲಿ ಸದ್ಯ ತುಮಕೂರು ನಗರ ಪಾಲಿಕೆಯಲ್ಲಿ ಈಗಾಗಲೇ ಈ ಆನ್ಲೈನ್ ವ್ಯವಸ್ಥೆ ಜಾರಿ ಇದೆ. ಇದೇ ರೀತಿ ಮಂಗಳೂರಿನಲ್ಲಿಯೂ ಜಾರಿಯಾದರೆ ಎಲ್ಲ ಪೌರ ಸೇವೆಗಳು ಜನರಿಗೆ ಕುಳಿತಲ್ಲಿಯೇ ಸಿಗಬಹುದು. ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ ಪಾಲಿಕೆಯ 10 ಸೇವೆಗಳನ್ನು ಆನ್ಲೈನ್ ಮೂಲಕ ವ್ಯವಹರಿಸುವಂತೆ ಮಾಡಲು ಮಹಾನಗರ ಪಾಲಿಕೆಯು ಉದ್ದೇಶ ಇರಿಸಿದೆ. ಆದರೆ ಈ ಯೋಜನೆ ಇನ್ನೂ ಕೂಡ ಕಾರ್ಯರೂಪಕ್ಕೆ ಬರಲೇ ಇಲ್ಲ.
ಕೆಲಸ ಪ್ರಗತಿಯಲ್ಲಿ
ಮನಪಾ ಮುಖ್ಯ ಸಚೇತಕ ಪ್ರೇಮಾ ನಂದ ಶೆಟ್ಟಿ ಅವರು “ಸುದಿನ’ಕ್ಕೆ ಪ್ರತಿ ಕ್ರಿಯಿಸಿ, ಪಾಲಿಕೆಯ ಎಲ್ಲ ಪೌರ ಸೇವೆಗಳನ್ನು ಆನ್ಲೈನ್ ಮೂಲಕ ಮಾಡಲು ಸಾಪ್ಟ್ವೇರ್ ಮೇಲ್ದರ್ಜೆಗೇರಿಸುವ ಕೆಲಸ ಪ್ರಗತಿ ಯಲ್ಲಿದೆ. ಭಾಗಶಃ ಕೆಲಸ ಮುಗಿದಿದೆ. ಶೀಘ್ರವೇ ಆನ್ಲೈನ್ ಸೇವೆ ಬಿಡುಗಡೆ ಮಾಡಿ ಅದರ ಮೂಲಕವೇ ತೆರಿಗೆ ಪಾವತಿ ಸಹಿತ ಪೌರ ಸೇವೆಗಳು ಲಭ್ಯವಾಗಲಿದೆ ಎನ್ನುತ್ತಾರೆ.
ಘೋಷಣೆಗೆ ಮಾತ್ರ ಸೀಮಿತ
ಪಾಲಿಕೆಯ ವಿವಿಧ ಸೇವೆಗಳನ್ನು ಆನ್ಲೈನ್ ಮೂಲಕ ಮಾಡುವ ಯೋಜನೆಗೆ ಪಾಲಿಕೆ ಸಿದ್ಧತೆ ನಡೆಸಿದರೂ ಬಿಡುಗಡೆ ಯಾಗಿರಲಿಲ್ಲ. ಈ ನಡುವೆ ಮಾಜಿ ಮೇಯರ್ ಭಾಸ್ಕರ್ ಕೆ. ಅವರು ತನ್ನ ಆಡಳಿತಾವಧಿಯಲ್ಲಿ ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಆಗಿನ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, 2020ರ ಫೆ. 18ರಿಂದ 10 ಆನ್ಲೈನ್ ಸೇವೆಗಳಿಗೆ ಮರುಚಾಲನೆ ನೀಡಲಾ ಗುವುದು ಎಂದಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ಬಳಿಕ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಅಧಿಕಾರ ಸೀÌಕರಿಸಿದ ಬಳಿಕವೂ ಕೆಲವೇ ತಿಂಗಳಲ್ಲಿ ಸೇವೆ ಲಭ್ಯವಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ ಇನ್ನೂ ಇದು ಮೊದಲ ಹಂತದಲ್ಲಿದಲ್ಲೇ ಬಾಕಿಯಾಗಿದೆ.
ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, ಪಾಲಿಕೆಯಲ್ಲಿ ಆನ್ಲೈನ್ ಸೇವೆ ತ್ವರಿತ ಗತಿಯಲ್ಲಿ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ಈ ಕುರಿತು ಈಗಾಗಲೇ ಆಡಳಿತ ಪಕ್ಷದ ಗಮನಕ್ಕೆ ತಂದಿದ್ದೇವೆ. ಹೀಗಿದ್ದಾಗ ಸಂಬಂಧಪಟ್ಟ ಅಧಿಕಾರಿಗಳು ತ್ವರಿತಗತಿಯಲ್ಲಿ ಆನ್ಲೈನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎನ್ನುತ್ತಾರೆ.
ತೊಡಕು ಏನು?
ಪಾಲಿಕೆ ಯೋಜನೆಯಂತೆ ಆನ್ಲೈನ್ ಸೇವೆ ಈಗಾಗಲೇ ಸಾರ್ವಜನಿಕರಿಗೆ ಲಭ್ಯವಾಗಬೇಕಿತ್ತು. ಆದರೆ ತಾಂತ್ರಿಕವಾಗಿ ಕೆಲವೊಂದು ಸಮಸ್ಯೆ ಎದುರಾಗಿದೆ. ಈಗಾಗಲೇ ಫೈಲ್ಗಳಲ್ಲಿ ಬರಹ ರೂಪದಲ್ಲಿರುವ ಕಡತಗಳ ದಾಖಲೆ ವರ್ಗಾವಣೆ ಮಾಡಬೇಕಿದೆ. ಈ ಪ್ರಕ್ರಿಯೆಗೆ ಸಾಫ್ಟ್ ವೇರ್ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಸದ್ಯದಲ್ಲೇ ಸೇವೆ
ಸಾರ್ವಜನಿಕರಿಗೆ ಅನುಕೂಲ ವಾಗಲೆಂದು ಪಾಲಿಕೆಯಲ್ಲಿ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ. ಆ ಕುರಿತ ಪ್ರಕ್ರಿಯೆಗಳು ಸದ್ಯ ಕೊನೆಯ ಹಂತದಲ್ಲಿವೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಈ ಸೇವೆ ಸಾರ್ವ ಜನಿಕರಿಗೆ ಲಭ್ಯವಾಗಲಿದೆ.
-ಅಕ್ಷಯ್ ಶ್ರೀಧರ್, ಪಾಲಿಕೆ ಆಯುಕ್ತ