ಆಹಾರ ಇಲಾಖೆ, ಪೊಲೀಸ್ ದಾಳಿ: ವಿಮಾನದ ಪೆಟ್ರೋಲ್ಗೆ ಸೀಮೆಎಣ್ಣೆ ಕಲಬೆರಕೆ ಪತ್ತೆ
Team Udayavani, Nov 8, 2022, 12:34 AM IST
ಸುರತ್ಕಲ್: ವಿಮಾನಗಳಿಗೆ ಬೇಕಾಗುವ ದುಬಾರಿ ಪೆಟ್ರೋಲ್ಗೆ ಸೀಮೆಎಣ್ಣೆ ಕಲಬೆರಕೆ ಮಾಡಿ ಪೆಟ್ರೋಲ್ ಕದಿಯುತ್ತಿದ್ದ ಸುರತ್ಕಲ್ ಸಮೀಪದ ಬಾಳ ಪ್ರದೇಶಕ್ಕೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಪೆಟ್ರೋಲ್ 2ಟ್ಯಾಂಕರ್, ಪಿಕಪ್ ಸಹಿತ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಸಂಜೆ ಮಾಹಿತಿಯ ಮೇರೆಗೆ ಬಾಳ ಒಟ್ಟೆಕಾಯರ್ ತಿರುವು ಬಳಿ ದಾಳಿ ನಡೆಸಿದಾಗ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಒಂದು ಪತ್ತೆಯಾಗಿದೆ. ಎರಡು ಟ್ಯಾಂಕರ್ಗಳಿಂದ ಪೆಟ್ರೋಲನ್ನು ಭೂಗತ ಟ್ಯಾಂಕ್ಗೆ ತುಂಬಿಸಿ ಬಳಿಕ ಟ್ಯಾಂಕರ್ಗೆ ಸೀಮೆಎಣ್ಣೆಯನ್ನು ರಾಸಾಯನಿಕ ಬಳಸಿ ಮಿಶ್ರಣ ಮಾಡಲಾಗುತ್ತಿತ್ತು. ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಈ ಹಿಂದೆ ಐಜಿಪಿ ಸತ್ಯನಾರಾಯಣ ಅವರು 2012ರಲ್ಲಿ ಮಧ್ಯರಾತ್ರಿ ರಹಸ್ಯ ದಾಳಿ ನಡೆಸಿ ಇಂತಹ ದಂಧೆಯನ್ನು ಪತ್ತೆ ಹಚ್ಚಿ ಮಟ್ಟ ಹಾಕಿದ್ದರು. ಇದೀಗ ಮತ್ತೆ ಪೆಟ್ರೋಲ್ ಕಲಬೆರಕೆ ದಂಧೆ ಈ ಭಾಗದಲ್ಲಿ ಅವ್ಯಾಹತವಾಗಿದ್ದು, ಕೆಲವೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಆಹಾರ ಇಲಾಖೆಯ ಮಾಣಿಕ್ಯ, ಚೇತನ್, ಉಪತಹಶೀಲ್ದಾರ್ ನವೀನ್, ಸುರತ್ಕಲ್ ಎಸ್ಐ ಪುನೀತ್ ಗಾಂವ್ಕರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷಾಂತರ ಮೌಲ್ಯದ ಸೊತ್ತುಗಳು ಸೀಜ್
40 ಲಕ್ಷ ರೂ. ಮೌಲ್ಯದ 2 ಟ್ಯಾಂಕರ್, 12 ಲಕ್ಷ ರೂ.ಮೌಲ್ಯದ ಪಿಕಪ್, ಲಕ್ಷಾಂತರ ರೂ. ಮೌಲ್ಯದ 16 ಸಾವಿರ ಲೀಟರ್ ಎಟಿಎಫ್ ಪೆಟ್ರೋಲ್ ಹಾಗೂ ಡ್ರಮ್ಗಳು, ಒಂದು ಜನರೇಟರ್ ಅನ್ನು ವಶಕ್ಕೆ ಪಡೆಯಲಾಗಿದೆ.