ಹಸಿ ತ್ಯಾಜ್ಯಕ್ಕೆ ಹಸುರು-ಒಣ ತ್ಯಾಜ್ಯಕ್ಕೆ ನೀಲಿ ಬಣ್ಣದ ಬಿನ್
ಹಸಿ ಕಸ ಪ್ಲಾಸ್ಟಿಕ್ನಲ್ಲಿ ನೀಡುವಂತಿಲ್ಲ; ಕಸದ ಬುಟ್ಟಿಯಲ್ಲೇ ನೀಡಲು ಪಾಲಿಕೆ ಸೂಚನೆ
Team Udayavani, Oct 13, 2020, 4:40 AM IST
ಮಹಾನಗರ: ಮಂಗಳೂರು ಪಾಲಿಕೆಯಿಂದ ತ್ಯಾಜ್ಯ ಸಂಗ್ರಹ ಮಾಡುವ ವಾಹನಗಳಿಗೆ ಸಾರ್ವಜನಿಕರು ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕದೆ ಕಸದ ಬುಟ್ಟಿಯ ಮುಖಾಂತರವೇ ಪ್ರತ್ಯೇಕವಾಗಿ ನೀಡಿ ಸಹಕರಿಸುವಂತೆ ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೂಚಿಸಿದ್ದಾರೆ.
ಇದಕ್ಕಾಗಿ, ನಗರದ ಎಲ್ಲ ಉದ್ದಿಮೆ ದಾರರು ತಮ್ಮ ಉದ್ದಿಮೆ ಸ್ಥಳದ ಮುಂಭಾಗ ದಲ್ಲಿ (ಹಸಿ ತ್ಯಾಜ್ಯಕ್ಕೆ) ಹಸುರು ಬಣ್ಣದ ಬಿನ್ ಹಾಗೂ (ಒಣ ತ್ಯಾಜ್ಯಕ್ಕೆ) ನೀಲಿ ಬಣ್ಣದ ಬಿನ್ಗಳನ್ನು ಕಡ್ಡಾಯವಾಗಿ ಹಾಗೂ ತಮ್ಮ ಉದ್ದಿಮೆಯಲ್ಲಿ “ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮತ್ತು ಮಾರಾಟ ಮಾಡುವುದಿಲ್ಲ’ ಎಂಬ ನಾಮಫಲಕವನ್ನು ಅಳವಡಿಸಬೇಕಾಗಿದೆ. ಈ ನಿಯಮ ಪಾಲಿಸದಿದ್ದರೆ ಅಂತಹ ಉದ್ದಿಮೆದಾರರ ಪರವಾನಿಗೆಯನ್ನು ರದ್ದುಗೊಳಿಸುವ ಅಥವಾ ನವೀಕರಣಗೊಳಿಸದಂತೆ ಅಥವಾ ತ್ಯಾಜ್ಯವನ್ನು ಸಂಗ್ರಹಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್, ಬೃಹತ್ ತ್ಯಾಜ್ಯ ಉತ್ಪಾದಕರು, ಮಾಲ್, ಉದ್ದಿಮೆದಾರರು ಸ್ವಂತ ತ್ಯಾಜ್ಯ ಸಂಸ್ಕರಣೆ ಕಾಂಪೋಸ್ಟಿಂಗ್ ಘಟಕವನ್ನು ಕಡ್ಡಾಯವಾಗಿ ನಿರ್ಮಿಸು ವಂತೆ, ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ ಸಂಸ್ಕರಣೆ ಮಾಡುವಂತೆ ಸೂಚಿಸಲಾಗಿದೆ. ಕಾಂಪೋಸ್ಟಿಂಗ್ ಘಟಕ ನಿರ್ಮಿಸುವ ತನಕ ತಮ್ಮ ಸಂಸ್ಥೆಯಲ್ಲಿ ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿಕಸ, ಒಣಕಸವಾಗಿ ವಿಂಗಡಿಸಿ ನೀಡಬೇಕಾಗಿದೆ.
ತ್ಯಾಜ್ಯ ವಿಂಗಡಣೆ ಮಾಡದಿದ್ದರೆ ಕಸ ಸಂಗ್ರಹ ಸ್ಥಗಿತ
ಸಣ್ಣ ಹಾಗೂ ಸ್ವಂತ ಪ್ರತ್ಯೇಕ ಮನೆ ಯನ್ನು ಹೊಂದಿದವರು ಈ ವ್ಯವಸ್ಥೆಯ ಸಂಪೂರ್ಣ ಅರಿವು ಮೂಡುವ ತನಕ ತ್ಯಾಜ್ಯ ವಿಂಗಡಣೆ ವ್ಯವಸ್ಥೆಗೆ ಹೊಂದಿ ಕೊಳ್ಳಲು ಒಂದು ವಾರಗಳ ವಿನಾಯಿತಿ ನೀಡಲಾಗಿದೆ. ಆ ಬಳಿಕವೂ ತ್ಯಾಜ್ಯ ವಿಂಗಡಿ ಸದಿದ್ದರೆ ಅಂತಹವರಿಂದ ಮಹಾನಗರ ಪಾಲಿಕೆಯು ಕಸ ಸ್ವೀಕರಿಸುವುದಿಲ್ಲ. ತ್ಯಾಜ್ಯ ವಿಂಗಡಣೆ ಮಾಡದವರಿಗೆ ಹಾಗೂ ರಸ್ತೆ ಬದಿಯಲ್ಲಿ ಬಿಸಾಡುವವರಿಗೆ 1,000 ರೂ.ಗಳಿಂದ 25,000 ರೂ.ವರೆಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.