ಬಿಷಪ್ಸ್ ಹೌಸ್ನಲ್ಲಿ ಅಕ್ಷಯ ಧಾಮ
Team Udayavani, Apr 2, 2018, 7:45 AM IST
ಮಂಗಳೂರು: ಕೊಡಿಯಾಲ ಬೈಲ್ನ ಬಿಷಪ್ಸ್ ಹೌಸ್ ಆವರಣದಲ್ಲಿ ಬಡವರಿಗಾಗಿ ಮತ್ತು ದೂರದ ಊರುಗಳಿಂದ ಬರುವ ಯಾತ್ರಿಕರಿಗಾಗಿ ಉಚಿತ ಆಹಾರ ಮತ್ತು ವಸ್ತ್ರ ಒದಗಿಸಲು ಫ್ರಿಜ್ ಮತ್ತು ಕಪಾಟು ವ್ಯವಸ್ಥೆಯನ್ನು ಮಾಡಲಾಗಿದ್ದು, ಅದನ್ನು ಸಾಂಕೇತಿಕವಾಗಿ ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ರವಿವಾರ ಉದ್ಘಾಟಿಸಿದರು.
ಬಿಷಪ್ಸ್ ಹೌಸ್ ಆವರಣದಲ್ಲಿ ಈಗಾಗಲೇ ಸಾರ್ವಜನಿಕರಿಗಾಗಿ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು 2015ರಲ್ಲಿ ಆರಂಭಿಸಲಾಗಿದ್ದು, ಅದು ಯಶಸ್ವಿಯಾಗಿ ಮುಂದುವರಿದಿದೆ. 2018ರಿಂದ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದಾಗಿ 2017ರ ಡಿ. 23ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಗಿತ್ತು. ಈ ಸೌಲಭ್ಯವನ್ನು ರವಿವಾರ ಈಸ್ಟರ್ ಹಬ್ಬದ ಕೊಡುಗೆಯಾಗಿ ಆರಂಭಿಸಲಾಗಿದೆ. ಆದರೆ ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ 15ರ ಬಳಿಕ ಈ ವ್ಯವಸ್ಥೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಯೋಜನೆಯನ್ನು ಉದ್ಘಾಟಿಸಿ ಆಶೀರ್ವಚನಗೈದ ಬಿಷಪ್ ಪಾವ್ಲ್ ಡಿ’ಸೋಜಾ ತಿಳಿಸಿದರು.
ನೀರು, ಆಹಾರ, ಬಟ್ಟೆ ಮತ್ತು ಆಶ್ರಯ- ಇವು ನಾಗರಿಕ ಬದುಕಿನ ಮೂಲ ಅಗತ್ಯಗಳು. ಬಡವರಿಗೆ ಮನೆ ಕಟ್ಟಿಸಿ ಕೊಡುವ ಯೋಜನೆಯನ್ನು ಧರ್ಮ ಪ್ರಾಂತದ ವತಿಯಿಂದ ಈಗಾಗಲೇ ನಡೆಸಲಾಗುತ್ತಿದೆ. 2012 ರಲ್ಲಿ 161 ಮನೆಗಳನ್ನು ಕಟ್ಟಿಸಲು ನೆರವು ಹಾಗೂ 2015ರಲ್ಲಿ 24 ಮನೆಗಳನ್ನು ಬಡವರಿಗೆ ಕಟ್ಟಿಸಿಕೊಡಲಾಗಿದೆ. ಆ ಬಳಿಕ ಬಿಷಪ್ಸ್ ಹೌಸ್ ಆವರಣದಲ್ಲಿ ಸಾರ್ವ ಜನಿಕ ಕುಡಿಯುವ ನೀರಿನ ಸೌಲಭ್ಯ ಹಾಗೂ ಇದೀಗ ಆಹಾರ ಮತ್ತು ಬಟ್ಟೆ ಒದಗಿಸುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಯೇಸು ಕ್ರಿಸ್ತರಿಗೆ ಬಡವರು, ಕಷ್ಟ ದಲ್ಲಿರುವವರು, ರೋಗಿಗಳು ಹತ್ತಿರ ವಾಗಿದ್ದು, ಅವರಿಗೆ ಸೇವೆ ಒದಗಿಸು ತ್ತಿದ್ದರು. ಈ ಸೇವಾ ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗು ವಂತೆ ಆದೇಶ ನೀಡಿದ್ದರು. ಅದನ್ನು ಕ್ರೈಸ್ತ ಧರ್ಮಸಭೆ ಮುಂದುವರಿಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.
ಅಕ್ಷಯ ಧಾಮ
ಈ ವ್ಯವಸ್ಥೆಯನ್ನು “ಅಕ್ಷಯ ಧಾಮ’ ಎಂದು ಹೆಸರಿಸಲಾಗಿದೆ. ಬಿಷಪ್ಸ್ ಹೌಸ್ ಆವರಣದಲ್ಲಿರುವ ಪ್ರಾರ್ಥನಾ ಮಂದಿರದ ಮುಂಭಾಗದ ಮೂಲೆ ಯಲ್ಲಿ ಆಹಾರ ಇರಿಸುವ ಫ್ರಿಜ್ ಮತ್ತು ಬಟ್ಟೆ ಇರಿಸಲು ಕಪಾಟು ವ್ಯವಸ್ಥೆ ಮಾಡಲಾಗಿದೆ. ದಾನ ಮಾಡಲು ಬಯಸು ವವರು ಕೂಡ ಇದರಲ್ಲಿ ಆಹಾರ ಮತ್ತು ಫಲವಸ್ತು ಹಾಗೂ ಬಟ್ಟೆಗಳನ್ನು ಇಡಬಹುದಾಗಿದೆ. ಆದರೆ ದಾನ ಮಾಡುವುದಕ್ಕಾಗಿಯೇ ತಯಾರಿಸಿದ ತಾಜಾ ಆಹಾರವನ್ನು ಹಾಗೂ ಹೊಸ ಬಟ್ಟೆಗಳನ್ನು ಮಾತ್ರ ಇರಿಸಬೇಕೆಂಬುದು ಧರ್ಮಪ್ರಾಂತದ ಉದ್ದೇಶವಾಗಿದೆ.
ಧರ್ಮಪ್ರಾಂತದ ಪ್ರಧಾನ ಗುರು ವಂ| ಡೆನ್ನಿಸ್ ಮೊರಾಸ್ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರ್ಸೆಲ್ ಮೊಂತೇರೊ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ| ರಿಚಾರ್ಡ್ ಕುವೆಲ್ಲೊ, ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಗಳಾದ ವಂ| ರವಿ ರುಡಾಲ್ಫ್ ಡೆ’ಸಾ, ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ| ಅಜಿತ್ ಮಿನೇಜಸ್, ಸಹಾಯಕ ಆಡಳಿತಾಧಿಕಾರಿ ವಂ| ಜೀವನ್ ಸಿಕ್ವೇರಾ, ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ಫ್ರಿಜ್ ಮತ್ತು ಕಪಾಟು ವ್ಯವಸ್ಥೆ ಮಾಡುವಲ್ಲಿ ಸಹಕರಿಸಿದ ರೇಮಂಡ್ ಡಿ’ಕುನ್ಹಾ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ| ವಿಲಿಯಂ ಮಿನೇಜಸ್ ಸ್ವಾಗತಿಸಿದರು. ಪಾಲನಾ ಪರಿಷತ್ನ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ ವಂದಿಸಿದರು.